ಧಾರವಾಡ: ತುಮಕೂರು ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘ ಕೊಡಮಾಡುವ ಪ್ರಸಕ್ತ ಸಾಲಿನ ‘ಸಿದ್ಧಗಂಗಾ ಶ್ರೀ’ ಪ್ರಶಸ್ತಿಯನ್ನು ಚೆಂಬೆಳಕಿನ ಕವಿ ಡಾ.ಚೆನ್ನವೀರ ಕಣವಿ ಅವರಿಗೆ ಮಂಗಳವಾರ ಧಾರವಾಡದ ಅವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಅನಾರೋಗ್ಯದ ಹಿನ್ನೆಲೆಯಲ್ಲಿ ಡಿ.17 ರಂದು ತುಮಕೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಣವಿ ಅವರು ಪಾಲ್ಗೊಂಡಿರಲಿಲ್ಲ. ಮಠದ ಪರವಾಗಿ ಇಲ್ಲಿಗೆ ಆಗಮಿಸಿದ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ಸಂಘದ ಕಾರ್ಯದರ್ಶಿ ಡಾ.ಕೆ.ಎಚ್.ಶಿವರುದ್ರಯ್ಯ, ಎಚ್.ವಿ.ವೀರಭದ್ರಯ್ಯ, ಎಂ.ರೇಣುಕಾರಾಧ್ಯ, ಶಿವಶಂಕರ, ಸದಾಶಿವಯ್ಯ ಅವರು ಶ್ರೀಮಠದ ಪರವಾಗಿ ಕಣವಿ ಅವರನ್ನು ಸನ್ಮಾನಿಸಿದರು. ಪ್ರಶಸ್ತಿಯು ₹ 1 ಲಕ್ಷ ನಗದು, ಸ್ಮರಣಿಕೆ ಹೊಂದಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕವಿ ಚೆನ್ನವೀರ ಕಣವಿ, ‘ಕವಿ ಡಾ.ಜಿ.ಎಸ್. ಶಿವರುದ್ರಪ್ಪನವರೊಂದಿಗೆ ನನ್ನನ್ನು ಹೋಲಿಸಲಾಗುತ್ತದೆ. ಅವರಿಗೆ ರಾಷ್ಟ್ರಕವಿ ಸ್ಥಾನ ನೀಡಿ ಗೌರವಿಸಲಾಗಿದೆ. ಅದರಂತೆ ನನಗೂ ಕೂಡಾ ರಾಷ್ಟ್ರಕವಿ ಸ್ಥಾನ ನೀಡಬೇಕು ಎನ್ನುವ ಅಪೇಕ್ಷೆ ಹಲವರಿಗಿದೆ.
ಆದರೆ, ರಾಷ್ಟ್ರಕವಿ ಸ್ಥಾನ ನನಗೆ ಬೇಕಿಲ್ಲ. ಈಗ ದೊರಕಿರುವ ’ಸಿದ್ಧಗಂಗಾ ಶ್ರೀ’ ಪ್ರಶಸ್ತಿ ಪರಮೋಚ್ಚವಾದದ್ದು. ಇದು ನನಗೆ ಸಂತೋಷ, ಸಮಾಧಾನ ತಂದಿದೆ’ ಎಂದರು. ಶಾಂತಾದೇವಿ ಕಣವಿ, ಡಾ.ಗುರುಲಿಂಗ ಕಾಪಸೆ, ಡಾ.ಅಲ್ಲಮಪ್ರಭು ಬೆಟದೂರ, ಡಾ.ಶಶಿಧರ ತೋಡ್ಕರ್, ಶಂಕರ ಹಲಗತ್ತಿ, ಕಣವಿ ಕುಟುಂಬದ ಸದಸ್ಯರು ಇದ್ದರು.