ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತಕ್ಕೆ ಸಿಗದ ಬೆಲೆ: ರೈತರ ಪರದಾಟ

Last Updated 26 ಡಿಸೆಂಬರ್ 2017, 5:44 IST
ಅಕ್ಷರ ಗಾತ್ರ

ಜಾಲಹಳ್ಳಿ: ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಹಾಗೂ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ಈ ವರ್ಷ ನಾರಾಯಣಪುರ ಜಲಾಶಯದಲ್ಲಿ ನೀರಿನ ಕೊರತೆ ಇಲ್ಲದೇ ಇದ್ದರೂ ಕಾಲುವೆಗಳಿಗೆ ನೀರು ಹರಿಸಲು ವಾರಬಂದಿ ಮಾಡಿದರೂ ಷ್ಟಪಟ್ಟು ಬೆಳೆದ ಭತ್ತಕ್ಕೆ ಬೆಲೆ ಇಲ್ಲದಂತಾಗಿದೆ.

ಪ್ರಾರಂಭದಲ್ಲಿ 75ಕೆ.ಜಿಗೆ ₹1,400 ಬೆಲೆ ಇತ್ತು. ದಲ್ಲಾಳಿಗಳು ತಮಗೆ ಬೇಕಾಗುವಷ್ಟು ಮಾತ್ರ ಭತ್ತ ಖರೀದಿ ಮಾಡಿದರು. ಎಲ್ಲ ರೈತರ ಫಸಲು ಏಕಕಾಲದಲ್ಲಿ ಬಾರದೆ ಇರುವುದು ಈ ಸಮಸ್ಯೆಗೆ ಕಾರಣ ಎಂಬುದು ರೈತರ ಆರೋಪ.

ಸ್ವಲ್ಪ ತಡವಾಗಿ ನಾಟಿ ಮಾಡಿದ ರೈತರ ಫಸಲಿನ ಕಟಾವು ಸ್ವಲ್ಪ ವಿಳಂಬವಾಗಿರುವುದರಿಂದ ಬೆಲೆ ಕುಸಿದಿದೆ. ದಲ್ಲಾಳಿಗಳು ಖರೀದಿ ಮಾಡುವುದಕ್ಕೆ ಮುಂದೆ ಬರುತ್ತಿಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಪಟ್ಟಣ ಸೇರಿದಂತೆ ದೇವದುರ್ಗ ದ ಕೃಷಿ ಉತ್ಪನ್ನ ಮಾರು ಕಟ್ಟೆಯಲ್ಲಿ ಭತ್ತ ಖರೀದಿ ಮಾಡುವ ವ್ಯವಸ್ಥೆ ಸಮರ್ಪಕವಾಗಿಲ್ಲ. ಭತ್ತದ ಫಲಸಲಿಗೆ ಬೆಲೆ ಸಿಗುತ್ತಿಲ್ಲ.

‘ಖರೀದಿ ಆಗದೆ ರಾಶಿ ಮಾಡಿದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ವರ್ಷ ಭತ್ತ ಬೆಳೆಯಲು ಅತಿಹೆಚ್ಚು ವೆಚ್ಚ ಮಾಡಲಾಗಿದೆ. ಒಂದು ಎಕರೆಯಲ್ಲಿ ಭತ್ತ ಬೆಳೆಯಲು ಸಮಾರು ₹25 ಸಾವಿರ ವೆಚ್ಚ ಮಾಡಲಾಗಿದೆ’ ಎಂದು ಗಲಗ ಗ್ರಾಮದ ರೈತ ದಾವಲ್‌ಸಾಬ್‌ ಹೇಳುತ್ತಾರೆ.

‘ಮಾರುಕಟ್ಟೆಯಲ್ಲಿ ಭತ್ತಕ್ಕೆ ಬೇಡಿಕೆ ಇದ್ದರೂ ರೈತರು ದೂರದ ತಾಲ್ಲೂಕು ಕೇಂದ್ರದ ಮಾರುಕಟ್ಟೆಗೆ ಸಾಗಣೆ ಮಾಡುವುದು ಕಷ್ಟವಾಗಿದೆ. ₹1,300 ಕ್ಕಿಂತಲೂ ಕಡಿಮೆ ದರದಲ್ಲಿ ಭತ್ತವನ್ನು ಖರೀದಿ ಮಾಡಲಾಗುತ್ತಿದೆ. ರಸ್ತೆ ಬದಿಯಲ್ಲಿ ಹಾಕಿರುವ ರಾಶಿಯನ್ನು ಕಾಯುವಂಥ ಸ್ಥಿತಿ ಇದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಭತ್ತವನ್ನು ಖರೀದಿ ಮಾಡುವುದಕ್ಕೆ ಯಾರು ಮುಂದೆ ಬರುತ್ತಿಲ್ಲ. ಹೀಗಾಗಿ ಸಣ್ಣ ರೈತರು ಭತ್ತ ಸಂಗ್ರಹಿಸಿಡಲು ಪರದಾಡುತ್ತಿದ್ದಾರೆ. ಪಟ್ಟಣದಲ್ಲಿ ಎಪಿಎಂಸಿ ಕೇಂದ್ರ ಇದ್ದರೂ ಅಧಿಕಾರಿಗಳು ಇಲ್ಲದೇ ಹಾಳು ಬಿದ್ದಿದೆ. ತಕ್ಷಣವೇ ಪಟ್ಟಣದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು. ಬೆಳೆದ ಫಸಲು ಮಾರಾಟ ಮಾಡಲು ಒಂದು ಮಾರುಕಟ್ಟೆ ವ್ಯವಸ್ಥೆ ಇಲ್ಲವಾದರೆ, ಸಂಸದರು, ಶಾಸಕರು ಅವರ ಕೆಲಸವಾದರೂ ಏನು’ ಎಂದು ಪ್ರಶ್ನಿಸುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ನರಸಣ್ಣ ನಾಯಕ. ಶೀಘ್ರ ಭತ್ತ ಮಾರಾಟ ವ್ಯವಸ್ಥೆ ಕಲ್ಪಿಸಿ, ಬೆಲೆ ನಿಗದಿಗೆ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸುತ್ತಾರೆ. 

* * 

ತಾಲ್ಲೂಕಿನಲ್ಲಿ ರೈತರು ಬೆಳೆದ ವಿವಿಧ ಬೆಳೆಗಳನ್ನು ಮಾರಾಟ ಮಾಡುವುದಕ್ಕೆ ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು.
ಹುಸೇನಪ್ಪ ಜಾಲಹಳ್ಳಿ ,ಅಧ್ಯಕ್ಷ
ಎಣ್ಣೆಕಾಳು ರೈತ ಸೇವಾ ಸಹಕಾರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT