ಗದಗ: ಗುಜರಾತ್ ಚುನಾವಣೆ ಪ್ರಚಾರದ ದೃಷ್ಠಿಯಿಂದ ಯುದ್ಧ ಭೂಮಿಯಾಗಿತ್ತು. ಗುಜರಾತ್ ಅನ್ನು ಕಾಂಗ್ರೆಸ್ ಮುಕ್ತ ಮಾಡಲು ಪ್ರಧಾನಿ ಮೋದಿ, ಅಮಿತ್ ಷಾ ಎಲ್ಲ ರೀತಿಯ ಪ್ರಯತ್ನ ಮಾಡಿದರು. ಆದರೆ, ಕಾಂಗ್ರೆಸ್ ಅಲ್ಲಿ ಕಳೆದ ಬಾರಿಗಿಂತ ಶೇ 30ರಷ್ಟು ಶಕ್ತಿ ಹೆಚ್ಚಿಸಿಕೊಂಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗುಜರಾತ್ನಲ್ಲಿ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುವ ಕೆಲಸವನ್ನು ಬಿಜೆಪಿ ಮುಖಂಡರು ಮಾಡಿದರು. ಆದರೆ, ಯಾರೇ ಅಹಂಕಾರ ತೋರಿಸಿದರೂ, ಅವರಿಗೆ ತಕ್ಕ ಶಾಸ್ತಿ ಮಾಡ್ತೀವಿ ಎಂಬ ಎಚ್ಚರಿಕೆಯನ್ನೂ ಮತದಾರರು ನೀಡಿದ್ದಾರೆ’ ಎಂದರು.
‘ಗುಜರಾತ್ನಲ್ಲಿ ಕಾಂಗ್ರೆಸ್ ಶಕ್ತಿ ಹೆಚ್ಚಲು ಪಕ್ಷದ ನೂತನ ಸಾರಥಿ ರಾಹುಲ್ ಗಾಂಧಿ ಕಾರಣ. ಹಿಮಾಚಲ ಪ್ರದೇಶದಲ್ಲಿ ಸೋಲಿನ ಕುರಿತು ಆತ್ಮವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.