ಉಡುಪಿ: ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೃಷಿ ಭಾಗ್ಯ ಯೋಜನೆಯನ್ನು ಉಡುಪಿ ಜಿಲ್ಲೆಗೂ ವಿಸ್ತರಿಸಲಾಗಿದ್ದು, ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಉಡುಪಿ ತಾಲ್ಲೂಕಿನ ಉಪ್ಪೂರು ಗ್ರಾಮದ ಕೃಷಿಕ ರತ್ನಾಕರ ಶೆಟ್ಟಿ ಅವರ ಹೊಲದಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದರು.
ಜಲ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಈ ಯೋಜನೆ ಜಾರಿ ಮಾಡಲಾಗಿದೆ. ಸಂಗ್ರಹಿಸಿದ ನೀರನ್ನು ಪಂಪ್ಸೆಟ್ ಬಳಸಿ ಬಳಸಬಹುದು. ತುಂತುರು ನೀರಾವರಿ ಯೋಜನೆ ಮೂಲಕ ಮಿತವಾಗಿ ಉಪಯೋಗಿಸಬಹುದು. ನೀರು ಇಂಗುವುದನ್ನು ತಡೆಯಲು ಪಾಲಿಥಿನ್ ಹೊದಿಕೆ ಸಹ ಹೊದಿಸಲು ಅವಕಾಶ ಇದೆ.
ಹೆಚ್ಚು ಮಳೆ ಬೀಳುವ ಪ್ರದೇಶವಾದರೂ ಕೂಡ ಉಡುಪಿ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ನೀರಿನ ಕೊರತೆ ಕಂಡುಬರುತ್ತಿದೆ. ಆದ್ದರಿಂದ ಕರಾವಳಿ ಜಿಲ್ಲೆಗಳಿಗೂ ಕೂಡ ಇದನ್ನು ವಿಸ್ತರಿಸಲಾಗಿದೆ. ಬಿದ್ದ ಮಳೆ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚಿನ ಇಳುವರಿ ಪಡೆಯಲು ಕಾರ್ಯೋನ್ಮುಖರಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವಜನ ಸಬಲೀಕರಣ ಸಚಿವ ಪ್ರಮೋದ್ ಮದ್ವರಾಜ್, ಜಿಲ್ಲೆಗೆ ಕೃಷಿ ಭಾಗ್ಯ ಯೋಜನೆಯನ್ನು ವಿಸ್ತರಿಸಿರುವುದು ಅನುಕೂಲವಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸದಸ್ಯ ಜನಾರ್ದನ ತೋನ್ಸೆ, ಉಪ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರತಿ ಪೂಜಾರಿ, ಸದಸ್ಯ ಫ್ರಾಂಕಿ ಡಿಸೋಜ, ಜಂಟಿ ಕೃಷಿ ನಿರ್ದೇಶಕ ಆಂತೋನಿ ಮರಿಯಾ ಇಮಾನ್ಯುಯಲ್ ಇದ್ದರು. ಉಡುಪಿ ಸಹಾಯಕ ಕೃಷಿನಿರ್ದೇಶಕ ಮೋಹನರಾಜ್ ಸ್ವಾಗತಿಸಿದರು.