ಮೈಸೂರು: ಇಲ್ಲಿನ ಉದಯಗಿರಿ ಸಿಗ್ನಲ್ ಬಳಿ ನಿರ್ಮಾಣವಾಗಬೇಕಿದ್ದ ಇಂದಿರಾ ಕ್ಯಾಂಟೀನ್ ಸ್ಥಳಾಂತರ ಮಾಡಿದ್ದನ್ನು ಖಂಡಿಸಿ ಪಾಲಿಕೆ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.
ಉದ್ದೇಶಿತ ಸ್ಥಳದಲ್ಲಿ 5 ವಾರ್ಡ್ಗಳು ಸೇರುವುದರಿಂದ ಬಹಳಷ್ಟು ಜನರಿಗೆ ಅನುಕೂಲವಾಗುತ್ತದೆ. ಜತೆಗೆ, ಈ ಭಾಗದಲ್ಲಿ ಕೂಲಿ ಕಾರ್ಮಿಕರು, ದಿನಗೂಲಿ ನೌಕರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರಿಗೆಲ್ಲ ಇಂದಿರಾ ಕ್ಯಾಂಟೀನ್ನಿಂದ ಪ್ರಯೋಜನವಾಗುತ್ತದೆ. ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸ್ಥಳಾಂತರ ಮಾಡಬೇಕು ಎಂದುಕೊಂಡಿರುವ ಜಾಗದಲ್ಲಿ ಮತ್ತೊಂದು ಇಂದಿರಾ ಕ್ಯಾಂಟೀನ್ ತೆರೆಯಿರಿ. ಆದರೆ, ಇಲ್ಲಿನ ಕ್ಯಾಂಟೀನ್ ಅನ್ನು ರದ್ದುಗೊಳಿಸಬಾರದು ಎಂದು ಅವರು ಆಗ್ರಹಿಸಿದರು. ಇದರ ಹಿಂದೆ ಭೂಮಾಫಿಯಾದ ಕೈವಾಡ ಇದೆ. ಉದ್ದೇಶಿತ ಜಾಗ ಈ ಹಿಂದೆ ವಿವಾದದಲ್ಲಿತ್ತು. ಇದರಿಂದಾಗಿಯೇ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಮಧ್ಯೆ ಪ್ರತಿಭಟನಾಕಾರರೊಬ್ಬರು ಕ್ರೇನ್ ಏರಿ ನಿಂತು ಘೋಷಣೆಗಳನ್ನು ಕೂಗಿದ್ದು ಆತಂಕ ತಂದೊಡ್ಡಿತು. ಪೊಲೀಸರು ಅವರ ಮನವೊಲಿಸಿ ಕೆಳಗಿಳಿಸುವಲ್ಲಿ ಸಫಲರಾದರು.
ನಂತರ, ಸ್ಥಳಕ್ಕೆ ಬಂದ ಪಾಲಿಕೆ ಅಧಿಕಾರಿಗಳು ಸ್ಥಳಾಂತರ ಮಾಡುವುದಿಲ್ಲ ಎಂದು ಭರವಸೆ ನೀಡಿದ ಬಳಿಕ ಕಾರ್ಯಕರ್ತರು ಪ್ರತಿಭಟನೆಯನ್ನು ವಾಪಸ್ ಪಡೆದರು. ಪಾಲಿಕೆ ಸದಸ್ಯರಾದ ಅಯೂಬ್ಖಾನ್, ಸ್ವಾಮಿ, ಇಂದಿರಾ ಮಹೇಶ್ ಸೇರಿದಂತೆ ನೂರಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿದ್ದರು.