ಕುಣಿಗಲ್: ತಾಲ್ಲೂಕಿನ 5 ನಕಲಿ ವೈದ್ಯರ ಕ್ಲಿನಿಕ್ಗಳಿಗೆ ತಹಶೀಲ್ದಾರ್ ನಾಗರಾಜು, ತಾಲ್ಲೂಕು ವೈದ್ಯಾಧಿಕಾರಿ ಡಾ.ಶಾಂತಲಾ, ಸಹಾಯಕ ಔಷಧ ನಿಯಂತ್ರಕರಾದ ಮಮತಾ, ಭಾಗ್ಯಜ್ಯೋತಿ, ಆಯುಷ್ ವೈದ್ಯ ಗಂಗಾಧರ್ ನೇತೃತ್ವದ ತಂಡ ಶುಕ್ರವಾರ ಬೀಗಮುದ್ರೆ ಹಾಕಿತು.
ಪಟ್ಟಣದ ದೊಡ್ಡಪೇಟೆ ರಾಘವೇಂದ್ರ ಕ್ಲಿನಿಕ್ ಲಕ್ಷ್ಮಿನರಸಿಂಹಯ್ಯ, ಕೋಟೆ ಪ್ರದೇಶದ ಲೋಕನಾಥ್ ಕ್ಲಿನಿಕ್ ಬಿಶ್ವಾಸ್, ಸಂತೆಮಾವತ್ತೂರಿನ ಧನ್ವಂತರಿ ಕ್ಲಿನಿಕ್
ನರಸಿಂಹಮೂರ್ತಿ, ಅಮೃತೂರು ಸ್ನೇಹಾ ಕ್ಲಿನಿಕ್ ಷಾಹ ಜುಬೇರ್ ಮತ್ತು ಎಡೆಯೂರಿನ ದೇವಾಲಯ ರಸ್ತೆಯ ಉಜ್ವಲಾ ಕ್ಲಿನಿಕ್ ಲೀಲಾವತಿ ಅವರು ನಕಲಿ ವೈದ್ಯರು ಎಂದು ಜಿಲ್ಲಾ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದ ಪಟ್ಟಿಯನ್ನು ಘೋಷಿಸಲಾಗಿತ್ತು. ಕ್ಲಿನಿಕ್ ಮುಚ್ಚಲು ಸೂಚನೆ ನೀಡಲಾಗಿತ್ತು. ಆದರೂ ಇವರು ಕ್ಲಿನಿಕ್ ನಡೆಸುತ್ತಿದ್ದರು.
ತಾಲ್ಲೂಕು ವೈದ್ಯಾಧಿಕಾರಿ ಶಾಂತಲಾ ಮಾತನಾಡಿ, ಮೂರು ವರ್ಷಗಳ ಹಿಂದೆ ತಾಲ್ಲೂಕಿನಲ್ಲಿ 18 ನಕಲಿ ವೈದ್ಯರು ಇದ್ದರು. ಸೂಚನೆ ಬಳಿಕ 13 ನಕಲಿ ವೈದ್ಯರು ತಾಲ್ಲೂಕು ತೊರೆದಿದ್ದಾರೆ. ಈ ಐದು ಮಂದಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಹತೆ ಹೊಂದಿದ್ದಾರೆ. ಲಕ್ಷ್ಮಿ ನರಸಿಂಹಯ್ಯ ಅವರ ತಂದೆ ನಾಟಿ ವೈದ್ಯರಾಗಿದ್ದರು. ಆ ಅನುಭವದ ಆಧಾರದ ಮೇಲೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಆಯುಷ್ ವೈದ್ಯರಾದ ಗಂಗಾಧರ್, ನಕಲಿ ವೈದ್ಯರು ರೋಗಿಗಳಿಗೆ ಸ್ಟಿರಾಯ್ಡ್ ನೀಡುವುದರಿಂದ ತಕ್ಷಣ ರೋಗ ಗುಣ ಕಂಡರೂ ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದರು.