ಶ್ರವಣಬೆಳಗೊಳ: ಕೋರಂ ಕೊರತೆಯಿಂದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯನ್ನು ಬುಧವಾರ ಮುಂದೂಡಲಾಯಿತು.
ಪಂಚಾಯಿತಿ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಸಭೆ ಆರಂಭವಾಗಬೇಕಿತ್ತು. 17 ಸದಸ್ಯರ ಪೈಕಿ ಅಧ್ಯಕ್ಷೆ ಹೇಮಾ ಪ್ರಭಾಕರ್, ಉಪಾಧ್ಯಕ್ಷ ಎಸ್.ಎನ್.ರವಿ, ಸದಸ್ಯರಾದ ಎಸ್.ಎನ್.ಲಕ್ಷ್ಮಣ್, ಎಸ್.ಎನ್.ಜನಾರ್ಧನ್ ಹಾಗೂ ಸರಸ್ವತಿ ಮಹೇಶ್ ಭಾಗವಹಿಸಿದ್ದರು.
ಅರ್ಧಕ್ಕಿಂತ ಹೆಚ್ಚು ಸದಸ್ಯರು ಸಭೆಗೆ ಗೈರಾಗಿದ್ದರಿಂದ ನಿಯಮದಂತೆ ಕೋರಂ ಕೊರತೆ ಕಾರಣ ನೀಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನವೀನ್ ಕುಮಾರ್ ಸಭೆ ಮುಂದೂಡಿದರು.
ಸದಸ್ಯ ಎನ್.ಆರ್.ವಾಸು ಮಾತನಾಡಿ, ಮಹಾಮಸ್ತಕಾಭಿಷೇಕ ಸಮೀಪಿಸು ತ್ತಿರುವುದರಿಂದ ಪಟ್ಟಣ ವ್ಯಾಪ್ತಿಯ 7 ವಾರ್ಡ್ಗಳಲ್ಲಿ ಇದುವರೆಗೂ ಯಾವುದೇ ರೀತಿಯ ಕೆಲಸ ಕಾರ್ಯಗಳನ್ನು ಜಿಲ್ಲಾಡಳಿತ ಕೈಗೆತ್ತಿಕೊಳ್ಳದೇ ಇರುವುದರಿಂದ ಬೇಸತ್ತು ಸಭೆಗೆ ಗೈರಾಗಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನವೀನ್ ಮಾತನಾಡಿ, ಮಸ್ತಕಾಭಿಷೇಕದ ಪ್ರಯುಕ್ತ ಪಟ್ಟಣದ ಘನ ತ್ಯಾಜ್ಯ ವಿಲೇವಾರಿಗೆ ಕೋರೇನಹಳ್ಳಿ ಬಳಿ 5 ಎಕರೆ ಸ್ಥಳವನ್ನು ಜಿಲ್ಲಾಡಳಿತ ಮಂಜೂರು ಮಾಡಿದೆ. ಅಂದಾಜು ₹ 50 ಲಕ್ಷ ವೆಚ್ಚದಲ್ಲಿ 5 ಎಕರೆಗೆ ಮೊದಲು ಕಾಂಪೌಂಡ್ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದಿಂದ ನಿರ್ಮಿಸಲಾಗುವುದು ಎಂದು ತಿಳಿಸಿದರು.