ಹರಿಹರ: ನಗರದ ಆರೋಗ್ಯಮಾತೆ ಚರ್ಚ್ನಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮವು ಹಿಮ್ಮಡಿಯಾಗಿದೆ. ಡಿ.24ರ ಮಧ್ಯರಾತ್ರಿಯಿಂದಲೇ ಚರ್ಚ್ನ ಅಲಂಕಾರ ಹಾಗೂ ಏಸುವಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳು ನಡೆದವು. ಶಿವಮೊಗ್ಗ ವಿಭಾಗದ ಧರ್ಮಾಧ್ಯಕ್ಷ ಡಾ.ಫ್ರಾನ್ಸಿಸ್ ಸೆರಾವೋ, ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿದ್ದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಸಾವಿರಕ್ಕೂ ಹೆಚ್ಚು ಕ್ರೈಸ್ತರು ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮದಲ್ಲಿ ಕ್ರಿಸ್ಮಸ್ ವಿಶೇಷ ಕೇಕ್ ತಯಾರಿಸಿ ಹಂಚಲಾಗುವುದು ಎಂದು ಅವರು ತಿಳಿಸಿದರು.
ಚರ್ಚ್ ಮುಖ್ಯಪಾದ್ರಿ ಡಾ.ಅಂತೋನಿ ಪೀಟರ್ ಮಾತನಾಡಿ, ಕ್ರಿಸ್ಮಸ್ ಜನಮಾನಸ ಗೆದ್ದ ಪ್ರೀತಿಯ ಹಬ್ಬ. ಮನಕುಲದ ಉದ್ಧಾರಕ್ಕಾಗಿ ದೇವರು ತನ್ನ ಪುತ್ರನನ್ನು ಭೂಮಿಗೆ ಕಳುಹಿಸಿದ ಪವಿತ್ರ ದಿನ. ಈ ದಿನವನ್ನು ವಿಶ್ವದ್ಯಾದಂತ ಕ್ರೈಸ್ತರು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ ಎಂದರು.
ಹಬ್ಬದ ಪ್ರಯುಕ್ತ ಸೋಮವಾರ ಸಂಜೆ ಕ್ರಿಸ್ಮಸ್ ಸೌಹಾರ್ದ ಕೂಟ ಏರ್ಪಡಿಸಲಾಗುವುದು. ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಭಾಗವಹಿಸುವರು. ಏಸುಕ್ರಿಸ್ತ್ನ ಜನನದ ದೃಶ್ಯಾವಳಿಗಳನ್ನು ಬಿತ್ತರಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಸರ್ವರೂ ಪಾಪ ಕಾರ್ಯಗಳಿಂದ ಮುಕ್ತರಾಗಿ, ಶಾಂತಿ ಹಾಗೂ ನೆಮ್ಮದಿಯಿಂದ ಜೀವಿಸಬೇಕು ಎಂಬುದೇ ಏಸು ಅವರ ಜನ್ಮ ದಿನದ ಆಶಯವಾಗಿದೆ ಎಂದರು. ಇದೇ ವರ್ಷ ಚರ್ಚ್ ಕಟ್ಟಡ ನಿರ್ಮಿಸಿ 25ವರ್ಷಗಳಾಗಿದ್ದು, ರಜತ ಮಹೋತ್ಸವವನ್ನು ಆಗಸ್ಟ್ನಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.