ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾವತಿ ನಿರಾಶ್ರಿತರನ್ನು ಅಧಿಕಾರಿಗಳಿಂದ ರಕ್ಷಿಸಿ

Last Updated 24 ಡಿಸೆಂಬರ್ 2017, 5:07 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಹೇಮಾವತಿ ಜಲಾಶಯ (ಗೊರೂರು) ನಿರ್ಮಾಣಕ್ಕೆ ಭೂಮಿಯನ್ನು ನೀಡಿ ನಿರಾಶ್ರಿತರಾದ ಜನರಿಗೆ ತಾಲ್ಲೂಕಿನ ಬೆಳ್ಳಿಬೆಟ್ಟದ ಕಾವಲು ಸರ್ವೆ ನಂ: 1ರ ಪ್ರದೇಶದಲ್ಲಿ ಬದಲಿ ಭೂಮಿಯನ್ನು ನೀಡಿದ್ದರೂ ಅರಣ್ಯ ಇಲಾಖೆಯವರು ನಿರಾಶ್ರಿತರನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವುದು ಖಂಡನೀಯ, ಈ ಬಗ್ಗೆ ತುರ್ತು ಕ್ರಮವಹಿಸಿ ಎಂದು ವಿಧಾನಸಭೆಯ ಮಾಜಿ ಸ್ಪೀಕರ್‌ ಕೃಷ್ಣ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರನ್ನು ಒತ್ತಾಯಿಸಿದರು.

ಕಾರ್ಯನಿಮಿತ್ತ ಪಟ್ಟಣಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಅವರನ್ನು ನಿರಾಶ್ರಿತರ ತಂಡದೊಂದಿಗೆ ಭೇಟಿ ಮಾಡಿದ ಅವರು, ನಿರಾಶ್ರಿತರ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳಿಗೆ ವಿವರಿಸಿ, ಅರಣ್ಯ ಇಲಾಖೆಯವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಹೇಮಾವತಿ ಜಲಾಶಯದ ನಿರ್ಮಾಣಕ್ಕೆ ಭೂಮಿ ಬಿಟ್ಟು ಕೊಟ್ಟ ನಿರಾಶ್ರಿತರಿಗೆ ಸರ್ಕಾರವು ಮಾನವೀಯ ನೆಲೆಗಟ್ಟಿನಲ್ಲಿ ಭೂಮಿಯನ್ನು ಮಂಜೂರು ಮಾಡಿಕೊಟ್ಟು 30ರಿಂದ 40ವರ್ಷಗಳು ಕಳೆಯುತ್ತಿದ್ದರೂ ರೈತರ ವಿರುದ್ಧ ಮೊಕದ್ದಮೆಗಳನ್ನು ಹೂಡಿ ತೊಂದರೆ ನೀಡುತ್ತಿದ್ದು, ಇದನ್ನು ತಪ್ಪಿಸಿ ಎಂದು ಮನವಿ ಮಾಡಿದರು.

ನಿರಾಶ್ರಿತ ರೈತರಾದ ನಾಗೇಗೌಡ, ರವಿ ಮೊಗಣ್ಣಗೌಡ, ಜಯರಾಮು, ಬೋರೇಗೌಡ ಎಂಬುವವರು ಕಳೆದ 30 ವರ್ಷಗಳಿಂದ ಕಚೇರಿಗಳಿಗೆ ಅಲೆದು ಅಲೆದೂ ನಮಗೂ ಸಾಕಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಕಿರುಕುಳದಿಂದ ನಮ್ಮನ್ನು ಕಾಪಾಡಿ ನಮ್ಮ ಭೂಮಿಯನ್ನು ನಮಗೆ ಕೊಡಿಸಿ, ಇಲ್ಲಾ ವಿಷ ಕೊಡಿ’ ಎಂದು ಕೈಮುಗಿದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಈ ಬಗ್ಗೆ ಪರಿಶೀಲಿಸುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.

ಮನವಿ: ಮುರುಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಆಶ್ರಯ, ಬಸವ ವಸತಿ ಯೋಜನೆ ಮನೆಗಳ ವಿತರಣೆ ಸರಿಯಾಗಿ ನಡೆದಿಲ್ಲ ಎಂದು ಆರೋಪಿಸಿದ ಕರವೇ ಕಾರ್ಯಕರ್ತರು ತಾಲ್ಲೂಕು ಘಟಕದ ಅಧ್ಯಕ್ಷ ಹೊನ್ನೇನಹಳ್ಳಿ ವೇಣು ನೇತೃತ್ವದಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ವಿವರಿಸಿದರು. ಪಿಡಿಒ ಹಾಗೂ ಸದಸ್ಯರು ಕಾನೂನು ಮೀರಿ ಹಂಚಿಕೆ ಮಾಡಿದ್ದು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಆರ್.ಯಶೋದಾ, ತಹಶೀಲ್ದಾರ್ ಕೆ.ರತ್ನಾ ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT