ಗುಂಡ್ಲುಪೇಟೆ: ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿ ರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವೆ ಎಂ.ಸಿ. ಮೋಹನಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲ್ಲೂಕಿನ ಉತ್ತೂರು ಏತ ಯೋಜನೆ ಹಾಗೂ ಗಾಂಧಿ ಗ್ರಾಮ ಏತ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಸ್ಥಳಕ್ಕೆ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಉತ್ತೂರು ಏತ ಯೋಜನೆಯಡಿ ಉತ್ತೂರಿನ ಕೆರೆ ಬಳಿ ನಿರ್ಮಾಣ ವಾಗುತ್ತಿರುವ ಪಂಪ್ಹೌಸ್ಗೆ ಮೊದಲು ಭೇಟಿ ನೀಡಿದ ಸಚಿವರು ಅಲ್ಲಿ ಕೈಗೊಂಡಿರುವ ಕಾಮಗಾರಿಯನ್ನು ವೀಕ್ಷಿಸಿ, ನಿರ್ಮಾಣ ಕಾರ್ಯ ಹೇಗೆ ಸಾಗಿದೆ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಾಮಗಾರಿಯನ್ನು ಚುರುಕುಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಬಳಿಕ, ಉತ್ತೂರು ಭಾಗದಲ್ಲಿ ಹಾದುಹೋಗಿರುವ ಪೈಪ್ಲೈನ್ ಕಾಮಗಾರಿಯನ್ನು ವೀಕ್ಷಿಸಿದರು. ಕೆಲಸ ಬಾಕಿ ಇರುವ ಕಡೆ ಶೀಘ್ರವಾಗಿ ಪೈಪ್ಗಳ ಜೋಡಣೆ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ನಂತರ ಗಾಂಧಿಗ್ರಾಮ ಏತ ಯೋಜನೆ ವ್ಯಾಪ್ತಿಯ ಕಮ್ಮರಹಳ್ಳಿ ಕೆರೆ ಬಳಿ ನಿರ್ಮಾಣವಾಗಿರುವ ಪಂಪ್ಹೌಸ್ಗೆ ತೆರಳಿ ಕಾಮಗಾರಿ ಪರಿಶೀಲಿಸಿದರು.
ಗಾಂಧಿಗ್ರಾಮದ ಬಳಿ ಕಬಿನಿ ನದಿ ಯಿಂದ ನೀರು ಪೂರೈಸಲು ನಿರ್ಮಾಣ ಮಾಡಲಾಗಿರುವ ಜಾಕ್ವೆಲ್ (ಮೂಲ ಸ್ಥಾವರ) ಸ್ಥಳಕ್ಕೆ ಭೇಟಿ ನೀಡಿದರು. ಫೆಬ್ರುವರಿ ಗಡುವು: ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮೋಹನಕುಮಾರಿ, ಉತ್ತೂರು ಏತ ಯೋಜನೆಯಡಿ ಒಟ್ಟು 11 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯನ್ನು ₹53 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳ ಲಾಗಿದೆ. ಮುಂಬರುವ ಫೆಬ್ರುವರಿ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ ಎಂದು ತಿಳಿಸಿದರು.
ಚಾಮರಾಜನಗರ ತಾಲ್ಲೂಕಿನ 2 ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ 9 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಬೇಗನೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಗಾಂಧಿಗ್ರಾಮ ಏತ ಯೋಜನೆಯಡಿ ಕಬಿನಿ ನದಿಯಿಂದ ನೀರೆತ್ತಿ ತಾಲ್ಲೂಕಿನ 9 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಎರಡು ಹಂತಗಳ ಪೈಪ್ಲೈನ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಪಂಪ್ಹೌಸ್ ಕಾಮಗಾರಿ ಸಹ ಮುಗಿದಿದೆ ಎಂದು ವಿವರಿಸಿದರು.
ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಕೆ. ಬೊಮ್ಮಯ್ಯ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಮರಿಸ್ವಾಮಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜೇಂದ್ರ ಪ್ರಸಾದ್, ಸಹಾಯಕ ಎಂಜಿನಿಯರ್ ಮಹೇಶ್ ಮತ್ತು ಇತರ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.