ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ ಇಲ್ಲ; ಬೀದಿದೀಪಗಳೂ ಬೆಳಗಲ್ಲ!

Last Updated 25 ಡಿಸೆಂಬರ್ 2017, 6:41 IST
ಅಕ್ಷರ ಗಾತ್ರ

ಯಾದಗಿರಿ: ಸಮರ್ಪಕ ಕುಡಿಯುವ ನೀರಿಲ್ಲ, ಇರುವ ಚರಂಡಿಗಳೂ ಸ್ವಚ್ಛಗೊಂಡಿಲ್ಲ, ಬೀದಿದೀಪಗಳೂ ಬೆಳಕು ನೀಡುತ್ತಿಲ್ಲ, ಕಸ ತುಂಬಿದ ಇಕ್ಕಟ್ಟಾದ ರಸ್ತೆಗಳು, ರಾತ್ರಿಯಾದರೆ ಕಗ್ಗತ್ತಲು..

ನಗರದ ಐತಿಹಾಸಿಕ ಕೋಟೆಯ ಬಡದಲ್ಲಿರುವ ನಗರದವಾರ್ಡ್‌ 11ರಲ್ಲಿ ಬರುವ ಕೋಲಿವಾಡ, ಕೋಟಗೇರಾ ವಾಡಾ, ಬಸಣ್ಣ ಗುಡಿ, ಸರ್ಕಾರಿ ಅಕ್ಕಿ ಗಿರಣಿ ಹಿಂದೆ ಬರುವ ಹೊರಪೆಟ್ಟಾ ಬಡಾವಣೆಯಲ್ಲಿ ಈ ಚಿತ್ರಣ ಕಂಡುಬರುತ್ತದೆ.

ಈ ಬಡಾವಣೆಗಳಲ್ಲಿ ಮುಸ್ಲಿಮರು, ಕುರುಬರು, ದಲಿತರು ಹೀಗೆ ಹಿಂದುಳಿದ ಜನಾಂಗ ಹೆಚ್ಚಾಗಿ ವಾಸ ಮಾಡುತ್ತಿವೆ. ಕನಿಷ್ಠ ಸೌಲಭ್ಯಗಳಿಲ್ಲದೇ ನಿತ್ಯ ಸಂಕಷ್ಟ ಅನುಭವಿಸುತ್ತಿದ್ದರೂ, ನಗರಸಭೆ ಇತ್ತ ಕಣ್ಣು ಹಾಯಿಸಿದಂತಿಲ್ಲ. ಇಕ್ಕಟ್ಟಾದ ರಸ್ತೆಗಳಲ್ಲಿ ನಿತ್ಯ ಜನರು ನಗರಸಭೆಗೆ ಹಿಡಿ ಶಾಪ ಹಾಕುತ್ತಾರೆ. ಅಲ್ಲಲ್ಲಿ ಅವೈಜ್ಞಾನಿಕವಾಗಿ ಸಿಸಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದರೆ, ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಾಣಗೊಳಿಸಿಲ್ಲ. ಇದರಿಂದ ರಸ್ತೆ ಪಕ್ಕದಲ್ಲಿ ನೀರು ಸಂಗ್ರಹಗೊಂಡಿರುವುದರಿಂದ ಸೊಳ್ಳೆ ಉತ್ಪತ್ತಿಯ ತಾಣವಾಗಿ ಮಾರ್ಪಟ್ಟಿವೆ. ಇದರಿಂದ ನಿವಾಸಿಗಳಿಗೆ ರೋಗಭೀತಿ ಎದುರಾಗಿದೆ ಎಂದು ನಿವಾಸಿಗಳು ನಗರಸಭೆ ಆಡಳಿತ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಅಪಾಯ ಆಹ್ವಾನಿಸುವ ವಿದ್ಯುತ್‌ ತಂತಿಗಳು: ಈ ಐದು ವರ್ಷಗಳಲ್ಲಿ 11ನೇ ವಾರ್ಡಿನಲ್ಲಿ ನಗರಸಭೆ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಂಡಿಲ್ಲ. ವಿದ್ಯುತ್‌ ಕಂಬಗಳನ್ನೂ ಸಹ ಬೇಡಿಕೆಯಷ್ಟು ಅಳವಡಿಸಿಲ್ಲ. ಹಾಗಾಗಿ, ನಿವಾಸಿಗಳು ದೂರದಲ್ಲಿನ ಕಂಬಗಳಿಂದ ವಿದ್ಯುತ್‌ ಸಂಪರ್ಕ ಪಡೆದಿದ್ದಾರೆ.

ಇದರಿಂದಾಗಿ ವಿದ್ಯುತ್‌ ತಂತಿಗಳು ಜೋತುಬಿದ್ದಿದ್ದು, ಅಪಾಯ ಆಹ್ವಾನಿಸುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ನಗರಸಭೆ ಸದಸ್ಯರಿಗೆ, ಅಧ್ಯಕ್ಷರಿಗೆ, ಪೌರಾಯುಕ್ತರಿಗೆ ಮನವಿ ನೀಡುವ ಮೂಲಕ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಇಲ್ಲಿನ ನಿವಾಸಿಗಳಾದ ಬೀರೇಶ ಗೋಗೇನೂರ ದೂರುತ್ತಾರೆ.

ಬಯಲು ಶೌಚಾಲಯವೇ ಗತಿ!: ಕೂಲಿಕಾರ್ಮಿಕರಾಗಿರುವ ಇಲ್ಲಿನ ನಿವಾಸಿಗಳಿಗೆ ವೈಯಕ್ತಿ ಶೌಚಾಲಯ ಕುರಿತು ಹೆಚ್ಚಿನ ಅರಿವು ಇಲ್ಲದ ಕಾರಣ ಇಲ್ಲಿನ ನಿವಾಸಿಗಳು ಬಹುತೇಕ ಸರ್ಕಾರಿ ಅಕ್ಕಿಗಿರಣಿ ಹಿಂಭಾಗ ಬಯಲು ಶೌಚಾಲಯವನ್ನೇ ಅವಲಂಬಿಸಿಕೊಂಡಿದ್ದಾರೆ. ಇದರಿಂದ ಮಳೆಗಾಲದಲ್ಲಿ ಇಡೀ ಬಡಾವಣೆ ದುರ್ನಾತದಿಂದ ಬಳಲುತ್ತದೆ. ಇದರಿಂದ ನಿವಾಸಿಗಳ ಆರೋಗ್ಯ ಆಗಾಗ ಹದಗೆಡುತ್ತಿದೆ ಎನ್ನುತ್ತಾರೆ ಬೀರೇಶ, ರೆಡ್ಡಿ ಕೋಟರಕಿ.

‘ಅಭಿವೃದ್ಧಿಗೆ ಜನರೇ ಬಿಡುವುದಿಲ್ಲ’

‘ನಗರೋತ್ಥಾನ ಯೋಜನೆಯಡಿ ಅಂದಾಜು ₹2 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು 11ನೇ ವಾರ್ಡಿನಲ್ಲಿ ಹಮ್ಮಿಕೊಳ್ಳಲಾಗಿದೆ. ಸಿಸಿ ರಸ್ತೆ, ಚರಂಡಿ ಕಾಮಗಾರಿಗಳನ್ನು ನಡೆಸಲಾಗಿದೆ’ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಮಾಹಿತಿ ನೀಡಿದರು.

‘ರಸ್ತೆ ವಿಸ್ತರಣೆ ಕಾಮಗಾರಿ ಹಮ್ಮಿಕೊಳ್ಳಲು ಅಲ್ಲಿನ ನಿವಾಸಿಗಳು ಸಹಕರಿಸುತ್ತಿಲ್ಲ. ವೈಯಕ್ತಿ ಸಮಸ್ಯೆಗಳನ್ನು ಮುಂದೆ ಇಟ್ಟುಕೊಂಡು ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳನ್ನು ಅಡ್ಡಿಪಡಿಸುಂತಹ ಪ್ರರಕಣಗಳು ಅಲ್ಲಿ ನಡೆದಿವೆ. ಸದ್ಯ ವಿದ್ಯುತ್ ಕಂಬಗಳನ್ನು ಅಳವಡಿಸಲು ಕ್ರಮಕೈಗೊಳ್ಳಲಾಗುವುದು’ ಎಂದರು.

* *

11ನೇ ವಾರ್ಡ್‌ ಸಂಪೂರ್ಣ ಕೊಳೆಗೇರಿ ಪ್ರದೇಶ. ಹಂತಹಂತವಾಗಿ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲಾಗುತ್ತಿದೆ.
ನಾಗಪ್ಪ, ಸದಸ್ಯ,11ನೇ ವಾರ್ಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT