2004ರಿಂದ 2014ರವರೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪ ಪ್ರಕರಣಗಳಲ್ಲಿ 2ಜಿ ತರಂಗಾಂತರ ಹಂಚಿಕೆ ಮುಖ್ಯವಾದುದು. 2010ರಲ್ಲಿ ಮಹಾಲೇಖಪಾಲ ವಿನೋದ್ ರಾಯ್ ನೀಡಿದ ವರದಿಯು ತರಂಗಾಂತರ ಹಂಚಿಕೆಯಲ್ಲಿ ಹಗರಣ ನಡೆದಿದೆ.
ಸರ್ಕಾರಕ್ಕೆ ₹1.76 ಲಕ್ಷ ಕೋಟಿ ನಷ್ಟವಾಗಿದೆ ಎಂದು ಆರೋಪಿಸಿತ್ತು. ಈ ಬೃಹತ್ ಮೊತ್ತದಿಂದಾಗಿಯೇ ದೇಶದಾದ್ಯಂತ ದೊಡ್ಡಮಟ್ಟದ ಚರ್ಚೆ ನಡೆದಿತ್ತು. 2014ರ ಚುನಾವಣೆಯಲ್ಲಿ ಯುಪಿಎ ವಿರುದ್ಧ ಬಿಜೆಪಿಗೆ 2ಜಿ ಹಗರಣ ಆರೋಪವೇ ದೊಡ್ಡ ಅಸ್ತ್ರವಾಗಿತ್ತು. ಕಳಂಕರಹಿತ ವ್ಯಕ್ತಿ ಎಂದು ಯುಪಿಎ ಬಿಂಬಿಸಿದ್ದ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಮೂಗಿನಡಿಯಲ್ಲಿಯೇ ಇಷ್ಟೊಂದು ದೊಡ್ಡ ಹಗರಣ ನಡೆದಿದೆ ಎಂದು ಬಿಜೆಪಿ ಹೇಳಿತ್ತು. ತೀರ್ಪಿನಿಂದಾಗಿ ಕಾಂಗ್ರೆಸ್ ಈಗ ನಿರಾಳವಾಗಿದೆ.
2007
ಅಧಿಕಾರ ಸ್ವೀಕಾರ ಮತ್ತು ತರಂಗಾಂತರ ಹಂಚಿಕೆ
ಮೇ: ದೂರಸಂಪರ್ಕ ಸಚಿವನಾಗಿ ಎ.ರಾಜಾ ಅಧಿಕಾರ ಸ್ವೀಕಾರ
ಆಗಸ್ಟ್: 2ನೇ ತಲೆಮಾರಿನ (2ಜಿ) ತರಂಗಾಂತರ ಮತ್ತು ಏಕೀಕೃತ ಸೇವಾ ಲಭ್ಯತಾ ಪರವಾನಗಿ ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಿದ ದೂರಸಂಪರ್ಕ ಇಲಾಖೆ
ಸೆಪ್ಟೆಂಬರ್:→2ಜಿ ತರಂಗಾಂತರಕ್ಕಾಗಿ ಅರ್ಜಿ ಸಲ್ಲಿಸಲು 2007ರ ಅಕ್ಟೋಬರ್ 1 ಕೊನೆಯ ದಿನಾಂಕ ಎಂದು ಸುತ್ತೋಲೆ ಹೊರಡಿಸಿದ ಇಲಾಖೆ
ಅಕ್ಟೋಬರ್ 1: 46 ಕಂಪೆನಿಗಳು ಒಟ್ಟು 575 ಅರ್ಜಿಗಳನ್ನು ಸಲ್ಲಿಸಿದ್ದವು
2008
ಡ್ರಾಫ್ಟ್ ಸಲ್ಲಿಕೆಗೆ 45 ನಿಮಿಷ
ಜನವರಿ 7: ಸೆಪ್ಟೆಂಬರ್ 25ರ ಒಳಗೆ ಅರ್ಜಿ ಸಲ್ಲಿಸಿದವರಲ್ಲಿ, ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಪರವಾನಗಿ ನೀಡಲಾಗುತ್ತದೆ ಎಂದು ಮತ್ತೆ ಅಧಿಸೂಚನೆ ಹೊರಡಿಸಿದ ದೂರಸಂಪರ್ಕ ಇಲಾಖೆ
ಜನವರಿ 10: ಬ್ಯಾಂಕ್ ಡ್ರಾಫ್ಟ್ಗಳನ್ನು ಪಡೆದು ಅವನ್ನು ಸಂಚಾರ ಭವನಕ್ಕೆ ಸಲ್ಲಿಸಲು ಕೇವಲ 45 ನಿಮಿಷ ಕಾಲಾವಕಾಶ ನೀಡಿದ ಇಲಾಖೆ. ಅವಧಿ ಮುಗಿಯುವಷ್ಟರಲ್ಲಿ ವಿವಿಧ ಕಂಪೆನಿಗಳು 122 ಪರವಾನಗಿಗಳನ್ನು ಪಡೆಯಲಷ್ಟೇ ಸಫಲವಾದವು
2009
ಎಫ್ಐಆರ್
2ಜಿ ತರಂಗಾಂತರ ಹಂಚಿಕೆಯಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಎಂದು ಸಿಬಿಐಗೆ ನಿರ್ದೇಶನ ನೀಡಿದ ಕೇಂದ್ರ ಜಾಗೃತ ಆಯೋಗ (ಸಿವಿಸಿ)
ಅಕ್ಟೋಬರ್ 21:ದೂರಸಂಪರ್ಕ ಇಲಾಖೆಯ ಅನಾಮಧೇಯ ಅಧಿಕಾರಿಗಳು, ಅನಾಮಧೇಯ ಕಂಪೆನಿಗಳು ಮತ್ತು ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ ಸಿಬಿಐ
2010
ಸಿಎಜಿ ವರದಿ
ಸೆಪ್ಟೆಂಬರ್ 13: ಪರವಾನಗಿ ಹಂಚಿಕೆಯಲ್ಲಿ ₹ 70,000 ಕೋಟಿ ಹಗರಣ ನಡೆದಿದೆ ಎಂಬ ಆರೋಪದ ಬಗ್ಗೆ ವಿವರಣೆ ನೀಡಿ ಎಂದು ಕೇಂದ್ರ ಸರ್ಕಾರ ಮತ್ತು ಸಚಿವ ರಾಜಾ ಅವರಿಗೆ ಸೂಚಸಿದ ಸುಪ್ರೀಂ ಕೋರ್ಟ್
ನವೆಂಬರ್ 10: 2ಜಿ ತರಂಗಾಂತರ ಹಂಚಿಕೆ ಸಂಬಂಧ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ ಮಹಾಲೇಖಪಾಲ. ಸರ್ಕಾರಕ್ಕೆ ₹ 1.76 ಲಕ್ಷ ಕೋಟಿ ನಷ್ಟವಾಗಿದೆ ಎಂದು ವರದಿಯಲ್ಲಿ ಉಲ್ಲೇಖ
ನವೆಂಬರ್ 15: ದೂರಸಂಪರ್ಕ ಸಚಿವನ ಸ್ಥಾನಕ್ಕೆ ರಾಜೀನಾಮೆ ನೀಡಿದ ಎ.ರಾಜಾ
2011
ಒಬ್ಬರ ನಂತರ ಒಬ್ಬರ ಬಂಧನ
ಫೆಬ್ರುವರಿ: ರಾಜಾ, ದೂರಸಂಪರ್ಕ ಕಾರ್ಯದರ್ಶಿ ಸಿದ್ಧಾರ್ಥ್ ಬೆಹುರಾ ಮತ್ತು ರಾಜಾ ಅವರ ಆಪ್ತ ಕಾರ್ಯದರ್ಶಿ ರವೀಂದ್ರ ಕುಮಾರ್ ಚಾಂಡೋಲಿಯಾರನ್ನು ಬಂಧಿಸಿದ ಸಿಬಿಐ. ಸ್ವಾನ್ ಟೆಲಿಕಾಂ ಲಿಮಿಟೆಡ್ನ ಪ್ರವರ್ತಕ ಶಾಹೀದ್ ಉಸ್ಮಾನ್ ಬಲ್ವಾ ಬಂಧನ
ಮಾರ್ಚ್ 14: ಹಗರಣದ ವಿಚಾರಣೆಗೆಂದೇ ವಿಶೇಷ ನ್ಯಾಯಾಲಯವನ್ನು ರಚಿಸಿದ ದೆಹಲಿ ಹೈಕೋರ್ಟ್
ಏಪ್ರಿಲ್ 2: ಮೊದಲ ಆರೋಪ ಪಟ್ಟಿ ಸಲ್ಲಿಸಿದ ಸಿಬಿಐ
ಏಪ್ರಿಲ್ 25: ಎರಡನೇ ಆರೋಪಪಟ್ಟಿ ಸಲ್ಲಿಸಿದ ಸಿಬಿಐ
ಅಕ್ಟೋಬರ್ 23: 17 ಆರೋಪಿಗಳ ವಿರುದ್ಧವೂ ದೋಷಾರೋಪ ದಾಖಲು
ನವೆಂಬರ್ 11: ವಿಚಾರಣೆ ಆರಂಭ
ಡಿಸೆಂಬರ್ 1: ನಾಯರ್, ದೋಶಿ, ಪಿಪಾರ, ಸಂಜಯ್, ಗೋಯೆಂಕಾ, ಕನಿಮೊಳಿ, ಶರದ್ ಕುಮಾರ್, ಕರೀಂ ಮೊರಾನಿ, ಆಸಿಫ್ ಬಲ್ವಾ, ರಾಜೀವ್ ಅಗರ್ವಾಲ್, ಶಹೀದ್ ಬಲ್ವಾ ಮತ್ತು ಚಾಂಡೋಲಿಯಾಗೆ ಜಾಮೀನು ನೀಡಲಾಯಿತು
ಡಿಸೆಂಬರ್ 12: ಮೂರನೇ ಆರೋಪಪಟ್ಟಿ ಸಲ್ಲಿಸಿದ ಸಿಬಿಐ
2012
ಪರವಾನಗಿ ರದ್ದು, ಹರಾಜಿಗೆ ಸೂಚನೆ
ಫೆಬ್ರುವರಿ 2: ರಾಜಾ ಸಚಿವರಾಗಿದ್ದಾಗ ನೀಡಿದ್ದ 122 ಪರವಾನಗಿಗಳನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್. ಪರವಾನಗಿಗಳನ್ನು ಹರಾಜು ಹಾಕುವಂತೆ ಸೂಚನೆ
2014
ದೋಷಾರೋಪ, ಅಂತಿಮ ವಿಚಾರಣೆ
ಏಪ್ರಿಲ್ 25: 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆಯೇ ರಾಜಾ ಮತ್ತು ಕನಿಮೊಳಿ ವಿರುದ್ಧ ‘ಅಕ್ರಮ ಹಣ ವರ್ಗಾವಣೆ’ ಪ್ರಕರಣ ದಾಖಲಿಸಿದ ಜಾರಿ ನಿರ್ದೇಶನಾಲಯ. ಅಕ್ಟೋಬರ್ನಲ್ಲಿ ದೋಷಾರೋಪ ಪಟ್ಟಿ ದಾಖಲು
ಡಿಸೆಂಬರ್ 19: ಅಂತಿಮ ವಿಚಾರಣೆ, ವಾದ–ಪ್ರತಿವಾದ ಆರಂಭ
2017
ಖುಲಾಸೆ ತೀರ್ಪು
ಡಿಸೆಂಬರ್ 5: ತೀರ್ಪು ನೀಡಿಕೆ ದಿನಾಂಕವನ್ನು ಡಿಸೆಂಬರ್ 21ಕ್ಕೆ ನಿಗದಿಪಡಿಸಿದ ನ್ಯಾಯಾಲಯ
ಡಿಸೆಂಬರ್ 21: ಎಲ್ಲಾ ಆರೋಪಿಗಳನ್ನು ಖುಲಾಸೆ ಮಾಡಿ ತೀರ್ಪು ನೀಡಿದ ನ್ಯಾಯಾಲಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.