ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಪರಮೇಶ್ವರ್ ವಂಚನೆ ಮರೆತಿಲ್ಲ: ವೈ.ಎಚ್. ಹುಚ್ಚಯ್ಯ ವಾಗ್ದಾಳಿ

Last Updated 21 ಡಿಸೆಂಬರ್ 2017, 8:51 IST
ಅಕ್ಷರ ಗಾತ್ರ

ತುಮಕೂರು: ‘ಡಾ.ಜಿ.ಪರಮೇಶ್ವರ್ ಅವರು ಶಾಸಕರಾಗಿ, ಸಚಿವರಾಗಿ ವಂಚನೆ ಮಾಡಿರುವುದನ್ನು ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಮತದಾರರು ಮರೆತಿಲ್ಲ' ಎಂದು ಕೊರಟಗೆರೆ ತಾಲ್ಲೂಕು ಬಿಜೆಪಿ ಘಟಕ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಚ್.ಹುಚ್ಚಯ್ಯ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಷ್ಟೇ ಅಬ್ಬರದ ಪ್ರಚಾರ ಮಾಡಿ, ಹಣದ ಹೊಳೆ ಹರಿಸಿದರೂ ಅಲ್ಲಿನ ಮತದಾರರು ಹಗಲು ಕಂಡ ಹಾಳು ಬಾವಿಗೆ ರಾತ್ರಿ ಬೀಳುವುದಿಲ್ಲ’  ಎಂದು ಹೇಳಿದರು.

‘ಪರಮೇಶ್ವರ್ ಅವರು 1989ರಿಂದ 2 ಬಾರಿ ಮಧುಗಿರಿ ಕ್ಷೇತ್ರದಲ್ಲಿ ಶಾಸಕರಾಗಿ, 2008ರಲ್ಲಿ ಕೊರಟಗೆರೆ ಮೀಸಲು ಕ್ಷೇತ್ರದಿಂದ ಶಾಸಕರಾಗಿ ಸಚಿವರಾಗಿದ್ದರು. ಈ ಭಾಗದ ದಲಿತರು, ರೈತರು, ಮಹಿಳೆಯ ಸಮಸ್ಯೆ ಪರಿಹಾರಕ್ಕೆ ಎಂದೂ ಶ್ರಮಿಸಿಲ್ಲ. ಆದರೆ, ಈಗ ಚುನಾವಣೆ ಹತ್ತಿರವಾಗಿದೆ ಎಂಬ ಕಾರಣಕ್ಕೆ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಆಪಾದಿಸಿದರು.

‘ಸಚಿವರಾಗಿದ್ದಾಗಲೇ ಕೆಲಸ ಮಾಡದವರು ಮನೆಗೆ ಹೋಗುವಾಗ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದೆ ನಂಬಿಕೆಯಿಂದ ಕೊರಟಗೆರೆ ಕ್ಷೇತ್ರದ ಮತದಾರರು ಮತ ಹಾಕಿದ್ದರು. ಆ ನಂಬಿಕೆಯನ್ನು ಉಳಿಸಿಕೊಳ್ಳದೇ ಗೋಸುಂಬೆ ನಡವಳಿಕೆಯ ಮತ್ತು ವೈಟ್ ಕಾಲರ್ ರಾಜಕಾರಣಿಯಾಗಿ ಜನರ ನಂಬಿಕೆ ಹುಸಿಗೊಳಿಸಿದ್ದಾರೆ’ ಎಂದು ಆರೋಪಿಸಿದರು.

‘ಮಧುಗಿರಿ ಮತ್ತು ಕೊರಟಗೆರೆ ಕ್ಷೇತ್ರಗಳಲ್ಲಿರುವ ಮಾದಿಗ ಸಮುದಾಯದ ಜನರು ಈ ಹಿಂದಿನಿಂದಲೂ ಪರಮೇಶ್ವರ್ ಅವರಿಗೆ ಮತ ಹಾಕಿ ಗೆಲ್ಲಿಸಿದ್ದರು. ಆದರೆ, ಇಂದು ಅದೇ ಮಾದಿಗ ಸಮುದಾಯದವರಿಗೆ ಒಳಮೀಸಲಾತಿ ಕಲ್ಪಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘101 ಪರಿಶಿಷ್ಟ ಜಾತಿಗಳಲ್ಲಿ ಅತಿ ಹೆಚ್ಚು ಸಂಖ್ಯೆ ಹೊಂದಿರುವ ಮಾದಿಗ ಸಮಾಜಕ್ಕೆ ಮೀಸಲಾತಿಯಲ್ಲಿ ವಂಚನೆಯಾಗುತ್ತಿದೆ. ಜನಸಂಖ್ಯೆಯಾಧಾ
ರದ ಮೇಲೆ ಮೀಸಲಾತಿ ನೀಡಬೇಕು ಎಂಬುದು 20 ವರ್ಷಗಳ ಹೋರಾಟವಾಗಿದೆ’ ಎಂದರು.

‘ಈ ಹೋರಾಟದ ಫಲವಾಗಿ ನ್ಯಾಯಮೂರ್ತಿ ಸದಾಶಿವ ಆಯೋಗ ರಚನೆಯಾಯಿತು. ಮಾದಿಗ ಸಮುದಾಯಕ್ಕೆ ಶೇ 6ರಷ್ಟು, ಚಲವಾದಿ ಸಮುದಾಯಕ್ಕೆ ಶೇ 5, ಸ್ಪೃಶ್ಯ ಸಮುದಾಯಕ್ಕೆ ಶೇ 3, ಅಲೆಮಾರಿಗಳಿಗೆ ಶೇ 1 ರಷ್ಟು ಮೀಸಲಾತಿಯನ್ನು ಜನಸಂಖ್ಯೆ ಆಧಾರದ ಮೇಲೆ ಕಲ್ಪಿಸಲಾಗಿದೆ. ಆದರೆ, ಈ ಆಯೋಗದ ವರದಿಯನ್ನೇ ಪರಮೇಶ್ವರ್ ವಿರೋಧಿಸುತ್ತಿದ್ದಾರೆ. ಅಲ್ಲದೇ ಮಾದಿಗ ಸಮುದಾಯದ ಅಧಿಕಾರಿಗಳನ್ನು ನಿರ್ಲಕ್ಷಿತ ಪ್ರದೇಶಕ್ಕೆ ವರ್ಗಾವಣೆ ಮಾಡಿಸುತ್ತಿದ್ದಾರೆ’ ಎಂದು ಆಪಾದಿಸಿದರು.

‘ಮಾದಿಗ ಮೀಸಲಾತಿಗೆ ವಿರೋಧವಾಗಿರುವ ಯಾವುದೇ ಪಕ್ಷದವರಿರಲಿ. ಅವರ ವಿರುದ್ಧ ಮಾದಿಗ ಸಮುದಾಯ ವಿರೋಧಿಸಿ ಮತ ಹಾಕಲಿದೆ’ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ವರದಯ್ಯ, ಚಂದ್ರಶೇಖರಯ್ಯ,ಅಯೂಬ್ ಖಾನ್, ಮೋಹನ್ ಗೋಷ್ಠಿಯಲ್ಲಿದ್ದರು.

ಡಿಸಿಸಿ ಬ್ಯಾಂಕ್ ಕಾಂಗ್ರೆಸ್ ಬ್ಯಾಂಕ್ ಅಲ್ಲ
‘ಪರಮೇಶ್ವರ್ ಅವರಿಗೆ ಮತ ಹಾಕಿದರೆ ಮಾತ್ರ ಡಿಸಿಸಿ ಬ್ಯಾಂಕ್ ನಿಂದ ಸಾಲ ಸೌಲಭ್ಯ ನೀಡುವುದಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿಕೆ ನೀಡಿದ್ದು ಖಂಡನೀಯ’ ಎಂದು ವೈ.ಎಚ್. ಹುಚ್ಚಯ್ಯ ಹೇಳಿದರು.

‘ಡಿಸಿಸಿ ಬ್ಯಾಂಕ್ ಎಂದರೆ ಕಾಂಗ್ರೆಸ್ ಬ್ಯಾಂಕ್ ಅಲ್ಲ. ಅದು ಶೇರುದಾರ ಒಕ್ಕೂಟದಿಂದ ನಡೆಯುತ್ತಿರುವ ಬ್ಯಾಂಕ್. ಇಷ್ಟಕ್ಕೂ ಪರಮೇಶ್ವರ್ ಅವರೇ ಕೋಟಿ ಕೊಟಿ ಹಣ ಖರ್ಚು ಮಾಡುತ್ತಿದ್ದಾರೆ. ರಾಜಣ್ಣ ಮತ್ತೇಕೆ ಸಾಲ ಕೊಡಬೇಕು’ ಎಂದು ವ್ಯಂಗ್ಯವಾಡಿದರು.

ಕುಶಲೋಪರಿ ಶಾಸಕ ಸುಧಾಕರಲಾಲ್
‘ಶಾಸಕ ಸುಧಾಕರ ಲಾಲ್ ಅವರು ಒಬ್ಬ ಕುಶಲೋಪರಿ ಶಾಸಕ. ಕೇವಲ ಕುಶಲೋಪರಿ ವಿಚಾರಿಸುತ್ತಾರೆಯೇ ಹೊರತು ಅಭಿವೃದ್ಧಿ ಶೂನ್ಯ’ ಎಂದು ಹುಚ್ಚಯ್ಯ ಆರೋಪಿಸಿದರು.

‘224 ವಿಧಾನ ಸಭಾ ಕ್ಷೇತ್ರಗಳ ಶಾಸಕರಲ್ಲಿ ಅತ್ಯಂತ ಅಸಮರ್ಥ ಶಾಸಕರೆಂದರೆ ಸುಧಾಕರಲಾಲ್. ಆಗಿದ್ದಾರೆ. 2012–13ರಲ್ಲಿ ಮಂಜೂರಾದ ಕಾಮಗಾರಿಗಳು ಇನ್ನೂ ಪ್ರಾರಂಭವಾಗಿಲ್ಲ. ರಸ್ತೆಗಳಿಲ್ಲ. ಕುಡಿಯಲು ಶುದ್ಧ ನೀರು ಇಲ್ಲ. ಹೊಸ ಯೋಜನೆಗಳು ಯಾವುದು ಇಲ್’ಲ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT