ವಿಜಯಪುರ: ವಿಶಿಷ್ಟ ಧ್ವನಿಯ ಹಿನ್ನೆಲೆ ಗಾಯಕರಾಗಿ ಚಲನಚಿತ್ರ ಲೋಕದಲ್ಲಿ ಅಜರಾಮರರಾದ ಘಂಟಸಾಲ ಅವರನ್ನು ಅನುಕರಿಸುವವರು ವಿರಳ. ಆದರೆ ಪಟ್ಟಣದಲ್ಲಿ ಭಾನುವಾರ ಹಾರ್ಮೋನಿಯಂ ನುಡಿಸುತ್ತಾ ಘಂಟಸಾಲ ಅವರ ಮಧುರ ಗೀತೆಗಳನ್ನು ಹಾಡುತ್ತಾ ಸಾಗಿದ್ದ ವ್ಯಕ್ತಿಗಳಿಬ್ಬರು ಜನರ ಆಕರ್ಷಣೆಯ ಕೇಂದ್ರವಾಗಿದ್ದರು.
ಮಧುರ ಗೀತೆಗಳ ಸೊಲ್ಲನ್ನು ತಿಳಿದಿದ್ದ ಹಿರಿಯರು ಆ ದನಿಗೆ ಕಿವಿಯಾಗಿ, ಇದ್ದ ಕೆಲಸವನ್ನು ಬಿಟ್ಟು ಅವರ ಹತ್ತಿರ ನಿಂತರೆ, ಯುವಕರೂ ಸುಸ್ವರಕ್ಕೆ ಮಾರುಹೋಗಿ ಇವರ ಬಳಿ ಜಮಾಯಿಸಿದ್ದರು. ಚಿತ್ತೂರಿನ ಗೋವಿಂದರಾಜು ತನ್ನ ಪತ್ನಿ ದಾನಮ್ಮ ಅವರೊಂದಿಗೆ ಹಾಡುವ ಕಲೆಯಿಂದ ಭಿಕ್ಷಾಟನೆ ನಡೆಸುತ್ತಾ ಊರೂರು ಸುತ್ತುತ್ತಾ ವಿಜಯಪುರಕ್ಕೆ ಬಂದಿದ್ದಾರೆ.
ಗಂಡನೊಂದಿಗೆ ಹೆಂಡತಿಯೂ ಸುಸ್ವರದಿಂದ ಗತಕಾಲದ ಸುಂದರ ಗೀತೆಗಳನ್ನು ಹಾಡುತ್ತಾ ಘಂಟಸಾಲರನ್ನು ನೆನಪಿಸುತ್ತಿದ್ದಾರೆ. ಪಟ್ಟಣದ ಜನರು ಘಂಟಸಾಲ ಅವರ ಕಂಚು ಕಂಠದ ಎತ್ತರದ ಧ್ವನಿಯ ಮಾಧುರ್ಯದ ಹಾಡುಗಳನ್ನು ಈಗ ಪುನಃ ಸವಿಯುವಂತಾಗಿದೆ.
ಸತ್ಯ ಹರಿಶ್ಚಂದ್ರ ಚಿತ್ರದ ಹಾಡು ‘ಹೇ ಚಂದ್ರಚೂಡ ಮದನಾಂತಕ ಶೂಲಪಾಣಿ, ಕಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ’ ದೇವತಾ ಚಿತ್ರದ ‘ಆಲಯಾನ ವೆಲಸಿನ ಈ ಜೀವನ ಜ್ಯೋತಿ’, ಜೀವನದುದ್ದಕ್ಕೂ ಬಂಧಗಳನ್ನು ಹೊತ್ತರೂ ಸತ್ತ ನಂತರ ಹೊರುವವರಿರರು ಎಂಬ ವಾಸ್ತವ ಸತ್ಯ ಹೇಳುವ ‘ಈ ಜೀವನ ತರಂಗಾಲಲೊ, ಆ ದೇವುನಿ ಚದುರಂಗಂಲೊ’ ಎಂಬ ಸಾರ್ವಕಾಲಿಕ ಗೀತೆಗಳನ್ನು ಹಾಡಿ ಜನರನ್ನು ರಂಜಿಸಿದರು.
ಕಲೆಯ ದೇವತೆ ಬಡವಳು ಎಂಬ ಆಡು ಮಾತಿನಂತೆ ಉತ್ತಮ ಕಂಠ ಹೊಂದಿದ ಗೋವಿಂದರಾಜು ದಂಪತಿಯದ್ದು ಕಷ್ಟದ ಬದುಕು. ಇರುವ ಮೂರು ಮಕ್ಕಳು ಇದೇ ವೃತ್ತಿಯನ್ನು ಮಾಡಿಕೊಂಡು ಬೇರೆ ಬೇರೆ ಕಡೆಗಳಲ್ಲಿ ಸುತ್ತಾಡುತ್ತಾ ಜೀವನ ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರೆ.
‘ಯಾರೂ ವಿದ್ಯಾಭ್ಯಾಸ ಮಾಡಿಲ್ಲ. ನಮ್ಮ ತಾತನ ಕಾಲದಿಂದಲೂ ಕಲೆಯನ್ನೇ ನಂಬಿದ್ದೇವೆ. ಹಿಂದೆ ಹರಿಕಥೆ ನಡೆಸುತ್ತಿದ್ದೆವು. ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದೆವು. ಆದರೆ ಈಗ ಅವುಗಳನ್ನು ಆಸ್ವಾದಿಸುವವರು, ಪೋಷಿಸುವವರು ಕಡಿಮೆಯಾಗಿದ್ದಾರೆ. ಜಮೀನು ಇಲ್ಲದ ಕಾರಣ ನಾವು ತಿಳಿದ ವಿದ್ಯೆಯನ್ನೇ ಅವಲಂಬಿಸಿ ಭಿಕ್ಷೆಯ ಮೂಲಕ ಬದುಕುವಂತಾಗಿದೆ. ಹಾರ್ಮೋನಿಯಂ ನಮ್ಮ ಆಸ್ತಿ’ ಎಂದು ಅವರು ಹೇಳಿದರು. ಇವರ ಕಲೆಗೆ ತಲೆದೂಗಿದ ಜನರು ₹ 10, 5 ಹೀಗೆ ಅವರ ಮನಸ್ಸಿಗೆ ತೋಚಿದಂತೆ ಹಣ ನೀಡಿ, ಪ್ರೋತ್ಸಾಹ ಮಾಡುತ್ತಿದ್ದಾರೆ.
ಮುನಿನಾರಾಯಣ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.