ಮಾಲೂರು: ತಾಲ್ಲೂಕಿನ ತೊರಹಳ್ಳಿಯ ರೈತ ವೆಂಕಟರಮಣಪ್ಪ ಅವರ ಜಮೀನಿನಲ್ಲಿ ಇರುವ ಬತ್ತಿರುವ 900 ಅಡಿ ಆಳದ ಕೊಳವೆ ಬಾವಿಯಲ್ಲಿ ಮಂಗಳವಾರ ಕಿರೀಟದ ಮಾದರಿಯ ಲೋಹದ ವಸ್ತು ಗೋಚರವಾಗಿದೆ. ಗ್ರಾಮಸ್ಥರಲ್ಲಿ ಇದು ಕುತೂಹಲಕ್ಕೆ ಕಾರಣವಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಸುರಿದ ಮಳೆಯಿಂದ ಅಂತರ್ಜಲ ವೃದ್ಧಿಯಾಗಿದೆ. ಕೊಳವೆ ಬಾವಿಗೂ ನೀರು ಬಂದಿರಬಹುದು ಎನ್ನುವ ನಂಬಿಕೆಯಲ್ಲಿ ಸ್ಕ್ಯಾನಿಂಗ್ ತಂತ್ರಜ್ಞಾನದ ಮೂಲಕ ವೆಂಕಟರವಣಪ್ಪ ನೀರಿನ ಮಟ್ಟ ಪರೀಕ್ಷಿಸಲು ಮುಂದಾಗಿದ್ದರು. ಸ್ಕ್ಯಾನಿಂಗ್ನಲ್ಲಿ ಈ ಲೋಹ ಗೋಚರಿಸಿದೆ.
ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇವೆ. ಸ್ಕ್ಯಾನಿಂಗ್ ಚಿತ್ರಣ ವೀಕ್ಷಿಸಲಾಗುವುದು. ಒಂದು ವೇಳೆ ಇದು ಚಿನ್ನದ ಕಿರೀಟ ಎನ್ನುವುದು ದೃಢವಾದರೆ ಪುರಾತತ್ವ ಇಲಾಖೆಗೆ ಮಾಹಿತಿ ನೀಡುತ್ತೇವೆ ಎಂದು ತಹಶೀಲ್ದಾರ್ ಗಿರೀಶ್ ‘ಪ್ರಜಾವಾಣಿ’ ತಿಳಿಸಿದರು.