ಯಾದಗಿರಿ: ‘ವೆರಿಗುಡ್ ತಗೊಳ್ಳಿ ಗುಲಾಬಿ..’ ‘ಏಕೆ ಹೆಲ್ಮೆಟ್ ಹಾಕಿಲ್ಲ. ನೀವ್ ಸತ್ರೆ ಹೆಂಡ್ತಿ ಮಕ್ಳ ಗತಿ? ಇನ್ಮುಂದೆ ಹೆಲ್ಮೆಟ್ ಹಾಕಬೇಕು ತಿಳಿತಾ?’ ನಗರದ ಸುಭಾಷ್ ವೃತ್ತದಲ್ಲಿ ರಸ್ತೆಮಧ್ಯೆ ನಿಂತು ರಸ್ತೆ ಸುರಕ್ಷಾ ಸಪ್ತಾಹ ಅಂಗವಾಗಿ ಸೋಮವಾರ ಈಶಾನ್ಯ ವಲಯ ಐಜಿಪಿ ಅಲೋಕಕುಮಾರ್ ಜನರಿಗೆ ಅರಿವು ಮೂಡಿಸಿದ ಪರಿ ಇದು.
ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ, ಸಮವಸ್ತ್ರ ಧರಿಸದ ಆಟೊ ಚಾಲಕರಿಗೆ, ಡಿಎಲ್ ಇಲ್ಲದವರಿಗೆ, ಬೈಕ್ ಮೇಲೆ ಇಬ್ಬರಿಗೂ ಹೆಚ್ಚು ಜನರು ಪ್ರಯಾಣಿಸುವವರನ್ನು ಹಿಡಿದು ದಂಡ ವಿಧಿಸಿದರು.
‘ರಸ್ತೆ ಸುರಕ್ಷತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಪೊಲೀಸ್ ಇಲಾಖೆ ನಿರಂತರ ಕೈಗೊಳ್ಳಬೇಕು. ಜತೆಗೆ ನಿಯಮ ಉಲ್ಲಂಘಿಸುವವರನ್ನು ಕಡ್ಡಾಯವಾಗಿ ದಂಡ ವಿಧಿಸಬೇಕು. ಈ ಪ್ರಕ್ರಿಯೆ ಕೇವಲ ಮೂರು ತಿಂಗಳು ನಡೆದರೆ ಸಾಕು ಜನರಿಗೆ ಹೆಲ್ಮೆಟ್ ಧರಿಸುವುದು ರೂಢಿಗತವಾಗುತ್ತದೆ. ನಂತರ ರಸ್ತೆ ಅವಘಡಗಳಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗುತ್ತದೆ’ ಎಂದು ಅಲೋಕ್ ಕುಮಾರ ಸಿಬ್ಬಂದಿಗೆ ಸೂಚಿಸಿದರು.
ಒಟ್ಟು 200 ಪ್ರಕಣ ದಾಖಲು: ‘ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಹೆಲ್ಮೆಟ್ ಧರಿಸದ ದ್ವಿಚಕ್ರ ಸವಾರರು ಸೇರಿದಂತೆ ಒಂದೇ ದಿನದಲ್ಲಿ ಒಟ್ಟು 200 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು ₹20 ಸಾವಿರ ದಂಡ ವಿಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದರು.
ಸಂಚಾರ ಪೊಲೀಸ್ ಸಿಪಿಐ ಹರಿಬಾ ಜಮಾದಾರ, ಸಿಪಿಐ ಮೌನೇಶ್ವರ ಪಾಟೀಲ, ನಗರಠಾಣೆ ಪಿಎಸ್ಐ ಮಹಾಂತೇಶ ಸಜ್ಜನ್, ಸಂಚಾರಿ ಪಿಎಸ್ಐ ಸುಖದೇವ ಬೆಳಕೇರಿ, ಸಿಬ್ಬಂದಿ ರವಿ ರಾಠೋಡ, ಸಂಜುಕುಮಾರ ಪತಂಗೆ, ಜಗದೀಶ ಗುಳಗಿ, ಲಕ್ಷ್ನಣ ರಾಠೋಡ ಇದ್ದರು.