ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ತಾಣಗಳಿಗೆ ಜನರ ಲಗ್ಗೆ

Last Updated 26 ಡಿಸೆಂಬರ್ 2017, 7:13 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ವಾರಾಂತ್ಯ ಮತ್ತು ಕ್ರಿಸ್‌ಮಸ್‌ ರಜೆ ಸಾಲಾಗಿ ಬಂದಿರುವುದರಿಂದ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಲ್ಲಿ ಪ್ರವಾಸಿಗರ ದಂಡು ಹೆಚ್ಚಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ವಿದೇಶಿಗರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಬರುತ್ತಿರುವ ಪ್ರವಾಸಿಗರು ಪ್ರಾಣಿಗಳು ಮತ್ತು ಪ್ರಕೃತಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಹದಿನೈದು ದಿನಗಳ ಹಿಂದೆ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದ ಕಾರಣ ಈಗಲೂ ಕಾಡಿನಲ್ಲಿ ಹಚ್ಚಹಸಿರು ತುಂಬಿಕೊಂಡಿದೆ. ಸಣ್ಣನೆ ಚಳಿಯ ಆಹ್ಲಾದಕರ ವಾತಾವರಣ ಪ್ರವಾಸಿಗರನ್ನು ಮುದಗೊಳಿಸುತ್ತಿದೆ.

ಬಂಡೀಪುರದಲ್ಲಿ ಪ್ರಾಣಿಗಳ ದರ್ಶನವಾದರೆ, ಗೋಪಾಲಸ್ವಾಮಿ ಬೆಟ್ಟದಲ್ಲಿ ಹಿಮದಿಂದ ಆವೃತವಾಗಿರುವ ಪರಿಸರ ಸೆಳೆಯುತ್ತಿದೆ. ದೇವಸ್ಥಾನಕ್ಕೆ ವಾರಾಂತ್ಯ ಹಾಗೂ ರಜೆಯ ದಿನಗಳಂದು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ.

ಶನಿವಾರ ಹಾಗೂ ಭಾನುವಾರ ದಂದು ಬೆಟ್ಟಕ್ಕೆ ತೆರಳಲು ನಿರೀಕ್ಷೆಗೂ ಮೀರಿ ಪ್ರವಾಸಿಗರು ಬಂದಿದ್ದರಿಂದ ಸೇವೆಯಲ್ಲಿದ್ದ 5 ಮಿನಿ ಬಸ್‌ಗಳು ಸಾಲದೆ, ಹೆಚ್ಚುವರಿಯಾಗಿ ಅರಣ್ಯ ಇಲಾಖೆ ಸಹಯೋಗದಲ್ಲಿ ಖಾಸಗಿ ವ್ಯಾನ್‌ಗಳ ಸೇವೆ ಪಡೆದುಕೊಳ್ಳಲಾಯಿತು ಎಂದು ಸಾರಿಗೆ ಇಲಾಖೆ ಅಧಿಕಾರಿ ಜಯಕುಮಾರ್ ತಿಳಿಸಿದರು.

ಬಂಡೀಪುರಕ್ಕೆ ಪ್ರವಾಸಿಗರ ಲಗ್ಗೆ: ಇಲ್ಲಿ ಸತತ ಮಳೆಯಾಗಿರುವುದ ರಿಂದ ಬಂಡೀಪುರದ ಕಾಡಿನಲ್ಲಿ ದಟ್ಟು ಹಸಿರು ತುಂಬಿಕೊಂಡಿದೆ. ಪ್ರಾಣಿ ಪಕ್ಷಿಗಳು ರಸ್ತೆ ಬದಿಗಳಲ್ಲೇ ದರ್ಶನ ನೀಡುತ್ತಿವೆ. ಸಫಾರಿಗೆ ತೆರಳಿದವರಿಗೆ ಇತ್ತೀಚೆಗೆ ಹುಲಿ, ಆನೆ ಮುಂತಾದ ಪ್ರಾಣಿಗಳು ಕಾಣಿಸಿಕೊಂಡಿವೆ. ಅವರು ತೆಗೆದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಪಡೆದುಕೊಳ್ಳುತ್ತಿವೆ. ಇದರಿಂದ ಹೆಚ್ಚಿನ ಪ್ರವಾಸಿಗರು ಬಂಡೀಪುರದತ್ತ ಧಾವಿಸುತ್ತಿದ್ದಾರೆ.

ಸಾಲು ರಜೆಗಳು ಇದ್ದಿದ್ದರಿಂದ ಮುಂಚೆಯೇ ಪ್ರವಾಸದ ಯೋಜನೆ ರೂಪಿಸಿಕೊಂಡವರು ಅತಿಥಿಗೃಹಗಳನ್ನು ಮುಂಗಡ ಕಾಯ್ದಿರಿಸಿದ್ದರು. ಇಲ್ಲಿನ ಎಲ್ಲ ಅತಿಥಿಗೃಹಗಳೂ ಕೆಲವು ದಿನಗಳ ಮುಂಚೆಯೇ ಭರ್ತಿಯಾಗಿದ್ದು, ಕಾಡಿನ ಪರಿಸರದಲ್ಲಿಯೇ ಉಳಿದುಕೊಂಡು ಸಫಾರಿ ತೆರಳುವ ಉದ್ದೇಶದಿಂದ ಬಂದ ಅನೇಕರು, ಕೊಠಡಿಗಳು ಸಿಗದೆ ನಿರಾಶೆಗೊಂಡರು. ಸಫಾರಿ ಆಕಾಂಕ್ಷಿಗಳ ದಂಡು ಹೆಚ್ಚಿದ್ದು, ಟಿಕೆಟ್‌ಗಾಗಿ ಉದ್ದನೆಯ ಸರತಿಸಾಲಿನಲ್ಲಿ ನಿಲ್ಲುವುದು ಅನಿವಾರ್ಯವಾಗಿತ್ತು.

ಟಿಕೆಟ್ ಸಿಕ್ಕವರು ಸಂಭ್ರಮಿಸಿದರೆ, ಗಂಟೆಗಟ್ಟಲೆ ನಿಂತರೂ ಕೊನೆಗೆ ಟಿಕೆಟ್ ಸಿಗದೆ ಕೆಲವರು ಬೇಸರದಿಂದ ವಾಪಸ್‌ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅವರಲ್ಲಿ ಕೆಲವರು ಊಟಿ ಮುಖ್ಯ ರಸ್ತೆಯಲ್ಲಿ ಕೆಕ್ಕನಹಳ್ಳ ಗಡಿಭಾಗದವರೆಗೆ ತಮ್ಮ ವಾಹನಗಳಲ್ಲೇ ಸಾಗಿ ರಸ್ತೆ ಬದಿಯಲ್ಲಿ ಪ್ರಾಣಿಗಳನ್ನು ಕಂಡು ಖುಷಿಪಟ್ಟರು.

‘ಇಲ್ಲಿ ಟಿಕೆಟ್ ಸಿಗಲಿಲ್ಲ. ಸಫಾರಿಗೆ ತೆರಳಿದ್ದರೆ ಪ್ರಾಣಿಗಳು ಕಾಣಿಸುತ್ತಿದ್ದವೋ ಇಲ್ಲವೋ ಗೊತ್ತಿಲ್ಲ. ಆದರೆ ರಸ್ತೆಯಲ್ಲಿ ಗಡಿಭಾಗದವರೆಗೆ ಹೋಗಿದ್ದರಿಂದ ಕಾಡೆಮ್ಮೆ, ಚಿರತೆ ಮತ್ತು ಜಿಂಕೆಗಳ ದರ್ಶನವಾಯಿತು’ ಎಂದು ಶಿವಮೊಗ್ಗದಿಂದ ಬಂದಿದ್ದ ಪ್ರವಾಸಿಗ ಕಿರಣ್ ವಿ. ನಾಯಕ್ ಖುಷಿ ಹಂಚಿಕೊಂಡರು.

ಈ ಮೂರು ದಿನಗಳಲ್ಲಿ ₹3 ಲಕ್ಷಕ್ಕೂ ಹೆಚ್ಚಿನ ಆದಾಯ ಬಂದಿದೆ. ಪ್ರವಾಸಿಗರು ಸಾಲುಗಟ್ಟಿ ಬರುತ್ತಿರುವುದರಿಂದ ಸಫಾರಿಗೆ ವಾಹನಗಳು ಸಾಲುತ್ತಿಲ್ಲ. ಹೆಚ್ಚುವರಿಯಾಗಿ ಜಂಗಲ್ ಲಾಡ್ಜ್ ವಾಹನಗಳನ್ನು ಬಳಕೆ ಮಾಡಿಕೊಂಡರೂ ಎಲ್ಲ ಪ್ರವಾಸಿಗರನ್ನು ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ.

* * 

ಮೂರು ನಾಲ್ಕು ದಿನಗಳಿಂದ ಬಂಡೀಪುರ ಅತಿಥಿಗೃಹದ ಎಲ್ಲ ಕೊಠಡಿಗಳು ಹಾಗೂ ಸುತ್ತಮುತ್ತಲಿನ ರೆಸಾರ್ಟ್‌ಗಳು ಭರ್ತಿಯಾಗಿದೆ. ಹಬ್ಬದ ರಜೆ ಇರುವುದರಿಂದ ಹೆಚ್ಚಿನ ಜನರು ಬರುತ್ತಿದ್ದಾರೆ.
ಶ್ರೀನಿವಾಸ್,
ಬಂಡೀಪುರ ವಲಯಾರಣ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT