ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರು ರೈತರಿಗೆ 5 ಗ್ರಾಂ ಚಿನ್ನ

ಹತ್ತು ದಿನ ನಡೆದ ದನಗಳ ಜಾತ್ರೋತ್ಸವಕ್ಕೆ ತೆರೆ; ಉತ್ಸವಕ್ಕೆ ನಗರಸಭೆ ಮೈದಾನ ಮೀಸಲು
Last Updated 21 ಡಿಸೆಂಬರ್ 2017, 7:01 IST
ಅಕ್ಷರ ಗಾತ್ರ

ಹಾಸನ: ಸಂತೆಪೇಟೆ ನಗರಸಭೆ ಮೈದಾನವನ್ನು ದನಗಳ ಜಾತ್ರೆ ನಡೆಸಲು ಶಾಶ್ವತವಾಗಿ ಮೀಸಲಿಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಎಚ್‌.ಎಸ್‌. ಅನಿಲ್‌ ಕುಮಾರ್‌ ಹೇಳಿದರು.

ಸಂತೆಪೇಟೆ ನಗರಸಭೆ ಮೈದಾನದಲ್ಲಿ ಆಯೋಜಿಸಿದ್ದ ದನಗಳ ಜಾತ್ರೆಯಲ್ಲಿ ಉತ್ತಮ ಎತ್ತು ಸಾಕಿದ ರೈತರಿಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮುಂದಿನ ನಗರಸಭೆ ಸಾಮಾನ್ಯ ಸಭೆಯಲ್ಲಿ ಜಾಗ ಮೀಸಲಿಡುವ ಬಗ್ಗೆ ಸದಸ್ಯರ ಒಪ್ಪಿಗೆ ಪಡೆಯಲಾಗುವುದು. 14ನೇ ಹಣಕಾಸು ಯೋಜನೆಯಡಿ ಮೈದಾನದ ಸುತ್ತ ₹ 1 ಕೋಟಿ ಅನುದಾನದಲ್ಲಿ ಕಾಂಪೌಂಡ್ ನಿರ್ಮಿಸಿ, ಪ್ರವೇಶ ದ್ವಾರಕ್ಕೆ ದನಗಳ ಜಾತ್ರೆ ನಡೆಯುವ ಸ್ಥಳ ಎಂದು ನಾಮಕರಣ ಮಾಡಲಾಗುವುದು. ಜಾತ್ರೆ ನಡೆಯುವುದರಿಂದ ಮಕ್ಕಳಿಗೂ ದನಗಳ ಬಗ್ಗೆ ಮಾಹಿತಿ ಸಿಗುತ್ತದೆ. ಅನೇಕ ಮಕ್ಕಳಿಗೆ ಹಾಲು ಎಲ್ಲಿಂದ ಬರುತ್ತದೆ ಎಂಬ ಮಾಹಿತಿಯೇ ಇಲ್ಲ. ಕೆಎಂಎಫ್‌ ಹಾಲು ನೀಡುತ್ತದೆ ಎಂದು ಉತ್ತರಿಸುತ್ತಾರೆ ಎಂದರು.

ರೈತರ ಸಭೆ ಕರೆದು, ಪ್ರತಿ ಮಂಗಳವಾರ ದನಗಳ ಸಂತೆ ನಡೆಸಲು ಯಾವ ಸೌಲಭ್ಯ ನೀಡಬೇಕು ಎಂಬ ಸಲಹೆ ಪಡೆದು, ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಎಂದು ಭರವಸೆ ನೀಡಿದರು.

ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, ಕಳೆದ ವರ್ಷಕ್ಕಿಂತ ಈ ಬಾರಿ ಜಾತ್ರೆ ಯಶಸ್ವಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೋರಿ ಮತ್ತು ಎತ್ತುಗಳ ಜತೆ ಉತ್ತಮ ಹಾಲು ನೀಡುವ ಹಸುಗಳ ಜಾತ್ರೆಯನ್ನು ಮಾಡುವಂತಾಗಬೇಕು ಎಂದು ಸಲಹೆ ನೀಡಿದರು.

ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಮಾತನಾಡಿ, ಹಾಸನದ ಹಳ್ಳಿಕಾರ್ ತಳಿಯ ದನಗಳಿಗೆ ರಾಜ್ಯದಲ್ಲಿ ಉತ್ತಮ ಬೇಡಿಕೆ ಇದೆ. ಇದು ದಕ್ಷಿಣ ಕರ್ನಾಟಕ ಭಾಗದಲ್ಲಿ ಮಾತ್ರ ಇದ್ದು, ಸಂರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ನಗರಸಭೆ ಸಹಾಯಕ ಎಂಜಿನಿಯರ್ ಪುರುಷೋತ್ತಮ್, ಸದಸ್ಯರಾದ ಗೋಪಾಲ್, ಪ್ರಸನ್ನಕುಮಾರ್, ಮಹೇಶ್, ಶ್ರೇಯಸ್, ಪ್ರಕಾಶ್ ಇದ್ದರು.

ಅಧಿಕಾರಿಗಳಿಗೆ ಜೈಲಿಗೆ ಹೋಗುವ ಭಯ
‘ಗೊರುರು ರಸ್ತೆ ಸಮೀಪ ರಾಶಿಯಾಗಿ ಬಿದ್ದಿದ್ದ ಕಸವನ್ನು ವಿಲೇವಾರಿ ಮಾಡಿ, ದನಗಳ ಜಾತ್ರೆಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ನಗರಸಭೆ ಸದಸ್ಯರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದು, ಹಲವು ಅಧಿಕಾರಿಗಳು ಜೈಲಿಗೆ ಹೋಗುವ ಭಯದಲ್ಲಿದ್ದಾರೆ. ಒಳ್ಳೆಯ ಕೆಲಸಗಳಿಗೆ ಆಡ್ಡಿಪಡಿ ಸುವುದೇ ಕೆಲವರ ಕೆಲಸ’ ಎಂದು ಎಚ್‌.ಎಸ್‌. ಪ್ರಕಾಶ್ ಮತ್ತು ಎಚ್.ಎಸ್‌. ಅನಿಲ್‌ ಕುಮಾರ್ ಅವರು ಪರೋಕ್ಷವಾಗಿ ಸದಸ್ಯ ಸುರೇಶ್‌ ಕುಮಾರ್‌ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಐವರಿಗೆ ಮೊದಲ ಬಹುಮಾನ
ಉತ್ತಮ ಗುಣಮಟ್ಟದ ದನಗಳನ್ನು (2,4,6 ಹಲ್ಲುಗಳ ಹೋರಿಗಳ ವಿಭಾಗದಲ್ಲಿ) ಸಾಕಿದ ಐವರಿಗೆ ಪ್ರಥಮ ಬಹುಮಾನವಾಗಿ ತಲಾ 5 ಗ್ರಾಂ ಚಿನ್ನವನ್ನು ಬಹುಮಾನವಾಗಿ ನೀಡಲಾಯಿತು.

ತಿರುಮನಹಳ್ಳಿಯ ಚಿಕ್ಕೇಗೌಡ, ದಾಸರಕೊಪ್ಪಲಿನ ಶ್ರೀಧರ್, ಅರೆಹಳ್ಳಿ ಪ್ರಭು, ದಾಸರಕೊಪ್ಪಲು ದಿನೇಶ್, ಆಲದಹಳ್ಳಿಯ ಮಂಜಣ್ಣ ಹಾಗೂ ಅನಿಲ್‌ ಅವರಿಗೆ ಬಹುಮಾನ ನೀಡಲಾಯಿತು.

ದ್ವಿತೀಯ ಬಹುಮಾನವಾಗಿ ಬಿ.ಕಾಟಿಹಳ್ಳಿಯ ವಿಶ್ವಾಸ್, ತಿರುಮನಹಳ್ಳಿ ಚಿಕ್ಕೇಗೌಡ, ಆಲದಹಳ್ಳಿ ಮಂಜಣ್ಣ, ಸುಂದರ್ ರಾಜು ಗೆಂಡೇಗೌಡನಕೊಪ್ಪಲು, ಶಿವನಂಜೇಗೌಡ ಅವರಿಗೆ ನೀಡಲಾಯಿತು.

ಪಶು ವೈದ್ಯಕೀಯ ಕಾಲೇಜಿನ ಇಬ್ಬರು ಪ್ರಾಧ್ಯಾಪಕರು ಹಾಗೂ ಬೇರೆ ಬೇರೆ ತಾಲ್ಲೂಕುಗಳ ಪಶು ವೈದ್ಯರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT