ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರವಾಸಿಗಳಿಗೆ ಜೀವ ಜಲದ ಭಾಗ್ಯ

Last Updated 25 ಡಿಸೆಂಬರ್ 2017, 9:33 IST
ಅಕ್ಷರ ಗಾತ್ರ

ಕೋಲಾರ: ನಗರವಾಸಿಗಳ ಜೀವ ಜಲದ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನಗರಸಭೆ ಹಾಗೂ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಕೆಯುಡಬ್ಲ್ಯೂಎಸ್‌ಡಿಬಿ) ಪ್ರತಿ ವಾರ್ಡ್‌ನಲ್ಲೂ ತಲಾ ಒಂದೊಂದು ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲು ಮುಂದಾಗಿವೆ.

ಸುಮಾರು 30 ಚದರ ಕಿ.ಮೀ ವಿಸ್ತಾರವಾಗಿರುವ ನಗರದಲ್ಲಿ 35 ವಾರ್ಡ್‌ಗಳಿದ್ದು, ಜನಸಂಖ್ಯೆ 2 ಲಕ್ಷದ ಗಡಿ ದಾಟಿ ಬೆಳೆದಿದೆ. ನಗರ ವಿಸ್ತಾರವಾದಂತೆ ಜನಸಂಖ್ಯೆ ವೃದ್ಧಿಸುತ್ತಿದೆ. ಇದಕ್ಕೆ ಅನುಗುಣವಾಗಿ ನೀರಿಗೆ ಬೇಡಿಕೆ ಹೆಚ್ಚುತ್ತಿದೆ. ಈಗಿನ ಜನಸಂಖ್ಯೆಗೆ ಹೋಲಿಸಿದರೆ ನಗರಕ್ಕೆ ಪ್ರತಿನಿತ್ಯ ಸುಮಾರು 70 ಲಕ್ಷ ಲೀಟರ್‌ ನೀರಿನ
ಅಗತ್ಯವಿದೆ.

ಸರ್ಕಾರದ ನಿಯಮದ ಪ್ರಕಾರ ಪ್ರತಿ ವ್ಯಕ್ತಿಗೆ ದಿನಕ್ಕೆ 135 ಲೀಟರ್‌ ಶುದ್ಧ ಕುಡಿಯುವ ನೀರು ಕೊಡಬೇಕು. ಆದರೆ, ನಗರದಲ್ಲಿ ಅರ್ಧಕ್ಕೂ ಕಡಿಮೆ ಅಂದರೆ 45 ಲೀಟರ್‌ ಮಾತ್ರ ಕೊಡಲಾಗುತ್ತಿದೆ. ನಗರದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನದಿ, ಹೊಳೆಯಂತಹ ಯಾವುದೇ ಮೇಲ್ಮೈ ನೀರಿನ ಮೂಲವಿಲ್ಲ. ಹೀಗಾಗಿ ನಗರಕ್ಕೆ ಕೊಳವೆ ಬಾವಿಗಳ ನೀರನ್ನೇ ನೆಚ್ಚಿಕೊಳ್ಳಲಾಗಿದೆ.

ನಗರದೊಳಗಿನ ಹಾಗೂ ಸುತ್ತಮುತ್ತಲಿನ ಕೊಳವೆ ಬಾವಿಗಳ ಅಂತರ್ಜಲ ಮಟ್ಟ 1,50-0 ಅಡಿಗಿಂತಲೂ ಆಳಕ್ಕೆ ಕುಸಿದಿದ್ದು, ಇಷ್ಟು ಆಳದಿಂದ ತೆಗೆದ ನೀರು ವಿಷಕಾರಿ ಫ್ಲೋರೈಡ್‌ ಅಂಶದಿಂದ ಕೊಡಿರುತ್ತದೆ. ಹೀಗಾಗಿ ಈ ನೀರು ಕುಡಿಯುವುದಕ್ಕೆ ಯೋಗ್ಯವಲ್ಲ ಎಂದು ವೈದ್ಯರು ಹೇಳುತ್ತಾರೆ. ಆದರೆ, ನಗರವಾಸಿಗಳು ಅನಿವಾರ್ಯವಾಗಿ ಈ ನೀರನ್ನೇ ಬಳಸುತ್ತಿರುವುದರಿಂದ ವಿಷಕಾರಿ ಫ್ಲೋರೈಡ್‌ ಅಂಶ ದೇಹ ಸೇರುತ್ತಿದೆ. ಇದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ.

ಅಮೃತ್‌ ಅನುದಾನ: ನಗರವಾಸಿಗಳ ಆರೋಗ್ಯ ದೃಷ್ಟಿಯಿಂದ ಹಾಗೂ ನೀರಿನ ಬವಣೆ ಪರಿಹರಿಸುವ ಉದ್ದೇಶಕ್ಕಾಗಿ ಕೆಯುಡಬ್ಲ್ಯೂಎಸ್‌ಡಿಬಿ ಅಟಲ್‌ ನಗರ ಪುನರುತ್ಥಾನ
ಹಾಗೂ ನಗರ ಪರಿವರ್ತನಾ ಯೋಜನೆಯಡಿ (ಅಮೃತ್‌) ₹ 4 ಕೋಟಿ ಅಂದಾಜು ವೆಚ್ಚದಲ್ಲಿ 35 ವಾರ್ಡ್‌ಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾರ್ಯ ಆರಂಭಿಸಿದೆ.

ಪ್ರತಿ ಘಟಕಕ್ಕೆ ಸುಮಾರು ₹ 11 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಎಂ.ಎನ್‌.ರಮೇಶ್‌ ಎಂಜಿನಿಯರ್‌್ಸ ಅಂಡ್‌ ಕಾಂಟ್ರ್ಯಾಕ್ಟರ್‌್ಸ ಏಜೆನ್ಸಿಗೆ ಘಟಕಗಳ ನಿರ್ಮಾಣದ ಟೆಂಡರ್‌ ನೀಡಲಾಗಿದ್ದು, ಈಗಾಗಲೇ ಕಾಮಗಾರಿ ಆರಂಭವಾಗಿದೆ. ಕೆಲ ವಾರ್ಡ್‌ಗಳಲ್ಲಿ ಘಟಕಗಳ ಕಾಮಗಾರಿ ಪೂರ್ಣಗೊಂಡಿದ್ದು, ವಿದ್ಯುತ್‌ ಸಂಪರ್ಕ ಪಡೆಯಬೇಕಿದೆ. ಮತ್ತೆ ಕೆಲ ವಾರ್ಡ್‌ಗಳಲ್ಲಿ ಘಟಕಗಳಿಗೆ ಸ್ಥಳ ಗುರುತಿಸುವ ಪ್ರಕ್ರಿಯೆ ಮುಂದುವರಿದಿದೆ.

ಪ್ರತಿ ಘಟಕವು ಗಂಟೆಗೆ ಸುಮಾರು ಎರಡು ಸಾವಿರ ಲೀಟರ್‌ ನೀರು ಶುದ್ಧೀಕರಿಸುವ ಸಾಮರ್ಥ್ಯಹೊಂದಿವೆ. ಘಟಕಗಳಿಗೆ ನಗರಸಭೆಯ ಕೊಳವೆ ಬಾವಿಗಳಿಂದ ನೀರಿನ ಸಂಪರ್ಕ ‌ಕಲ್ಪಿಸಿ ಜನರಿಗೆ ಆದಷ್ಟು ಕಡಿಮೆ ದರದಲ್ಲಿ ನೀರು ಕೊಡಲು ಉದ್ದೇಶಿಸಲಾಗಿದೆ. ಏಜೆನ್ಸಿಯವರೇ 5 ವರ್ಷಗಳ ಕಾಲ ಘಟಕಗಳನ್ನು ನಿರ್ವಹಣೆ ಮಾಡುತ್ತಾರೆ. ನಂತರ ನಗರಸಭೆಗೆ ಹಸ್ತಾಂತರಿಸಲಾಗುತ್ತದೆ.

ಸ್ವೈಪಿಂಗ್ ಕಾರ್ಡ್‌: ಘಟಕಗಳಲ್ಲಿ ಎಟಿಎಂ ರೀತಿಯ ಸ್ವೈಪಿಂಗ್‌ ಮಷಿನ್‌ ಅಳವಡಿಸಲಾಗುತ್ತದೆ. ಏಜೆನ್ಸಿಯವರು ಸಾರ್ವಜನಿಕರಿಂದ ಮುಂಗಡ ಹಣ ಪಡೆದು ಎಟಿಎಂ ಕಾರ್ಡ್‌
ಮಾದರಿಯ ಸ್ವೈಪಿಂಗ್ ಕಾರ್ಡ್‌ ವಿತರಿಸುತ್ತಾರೆ. ಸಾರ್ವಜನಿಕರು ಆ ಕಾರ್ಡ್‌ ಬಳಸಿ ಘಟಕಗಳಲ್ಲಿ ನೀರು ಪಡೆಯಬಹುದು. ಪ್ರತಿ ಬಾರಿ ಕಾರ್ಡ್‌ ಬಳಸಿದಾಗ ಹಣವು ನಗರಸಭೆ ಆಯುಕ್ತರ ಖಾತೆಗೆ ವರ್ಗಾವಣೆಯಾಗುತ್ತದೆ. ಈ ರೀತಿಯ ವ್ಯವಸ್ಥೆ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಯಾಗಿ ಯಶಸ್ಸು
ಕಂಡಿದೆ.

* * 

ಅಮೃತ್‌ ಯೋಜನೆಯಡಿ ಪ್ರತಿ ವಾರ್ಡ್‌ನಲ್ಲೂ ನೀರಿನ ಘಟಕ ನಿರ್ಮಿಸಲಾಗುತ್ತಿದೆ. 22 ಘಟಕಗಳ ಕಾಮಗಾರಿ ಪೂರ್ಣಗೊಂಡಿದೆ
ಶಿವರಾಮ್‌ ನಾಯಕ್‌, ಸಹಾಯಕ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT