ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಭೂತವಾದಿಗಳಿಗೆ ಬುದ್ಧಿ ಕಲಿಸಿ: ಸಚಿವ

Last Updated 27 ಡಿಸೆಂಬರ್ 2017, 5:39 IST
ಅಕ್ಷರ ಗಾತ್ರ

ನಂಜನಗೂಡು: ‘ಅಧಿಕಾರದ ಆಸೆಗಾಗಿ ಸಮಾಜದ ಸೌಹಾರ್ದ ಹಾಳು ಮಾಡುವ ಮೂಲಭೂತವಾದಿಗಳು ಹಾಗೂ ಕೋಮುವಾದಿಗಳನ್ನು ಗಡಿಪಾರು ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪರೋಕ್ಷವಾಗಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ದ ಹರಿಹಾಯ್ದರು.

ನಗರದ ಜೆಎಸ್ಎಸ್ ಮಂಗಳಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕ ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಜವಾಬ್ದಾರಿ ಸ್ಥಾನದಲ್ಲಿರುವ ನಾಯಕರು ಬಾಯಿಗೆ ಬಂದಂತೆ ಮಾತನಾಡಿ ಸಾರ್ವಜನಿಕ ಜೀವನದ ಮೌಲ್ಯ ಕುಸಿಯುವಂತೆ ಮಾಡುತ್ತಿದ್ದಾರೆ. ಇಂತಹವರು ಕ್ರಮೇಣ ಜನರ ವಿಶ್ವಾಸ ಕಳೆದುಕೊಳ್ಳುತ್ತಾರೆ. ಸಂವಿಧಾನ ಬದಲಿಸುವ, ಕೈ ಕತ್ತಿರಿಸಿ, ತಲೆ ತೆಗೆಯಿರಿ ಎಂದು ಹೇಳಿಕೆ ನೀಡುವ ಇವರು ಜನರ ನಡುವಿನ ಪ್ರೀತಿ, ಸೌಹಾರ್ದ ಹಾಳು ಮಾಡುತ್ತಿದ್ದಾರೆ. ಇಂತಹ ಶಕ್ತಿಗಳ ವಿರುದ್ಧ ಬಸವಣ್ಣ ಚಳವಳಿ ಆರಂಭಿಸಿದ್ದರು. ಜನರು ಚುನಾವಣೆ ಯಲ್ಲಿ ಬುದ್ಧಿ ಕಲಿಸಿದರೆ ಪ್ರಜಾಪ್ರಭುತ್ವ ಯಶಸ್ವಿಗೊಳ್ಳುತ್ತದೆ’ ಎಂದು ಹೇಳಿದರು.

‘ಎಂಬಿಬಿಎಸ್ ಓದುತ್ತಿದ್ದಾಗ ಶುಲ್ಕ ತುಂಬಲು ಆರ್ಥಿಕ ಅಡಚಣೆ ಉಂಟಾ ದಾಗ ರಾಜೇಂದ್ರ ಸ್ವಾಮೀಜಿ ಕಾಲೇಜಿಗೆ ಪತ್ರ ಬರೆದು, ಮಹದೇವಪ್ಪನಿಗೆ ಅನುಕೂಲವಾಗುವಂತೆ ಶುಲ್ಕ ಕಟ್ಟಿಸಿ ಕೊಂಡು ವಿದ್ಯಾಭ್ಯಾಸಕ್ಕೆ ಸಹಕರಿಸುವಂತೆ ಶಿಫಾರಸು ಮಾಡಿದ್ದರು. 1980ರಲ್ಲಿ ದೇವರಾಜ ಅರಸ್ ಕಾರ್ಯಕ್ರಮಗಳಿಂದ ಪ್ರೇರಿತನಾಗಿ ಕ್ರಾಂತಿರಂಗದ ಮೂಲಕ ರಾಜಕೀಯ ಪ್ರವೇಶಿಸಿದೆ. ನಂತರ ಎಲ್ಲರ ಸಹಕಾರ, ಬೆಂಬಲದಿಂದ ಈ ಹಂತಕ್ಕೆ ತಲುಪಿದ್ದೇನೆ’ ಎಂದರು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಡಾ.ಎಚ್.ಸಿ.ಮಹದೇವಪ್ಪ ಅವರ ಪ್ರಯತ್ನದಿಂದ ಬಸವಭವನ ನಿರ್ಮಾಣಕ್ಕೆ ನಿವೇಶನ ದೊರೆಯಿತು. ಕಟ್ಟಡ ನಿರ್ಮಾಣಕ್ಕೆ ₹ 2 ಕೋಟಿ ಅನುದಾನವೂ ದೊರೆತಿದೆ. ರಾಜಕೀಯದಲ್ಲಿ ಮುಂದೆ ಇವರಿಗೆ ಉತ್ತಮ ಭವಿಷ್ಯವಿದೆ ಎಂದರು.

ದೇವನೂರು ಮಠದ ಮಹಾಂತ ಸ್ವಾಮೀಜಿ, ಮಲ್ಲನಮೂಲೆ ಮಠದ ಚೆನ್ನಬಸವ ಸ್ವಾಮೀಜಿ, ಸಚಿವೆ ಮೋಹನ ಕುಮಾರಿ, ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಚೆನ್ನಪ್ಪ, ಶಾಸಕ ಕಳಲೆ ಎನ್.ಕೇಶವಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲೀಲಾವತಿ ಸಿದ್ದವೀರಪ್ಪ, ಲತಾ ಸಿದ್ದಶೆಟ್ಟಿ, ನಗರಸಭಾ ಅಧ್ಯಕ್ಷೆ ಪುಷ್ಪಲತಾ, ಡಾ.ಯತೀಂದ್ರ ಸಿದ್ದರಾಮಯ್ಯ, ಮುಖಂಡರಾದ ಸಿಂಧುವಳ್ಳಿ ಕೆಂಪಣ್ಣ, ಮಾದಪ್ಪ, ಗುರುಪಾದಸ್ವಾಮಿ, ಕುರಿಹುಂಡಿ ಮಹೇಶ್, ಕುರಹಟ್ಟಿ ಮಹೇಶ್, ನಗರಸಭಾ ಸದಸ್ಯರಾದ ಅನುಸೂಯ, ಮೀನಾ, ಮಹದೇವಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT