ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಕೇಂದ್ರ ಉದ್ಘಾಟನೆ 25ರಂದು

Last Updated 20 ಡಿಸೆಂಬರ್ 2017, 8:30 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಲಕ್ಷ್ಮೇಶ್ವರವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು ಎಂಬ ಬಹು ದಿನದ ಬೇಡಿಕೆ ಈಡೇರುವ ಕಾಲ ಕೂಡಿ ಬಂದಿದೆ. ಡಿ. 25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಲ್ಲೂಕು ಕೇಂದ್ರ ಉದ್ಘಾಟನೆ ಮಾಡಲಿದ್ದಾರೆ.

ನಾಲ್ಕು ದಶಕಗಳಿಂದ ಲಕ್ಷ್ಮೇಶ್ವರವನ್ನು ತಾಲ್ಲೂಕು ಕೇಂದ್ರವನ್ನಾಗಿಸಬೇಕು ಎಂದು ಹಲವು ಜನಪ್ರತಿನಿಧಿಗಳು, ಸ್ಥಳೀಯ ನಿವಾಸಿಗಳು ತಾಲ್ಲೂಕಾ ರಚನಾ ಹೋರಾಟ ಸಮಿತಿ ರಚಿಸಿ ದಶಕಗಳಿಂದ ಹೋರಾಟ ನಡೆಸಿದ್ದರು. 1975ರ ವಾಸು ದೇವರಾವ್ ಸಮಿತಿ, 1987ರ ಹುಂಡೇಕಾರ ಸಮಿತಿ, ಮತ್ತು 2009ರ ಎಂ.ಬಿ. ಪ್ರಕಾಶ ಸಮಿತಿಗಳು ಲಕ್ಷ್ಮೇಶ್ವರ ತಾಲ್ಲೂಕು ಕೆಂದ್ರವಾಗಲು ಅರ್ಹತೆ ಹೊಂದಿದೆ ಎಂದು ವರದಿ ಸಲ್ಲಿಸಿದ್ದವು. ಇದಕ್ಕೆ ಪೂರಕವಾಗಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಪಟ್ಟಣದಲ್ಲಿ ವಿಶೇಷ ತಹಶೀಲ್ದಾರ್ ಕಚೇರಿ ಹಾಗೂ ಬಿಜೆಪಿ– ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಉಪನೋಂದಣಾಧಿಕಾರಿ ಕಾರ್ಯಾಲಯ ಆರಂಭಿಸಲು ಒಪ್ಪಿಗೆ ನೀಡಲಾಗಿತ್ತು.

ಲಕ್ಷ್ಮೇಶ್ವರ ತಾಲ್ಲೂಕು ಸೇರುವ ಗ್ರಾಮಗಳು: 40ಕ್ಕೂ ಹೆಚ್ಚು ಗ್ರಾಮಗಳು ಲಕ್ಷ್ಮೇಶ್ವರ ತಾಲ್ಲೂಕು ವ್ಯಾಪ್ತಿಗೆ ಒಳಪಡಲಿವೆ. ಇವುಗಳ ಪೈಕಿ ಸೂರಣಗಿ ಹೋಬಳಿ
ಆಗಲಿದೆ. 2014ರಲ್ಲಿ ನಡೆದ ಜನಪ್ರತಿನಿಧಿಗಳು, ಉಪವಿಭಾಗಾಧಿಕಾರಿ,ತಾಲ್ಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಲಕ್ಷ್ಮೇಶ್ವರ ತಾಲ್ಲೂಕು ವ್ಯಾಪ್ತಿ ಸೇರುವ ಗ್ರಾಮ, ಹೋಬಳಿ, ಭೌಗೋಳಿಕ ಕ್ಷೇತ್ರ, ಜನಸಂಖ್ಯೆ ವಿಂಗಡಿಸಿ ವರದಿ ಸಿದ್ಧಪಡಿಸಲಾಗಿತ್ತು.

ಆ ವರದಿಯ ಪ್ರಕಾರ ಲಕ್ಷ್ಮೇಶ್ವರ ತಾಲ್ಲೂಕು ವ್ಯಾಪ್ತಿಯಲ್ಲಿ ದೇಸಾಯಿಬಣ, ಪೇಠಬಣ, ಬಸ್ತಿಬಣ, ಹಿರೇಬಣ, ಹುಲಗೇರಿ ಬಣ, ಮಾಗಡಿ, ಗೊಜನೂರ, ರಾಮಗೇರಿ, ಮಾಡಳ್ಳಿ, ಯತ್ತಿನಹಳ್ಳಿ, ಯಳವತ್ತಿ, ಹೊಳಲಾಪುರ, ಅಕ್ಕಿಗುಂದ, ಶೆಟ್ಟಿಕೇರಿ, ಕುಂದ್ರಳ್ಳಿ, ಬಟ್ಟೂರ, ಕೊಂಡಿಕೊಪ್ಪ, ಆದ್ರಳ್ಳಿ, ಸೋಗಿವಾಳ, ಹಿರೇಮಲ್ಲಾಪುರ, ಹರದಗಟ್ಟಿ, ಉಳ್ಳಟ್ಟಿ,
ಶ್ಯಾಬಳ, ಒಡೆಯರಮಲ್ಲಾಪುರ, ಗುಲಗಂಜಿಕೊಪ್ಪ, ಗೋವನಾಳ, ಶಿಗ್ಲಿ, ದೊಡ್ಡೂರ, ಉಂಡೇನಹಳ್ಳಿ, ಅಮರಾಪುರ, ಹುಲ್ಲೂರ, ಅಡರಕಟ್ಟಿ, ಪುಟಗಾಂವ್‌ ಬಡ್ನಿ, ಸಂಕದಾಳ, ನಾದಿಗಟ್ಟಿ, ನೆಲೂಗಲ್ಲ, ಸುವರ್ಣಗಿರಿ, ಸೂರಣಗಿ, ಯಲ್ಲಾಪುರ, ಬಾಲೆಹೊಸೂರ ಗ್ರಾಮಗಳು ಸೇರ್ಪಡೆ ಆಗಬೇಕು. ಆದರೆ, ಈ ಬಗ್ಗೆ ಕೆಲ ಭಿನ್ನಾಭಿಪ್ರಾಯಗಳಿದ್ದು, ಈ ಕುರಿತು ಪೂರ್ಣ ಪ್ರಮಾಣದ ಸ್ಪಷ್ಟತೆ ಲಭಿಸಿಲ್ಲ.

ಕಾರ್ಯನಿರ್ವಹಿಸುತ್ತಿರುವ ಕಚೇರಿಗಳು: ಲಕ್ಷ್ಮೇಶ್ವರದಲ್ಲಿ ಈಗಾಗಲೇ ಹಿರಿಯಹಾಗೂ ಕಿರಿಯ ಸಿವಿಲ್ ನ್ಯಾಯಾಲಯಗಳು, ವಿಶೇಷ ತಹಶೀಲ್ದಾರ್, ಉಪನೋಂದಣಾಧಿಕಾರಿ ಕಚೇರಿಗಳು, ನಗರ ಭೂಮಾಪನ ಇಲಾಖೆ, ಕೃಷಿ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ, ಸಾರಿಗೆ ಘಟಕ, ಪಶು ಆಸ್ಪತ್ರೆ, ಪೊಲೀಸ್‌ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ನೂತನ ತಾಲ್ಲೂಕು ಕಾರ್ಯನಿರ್ವಹಣೆ ಆರಂಭಿಸಿದರೆ ಒಟ್ಟು 28 ಇಲಾಖೆಗಳ ಕಚೇರಿ ತೆರೆಯುವ ಉದ್ದೇಶವಿದೆ.

ಈಗಿರುವ ಕೆಲ ಇಲಾಖಾ ಕಚೇರಿಗಳು ಸ್ವಂತ ಕಟ್ಟಡದಲ್ಲಿವೆ. ಇನ್ನೂ 12ರಿಂದ 15 ಇಲಾಖೆಗಳ ಕಚೇರಿ ಸ್ಥಾಪನೆಗೆ ಸ್ಥಳಾವಕಾಶ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಖಾಲಿ ಇರುವ ಸರ್ಕಾರಿ ಕಟ್ಟಡಗಳು ಹಾಗೂ ಬಾಡಿಗೆ ಕಟ್ಟಡಗಳನ್ನು ಗುರುತಿಸಲಾಗಿದೆ. ಸವಣೂರು ರಸ್ತೆಯಲ್ಲಿರುವ ರೈತಭವನದಲ್ಲಿ ತಹಶೀಲ್ದಾರ್ ಕಚೇರಿ ಆರಂಭವಾಗಲಿದ್ದು ಕಟ್ಟಡಕ್ಕೆ ಸುಣ್ಣಬಣ್ಣ ಬಳಿಯುವ ಕೆಲಸ ಸಾಗಿದೆ.

‘ಲಕ್ಷ್ಮೇಶ್ವರ ತಾಲ್ಲೂಕು ಕೇಂದ್ರವಾಗುವ ನಿಟ್ಟಿನಲ್ಲಿ ಹಲವರ ತ್ಯಾಗ, ಪರಿಶ್ರಮವಿದೆ’ ಎಂದು ಮಾಜಿ ಶಾಸಕ ಹಾಗೂ ಲಕ್ಷ್ಮೇಶ್ವರ ತಾಲ್ಲೂಕು ಹೋರಾಟ ಸಮಿತಿ ಗೌರವಾಧ್ಯಕ್ಷ ಗಂಗಣ್ಣ ಮಹಾಂತಶೆಟ್ಟರ ಹಾಗೂ ಮಾಜಿ ಶಾಸಕ ಮತ್ತು ಹೋರಾಟ ಸಮಿತಿ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ ಹೇಳಿದರು.

‘ಲಕ್ಷ್ಮೇಶ್ವರ ತಾಲ್ಲೂಕು ಕೇಂದ್ರ ಎಂದು ಘೋಷಣೆ ಆಗಿದೆ. ಆದರೆ ತಾಲ್ಲೂಕು ಕೇಂದ್ರದ ಸಿದ್ಧತೆ ಕುರಿತಂತೆ ಮೇಲಧಿಕಾರಿಗಳಿಂದ ಇನ್ನೂ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದ ನಂತರ ಸಿದ್ಧತೆ ಆರಂಭಿಸಲಾಗುವುದು’ ಎಂದು ತಹಶೀಲ್ದಾರ್ ಎ.ಡಿ. ಅಮರವಾದಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT