ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಮಾನಿಸಿಲ್ಲ

Last Updated 21 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಧರ್ಮಸಂಸತ್ತಿನಲ್ಲಿ ನಾನು ಮಾಡಿರುವ ಪ್ರಸ್ತಾವದ ಬಗ್ಗೆ ಸ್ಪಷ್ಟೀಕರಣ ಕೇಳಲಾಗಿದೆ. (ಸಂಗತ, ಕೆ.ಫಣಿರಾಜ್‌, ಡಿ. 14). ಈ ಕುರಿತು ಈಗಾಗಲೆ ಅನೇಕ ಬಾರಿ ಸ್ಪಷ್ಟೀಕರಣವನ್ನ ನೀಡಿದ್ದೇನೆ. ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ನನ್ನ ಸಂದರ್ಶನದಲ್ಲಿಯೂ ಅದನ್ನು ವಿಶದಗೊಳಿಸಲಾಗಿದೆ.

‘ಅಲ್ಪಸಂಖ್ಯಾತರಿಗೆ ಕೊಡುವ ಸವಲತ್ತನ್ನು ಬಹುಸಂಖ್ಯಾತರಿಗೂ ಕೊಡಬೇಕು. ಧರ್ಮದ ನೆಲೆಯಲ್ಲಿ ಸಮಾಜವನ್ನು ವಿಭಜಿಸುವುದು ಬೇಡ’ವೆಂದು ಹೇಳಿದ್ದೇನೆ.

ಅಲ್ಪಸಂಖ್ಯಾತರಿಗೆ ನೀಡಿದ ಸವಲತ್ತನ್ನು ನಿಲ್ಲಿಸಬೇಕೆಂದು ನಾನು ಹೇಳಿಲ್ಲ. ಅದನ್ನು ಬಹುಸಂಖ್ಯಾತರಿಗೂ ನೀಡಬೇಕು, ಅದಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ತರಬೇಕೆಂದೂ ಹೇಳಿದ್ದೇನೆ. ಅಲ್ಪಸಂಖ್ಯಾತರೆಂದರೆ ದಲಿತರು ಮತ್ತು ಹಿಂದುಳಿದವರಲ್ಲ. ಕ್ರೈಸ್ತರು, ಮುಸಲ್ಮಾನರು ಮುಂತಾದವರು. ಅವರಿಗೆ ನೀಡಿದ ಸವಲತ್ತುಗಳು ದಲಿತರು ಹಿಂದುಳಿದವರನ್ನೊಳಗೊಂಡ ಉಳಿದ ಹಿಂದೂಗಳಿಗೂ ದೊರೆಯಲಿ ಎಂದು ನಾನು ಹೇಳಿದ್ದಾಗಿದೆ.

ಇದರಲ್ಲಿ ತಪ್ಪೇನಿದೆ? ಇದು ದಲಿತರಿಗೂ ಹಿಂದುಳಿದವರಿಗೂ ದೊರೆತರೆ ಅವರಿಗೆ ಅನುಕೂಲವಲ್ಲವೇ? ಸಂವಿಧಾನಕ್ಕೆ ತಿದ್ದುಪಡಿ ಸೂಚಿಸಿದರೆ ಸಂವಿಧಾನಕ್ಕೆ ಅಗೌರವ ನೀಡಿದಂತೆ ಆಗುವುದೇ? ಇಷ್ಟರವರೆಗೆ ಸಂವಿಧಾನಕ್ಕೆ ನೂರಾರು ತಿದ್ದುಪಡಿಗಳಾಗಿಲ್ಲವೇ? ನಾನು ತಿದ್ದುಪಡಿ ಸೂಚಿಸಿದರೆ ಅದು ಅಪರಾಧ ವಾಗುವುದೇ? ಇದು ಅಂಬೇಡ್ಕರರಿಗೆ ಮಾಡಿದ ಅಗೌರವವೆಂದು ಆರೋಪಿಸಲಾಗಿದೆ. ಸಂವಿಧಾನ ಅಂಬೇಡ್ಕರರೊಬ್ಬರೇ ಮಾಡಿದ್ದಲ್ಲ. ಅವರ ನೇತೃತ್ವದಲ್ಲಿ ಅನೇಕ ತಜ್ಞರು ಸೇರಿ ಮಾಡಿ ಇಡೀ ರಾಷ್ಟ್ರವೇ ಒಪ್ಪಿದ ಸಂವಿಧಾನ. ಇದನ್ನು ಅಗೌರವಿಸಿದರೆ ಇಡೀ ರಾಷ್ಟ್ರಕ್ಕೆ ಮಾಡಿದ ಅಗೌರವ. ಇದನ್ನು ನಾನು ಮಾಡಿಲ್ಲವೆಂದು ಹೇಳಿದರೆ ಅದಕ್ಕೆ ಅಂಬೇಡ್ಕರರ ಹೆಸರು ಹೇಳಿ ಜಾತಿಯ ಸ್ವರೂಪವನ್ನು ತರುವುದು ಸರಿಯೇ? ನಾನು ನಿಜಸಂಗತಿಯನ್ನು ತಿಳಿಸಿದ್ದೇನೆ. ಯಾರನ್ನೂ ಅವಮಾನಿಸಿಲ್ಲ. ಪೂರ್ವಗ್ರಹ ಪೀಡಿತರಾಗದೆ ನಿಷ್ಪಕ್ಷಪಾತ ಮನಸ್ಸಿನಿಂದ ಇದನ್ನು ಪರಿಶೀಲಿಸಬೇಕಾಗಿ ಅಪೇಕ್ಷಿಸುತ್ತೆವೆ.

ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ, ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT