ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಕೂರು ಗ್ರಾಮಸ್ಥರ ಆಕ್ರೋಶ, ಪ್ರತಿಭಟನೆ

Last Updated 27 ಡಿಸೆಂಬರ್ 2017, 8:27 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನ ಕಂದಕೂರು ಗ್ರಾಮದಲ್ಲಿ ಏಕಾಏಕಿ ಎಂ.ಎಸ್‌.ಐ.ಎಲ್‌ ಮದ್ಯ ಮಾರಾಟ ಮಳಿಗೆ ತೆರೆದಿರುವುದಕ್ಕೆ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.

ಮಹಿಳೆಯರು, ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿದ್ದ ಜನರು ಅಸಮಾಧಾನಗೊಂಡು ಮದ್ಯ ಮಾರಾಟ ಮಳಿಗೆ ಮುಚ್ಚಿಸಿದ್ದಲ್ಲದೆ ಬಾಗಿಲಿಗೆ ಮುಳ್ಳುಬೇಲಿಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಡಿ.ಮೋಹನ್‌, ಅಬಕಾರಿ ಇನ್‌ಸ್ಪೆಕ್ಟರ್‌ ಚಾಂದಪಾಷಾ, ಸಬ್‌ ಇನ್‌ಸ್ಪೆಕ್ಟರ್‌ ವಿಶ್ವನಾಥ ಹಿರೇಗೌಡರ ಇತರರು ಜನರನ್ನು ಸಮಾಧಾನಪಡಿಸಲು ಯತ್ನಿಸಿದರು ಜನರು ಪ್ರತಿಭಟನೆ ಮುಂದುವರೆಸಿ ಮದ್ಯ ಮಾರಾಟ ಮಳಿಗೆ ಕೂಡಲೆ ಸ್ಥಳಾಂತರಗೊಳಿಸುವಂತೆ ಒತ್ತಾಯಿಸಿದರು.

ಗ್ರಾಮದಲ್ಲಿ ಈ ಹಿಂದೆ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿದ್ದುದರಿಂದ ಅನೇಕ ಯುವಕರು, ಬಾಲಕರು ಸಹ ಮದ್ಯ ಸೇವೆನೆ ಚಟಕ್ಕೆ ಒಳಗಾಗಿ ಅನೇಕ ಕುಟುಂಬಗಳು ಬೀದಿಪಾಲಾಗಿದ್ದವು. ಹಾಗಾಗಿ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಿದ್ದಲ್ಲದೆ ಗ್ರಾಮವನ್ನು ‘ಮದ್ಯಮುಕ್ತ ಗ್ರಾಮ’ ಎಂದು ಘೋಷಿಸಿ ನಾಮಫಲಕವನ್ನು ಅಳವಡಿಸಲಾಗಿತ್ತು. ಹೀಗಿದ್ದೂ ಗ್ರಾಮದ ಸಾಮಾಜಿಕ, ಕೌಟುಂಬಿಕ ನೆಮ್ಮದಿಯನ್ನು ಗಮನಕ್ಕೆ ತೆಗೆದುಕೊಳ್ಳದೆ ಕೆಲ ವ್ಯಕ್ತಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಜನರ ಇಚ್ಛೆಗೆ ವಿರುದ್ಧವಾಗಿ ಬಾಡಿಗೆ ಮಳಿಗೆಯಲ್ಲಿ ಮದ್ಯ ಮಾರಾಟ ಕೇಂದ್ರ ಆರಂಭಿಸಿದ್ದರಿಂದ ಮತ್ತೆ ಮದ್ಯ ವ್ಯಸನಿಗಳ ಕಾಟ ಹೆಚ್ಚಾಗಿದೆ ಎಂದು ದೂರಿದರು.

ಮಸೀದಿ ಮತ್ತು ದೇವಸ್ಥಾನ ಸನಿಹದಲ್ಲಿ ಮತ್ತು ಮಹಿಳೆಯರು ಬರ ಹೋಗುವ ಜಾಗದಲ್ಲಿ ಮದ್ಯ ಮಾರಾಟ ಮಳಿಗೆ ತೆರೆಯಲಾಗಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಮಹಿಳೆಯರ ಗೋಳು ಹೇಳತೀರದಷ್ಟಾಗಿದೆ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕುಮ್ಮಕ್ಕಿನಿಂದ ಎಂಎಸ್‌ಐಎಲ್‌ ಸಂಸ್ಥೆ ಮದ್ಯ ಮಾರಾಟ ಮಳಿಗೆಗೆ ಅವಕಾಶ ನೀಡಿರುವುದು ದುರದೃಷ್ಟದ ಸಂಗತಿಯಾಗಿದೆ ಎಂದು ಜನರು ಆರೋಪಿಸಿದರು.

ಅಲ್ಲದೆ ಈ ಕೂಡಲೇ ಮದ್ಯ ಮಾರಾಟದ ಪರವಾನಿಗೆ ರದ್ದುಪಡಿಸಬೇಕು ಮತ್ತು ಪುನಃ ಮಾರಾಟಕ್ಕೆ ಅವಕಾಶ ನೀಡಿದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಗ್ರಾಮದ ಸಾಮಾಜಿಕ ಸಮಸ್ಯೆ, ಜನರ ದೂರು ಗಮನಕ್ಕೆ ಬಂದಿದ್ದು ಮದ್ಯ ಮಾರಾಟವನ್ನು ಸದ್ಯ ಸ್ಥಗಿತಗೊಳಿಸಲಾಗಿದೆ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಪರವಾನಗಿ ರದ್ದುಗೊಳಿಸಲು ಪತ್ರಬರೆಯುವುದಾಗಿ ಅಬಕಾರಿ ಇಲಾಖೆ ಅಧಿಕಾರಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಅನ್ನಪೂರ್ಣಮ್ಮ ವಾಲ್ಮೀಕಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ತುಮ್ಮರಗುದ್ದಿ, ಪ್ರಮುಖರಾದ ಶರಣಪ್ಪ ಬಿಜಕಲ್‌, ಕಂದಕೂರಪ್ಪ ವಾಲ್ಮೀಕಿ, ಚಂದ್ರಹಾಸ ಭಾವಿಕಟ್ಟಿ, ಶರಣಪ್ಪ ಗೋಪಾಳಿ, ಸುರೇಶ ಮಂಗಳೂರು, ಶರಣಯ್ಯ ಅಬ್ಬಿಗೇರಿ, ಶಶಿಧರ ಹಾಳಕೇರಿ, ಶರಣಪ್ಪ ಹಾದಿಮನಿ, ಮರಿಯಪ್ಪ ಚಲುವಾದಿ, ಯಮನಪ್ಪ ಗುಮಗೇರಿ ಇದ್ದರು.

* * 

ಮದ್ಯಪಾನ ಮುಕ್ತ ಗ್ರಾಮ’ ಎಂದು ಘೋಷಿಸಲಾಗಿದೆ. ಜನ ಇಚ್ಛೆಗೆ ವಿರುದ್ಧವಾಗಿ ಮದ್ಯ ಮಾರಾಟ ಮಳಿಗೆ ತೆರೆದಿರುವುದು ವಿಪರ್ಯಾಸ.
ಕಂದಕೂರು ಗ್ರಾಮಸ್ಥರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT