ಮೂಡಿಗೆರೆ: ತಾಲ್ಲೂಕಿನ ಬಡವನದಿಣ್ಣೆ ಸುತ್ತಮುತ್ತಲ ಪ್ರದೇಶದಲ್ಲಿ ಮಂಗಳವಾರ ಕಾಡಾನೆಗಳು ಕಾಣಿಸಿಕೊಂಡಿದ್ದು, ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.ಮಂಗಳವಾರ ಮುಂಜಾನೆ ಗ್ರಾಮಕ್ಕೆ ಕೆಂಜಿಗೆ ಭಾಗದಿಂದ ಬಂದಿರಬಹುದು ಎಂದು ಶಂಕಿಸಿರುವ ಎರಡು ಕಾಡಾನೆಗಳು, ಗ್ರಾಮದ ಲಕ್ಷ್ಮಣ ಗೌಡ ಎಂಬುವವರ ಕಾಫಿ ತೋಟದಲ್ಲಿ ತಿರುಗಾಡಿ ಫಸಲುಭರಿತ ಗಿಡಗಳನ್ನು ತುಳಿದು ಹಾನಿಗೊಳಿಸಿವೆ. ಗ್ರಾಮದ ಪರಮೇಶ್, ಮಹೇಶ್ ಸೇರಿದಂತೆ ಎಂಟಕ್ಕೂ ಅಧಿಕ ರೈತರ ಭತ್ತದ ಗದ್ದೆಗಳಲ್ಲಿ ತಿರುಗಾಡಿ, ಕಟಾವಿಗೆ ಸಿದ್ಧವಾಗಿದ್ದ ಭತ್ತದ ಪೈರನ್ನು ತಿಂದು, ತುಳಿದು ಹಾನಿಗೊಳಿಸಿವೆ.