ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯಗಳ ಖರೀದಿಗೆ ಹೆಚ್ಚಿದ ಒಲವು

Last Updated 22 ಡಿಸೆಂಬರ್ 2017, 5:09 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಸಿರಿಧಾನ್ಯಗಳ ಮಾರಾಟ ಮತ್ತು ಖರೀದಿ ಈಚೆಗೆ ಹೆಚ್ಚು ಗಮನ ಸೆಳೆಯಲಾರಂಭಿಸಿದೆ. ಜೀವನಶೈಲಿ ಯ ಬದಲಾವಣೆಯಿಂದ ಆವರಿಸುವ ಮಧುಮೇಹ, ರಕ್ತದೊತ್ತಡ ಸೇರಿದಂತೆ ಇತರೆ ರೋಗಗಳಿಂದ ಗುಣಮುಖ ಆಗಬೇಕು ಎಂದು ಇಚ್ಛಿಸುವವರು ಹಾಗೂ ರೋಗಗಳು ಬರದಂತೆ ಮುನ್ನಚ್ಚರಿಕೆ ವಹಿಸುವ ಜನರು ಹೆಚ್ಚಾಗಿ ಸಿರಿಧಾನ್ಯಗಳ ಖರೀದಿಗೆ ಒಲವು ತೋರಿಸುತ್ತಿದ್ದಾರೆ.

ಇದಕ್ಕೆ ಪುಷ್ಠಿ ನೀಡುವಂತೆ ರಾಯಚೂರು ನಗರದ ಬಹುತೇಕ ಬಡಾವಣೆಗಳಲ್ಲಿ ಸಿರಿಧಾನ್ಯ ಮಾರಾಟದ ಮಳಿಗೆಗಳು ತೆರೆದುಕೊಂಡಿವೆ. ಸುಶಿಕ್ಷಿತರು ಹೆಚ್ಚಾಗಿ ವಾಸಿಸುವ ನೂತನ ಬಡಾವಣೆಗಳಲ್ಲಿ ಸಿರಿಧಾನ್ಯಗಳನ್ನು ಖರೀದಿಸಿ, ಬಳಸುವುದನ್ನು ಜೀವನದ ಭಾಗ ಮಾಡಿಕೊಳ್ಳುತ್ತಿರುವುದು ಗಮನಾರ್ಹ.

ರಾಯಚೂರು ಕೃಷಿ ವಿಶ್ವವಿದ್ಯಾಲಯವು ಈಚೆಗೆ ಏರ್ಪಡಿಸಿದ್ದ ಕೃಷಿ ಮೇಳವು ಸಿರಿಧಾನ್ಯಗಳ ಬಳಕೆಯನ್ನು ಮತ್ತಷ್ಟು ಜನಪ್ರಿಯತೆ ಮಾಡಿದೆ. ಸಿರಿಧಾನ್ಯಗಳನ್ನು ಬೆಳೆಯುವುದು ಹೇಗೆ ಮತ್ತು ಅವುಗಳ ಬಳಕೆಯಿಂದ ಅನಾರೋಗ್ಯದಿಂದ ಬಳಲುವುದನ್ನು ತಪ್ಪಿಸಬಹುದು ಎನ್ನುವ ಮಾಹಿತಿಯನ್ನು ಜನರಿಗೆ ಮೇಳದಲ್ಲಿ ತಿಳಿಸಲಾಗಿತ್ತು. ಸಿರಿಧಾನ್ಯಗಳಿಂದ ಸಿಹಿ, ಖಾರ, ಹುಳಿ ಇರುವ ಹಲವು ಆಹಾರ ಪದಾರ್ಥಗಳನ್ನು ತಯಾರಿಸಬಹುದು ಎನ್ನುವುದನ್ನು ಕೃಷಿ ಮೇಳದ ಮೂಲಕ ಜನರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗಿತ್ತು.

ಇದೀಗ ಜಂಟಿ ಕೃಷಿ ಇಲಾಖೆಯು ಸಿರಿಧಾನ್ಯಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಏರ್ಪಡಿಸಿದೆ. ಡಿಸೆಂಬರ್‌ 24 ಮತ್ತು 25 ರಂದು ಸಿರಿಧಾನ್ಯಕ್ಕೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ. ಅತಿಕಡಿಮೆ ನೀರಿನಲ್ಲಿ ಸಿರಿಧಾನ್ಯಗಳನ್ನು ಬೆಳೆಯಬಹುದು.

ಬರಗಾಲ ಪೀಡಿತ ಪ್ರದೇಶಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯುವುದಕ್ಕೆ ರೈತರನ್ನು ಉತ್ತೇಜಿಸಲಾಗುತ್ತದೆ. ಇನ್ನೊಂದೆಡೆ, ಸಿರಿಧಾನ್ಯಗಳನ್ನು ಸೇವಿಸಿ ಉತ್ತಮ ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಈ ರೀತಿ ಜಿಲ್ಲೆಯಲ್ಲಿ ಸಿರಿಧಾನ್ಯಗಳಿಗೆ ಸಂಬಂಧಿಸಿದ ಚಟುವಟಿಕೆಗಳು ನಿರಂತರ ನಡೆಯುತ್ತಿವೆ.

ರಾಯಚೂರು ಜಿಲ್ಲೆಯಲ್ಲಿ ಸಿರಿಧಾನ್ಯಗಳಲ್ಲಿ ಒಂದಾದ ಸಜ್ಜೆ, ನವಣೆ ಬೆಳೆಯುವುದರಿಂದ ಜನರು ಅವುಗಳನ್ನು ಹೆಚ್ಚು ಖರೀದಿಸುತ್ತಿದ್ದಾರೆ. ಸಾಮೆ, ಅರ್ಕ, ಕೂರ್ಲೆ, ಊದಲು ಈ ಭಾಗದಲ್ಲಿ ಬೆಳೆಯುವುದಿಲ್ಲ ಎನ್ನುವ ಕಾರಣದಿಂದ ಅವುಗಳಿಗೆ ಬೇಡಿಕೆ ಅಷ್ಟೊಂದಿಲ್ಲ. ರಾಗಿ ಬೆಳೆಯದಿದ್ದರೂ ರಾಗಿ ಹಿಟ್ಟು ಖರೀದಿಸಿ ಬಳಸುತ್ತಾರೆ. ರಾಗಿಯಿಂದ ತಯಾರಿಸುವ ಆಹಾರ ಪದಾರ್ಥಗಳು ಹೆಚ್ಚು ಜನಪ್ರಿಯ ಆಗಿರುವುದು ರಾಗಿ ಹಿಟ್ಟು ಹೆಚ್ಚು ಮಾರಾಟವಾಗುತ್ತದೆ.

‘ಸಿರಿಧಾನ್ಯಗಳಲ್ಲಿ ಅರ್ಕಾ ನುಚ್ಚು ನಾನು ಬಳಸುತ್ತೇನೆ. ತಿನ್ನುವುದಕ್ಕೆ ಸಪ್ಪೆ ಇರುವುದರಿಂದ ಅದರಲ್ಲಿ ಹಾಲು, ತಿಳಿಸಾರು ಅಥವಾ ಹಾಲು ಬೆರೆಸಿ ತಿನ್ನುತ್ತೇನೆ. ಇದರಿಂದ ಬೆಳಿಗ್ಗೆ ಮೋಷನ್‌ ಸರಿಯಾಗಿ ಆಗುತ್ತಿದೆ. ಆರೋಗ್ಯ ದೃಷ್ಟಿಯಿಂದ ತುಂಬಾ ಚೆನ್ನಾಗಿದೆ ಅನ್ನಿಸಿದೆ. ದಿನಕ್ಕೆ ಒಂದು ಹೊತ್ತು ಮಾತ್ರ ಅರ್ಕಾ ತಿನ್ನುತ್ತೇನೆ’ ಎಂದು ಐಡಿಎಸ್‌ಎಂಟಿ ಲೇಔಟ್‌ ನಿವಾಸಿ ಮಂಜುನಾಥ ಅವರು ಹೇಳಿದ ಅನುಭವ ಮಾತಿದು.

ಔಷಧಿಯಂತೆ ಖರೀದಿ

ಸಿರಿಧಾನ್ಯಗಳನ್ನು ಖರೀದಿಸುವುದಕ್ಕೆ ಬರುವ ಜನರಿಗೆ ಅವುಗಳನ್ನು ಹೇಗೆ ಬಳಸಬೇಕು ಎನ್ನುವುದು ಸರಿಯಾಗಿ ಗೊತ್ತಿರುವುದಿಲ್ಲ. ಅಕ್ಕಿಯ ಬದಲಾಗಿ ಸಿರಿಧಾನ್ಯ ಬಳಸಿ ಎನ್ನುವ ಒಂದು ವಾಕ್ಯ ಮಾತ್ರ ಅವರಿಗೆ ತಿಳಿದಿರುತ್ತದೆ. ಹೀಗಾಗಿ ಒಮ್ಮೆ ಖರೀದಿಸಿದವರು ಮತ್ತೆ ಅವುಗಳನ್ನು ಖರೀದಿಸುವುದಕ್ಕೆ ಬರುವುದಿಲ್ಲ. ಅನಾರೋಗ್ಯಪೀಡಿತರು ಕೆಲವು ದಿನಗಳ ಮಟ್ಟಿಗೆ ಔಷಧಿಯಂತೆ ಖರೀದಿಸಿ ತಿಂದು ಕೈಬಿಡುತ್ತಾರೆ. ಇತ್ತೀಚೆಗೆ ಸಿರಿಧಾನ್ಯ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಸಿರಿಧಾನ್ಯಗಳ ಬಳಕೆಯನ್ನು ಆಹಾರದ ಭಾಗವಾಗಿ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಬೇಕಿದೆ ಎನ್ನುತ್ತಾರೆ ಸಿರಿಧಾನ್ಯ ಮಾರಾಟ ಮಾಡುವ ‘ಅಭಿ ಆರ್ಗ್ಯಾನಿಕ್‌ ಹಬ್‌’ ಮಳಿಗೆಯ ಬಸವರಾಜ ಅವರು.

* * 

ಹೆಚ್ಚು ನಾರಿನಾಂಶ ಹೊಂದಿರುವ ಸಿರಿಧಾನ್ಯಗಳನ್ನು ಬಳಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಅಗತ್ಯಕ್ಕೆ ತಕ್ಕಂತೆ ಮಾತ್ರ ಸಿರಿಧಾನ್ಯ ಬಳಸಬೇಕು.
ಡಾ.ಐ ಶಂಕರಗೌಡ, ಸಂಶೋಧನಾ ನಿರ್ದೇಶಕರು, ರಾಯಚೂರು ಕೃಷಿ ವಿವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT