ಶಿಗ್ಗಾವಿ: ‘ದೇಶದಲ್ಲಿ ಪ್ರತಿಯೊಬ್ಬರು ಸಮಾನತೆ, ಸಹಬಾಳ್ವೆಯಿಂದ ಬದುಕಬೇಕು. ಹಿಂದು ಸಂಘಟಕರು ಎಂದಿಗೂ ಕೋಮುವಾದಿಗಳಲ್ಲ. ಆದರೆ ಕೆಲವರು ಕೋಮುವಾದಿಗಳು ಎಂದು ಬಿಂಬಿಸುತ್ತಿದ್ದಾರೆ. ಎಂದು ರಾಷ್ಟ್ರೀಯ ಸ್ವಯಂ ಸೇವಕರ ಜಿಲ್ಲಾ ಘಟಕದ ಕಾರ್ಯವಾಹರ ಗುರುರಾಜ ಕುಲಕರ್ಣಿ ದೂರಿದರು.
ತಾಲ್ಲೂಕಿನ ಬಂಕಾಪುರ ಪಟ್ಟಣದ ಲಯನ್ಸ್ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಶಾಖಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಷ್ಟ್ರೀಯ ಸ್ವಯಂ ಸೇವಕರು ಶ್ರಮಿಸುತ್ತಿದ್ದಾರೆ. ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಬದುಕುವ ರೀತಿ ಹಿಂದತ್ವವಾಗಿದೆ’ ಎಂದರು.
ಡಾ.ಸುಖಿನ್ ಅರಳೆಲೆಮಠ ಮಾತನಾಡಿ, ‘ಈ ನಾಡಿನಲ್ಲಿ ಹುಟ್ಟಿಬೆಳೆದ ಪ್ರತಿಯೊಬ್ಬರಿಗೂ ಶಿಸ್ತು, ದೇಶಪ್ರಮ ಮೂಡಿಸುವ ಕಾಯಕ ಈ ಸಂಘಟನೆ ಮೂಲ ಉದ್ದೇಶವಾಗಿದೆ. ಏಕತೆಯಲ್ಲಿ ಐಕ್ಯತೆ ಮೂಡಿಸಬೇಕು. ಬಡತನ, ಅಜ್ಞಾನ, ಶೋಷಣೆಗಳು ದೂರಾಗಬೇಕು’ ಎಂದರು.
ಆರ್ಎಸ್ಎಸ್ ಜಿಲ್ಲಾ ಸಂಚಾಲಕ ಈಶ್ವರ ಹಾವನೂರ ಮಾತನಾಡಿ, ‘ಸ್ವಯಂ ಸಂಘಟಿಕರು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯುತ್ತಿದ್ದಾರೆ. ದೇಶಾಭಿಮಾನ ಮೂಡಿಸುವ ಜೊತೆಗೆ ದೇಶಕ್ಕಾಗಿ ತ್ಯಾಗ, ಬಲಿದಾನಕ್ಕೆ ಮುಂದಾಗಿದ್ದಾರೆ’ ಎಂದರು. ಕಾರ್ಯಕ್ರಮದ ಪೂರ್ವದಲ್ಲಿ ನೂರಾರು ಸ್ವಯಂ ಸೇವಕರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥ ಸಂಚಲನೆ ಜರುಗಿತು.