ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದ ಸಂಭ್ರಮದಲ್ಲಿ ಬೆಳಗೆರೆ ಶಾಲೆ

ಜನವರಿ 28ಕ್ಕೆ ಶತಮಾನೋತ್ಸವ ಸಮಾರಂಭ, ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಭಾಗಿ
Last Updated 28 ಡಿಸೆಂಬರ್ 2017, 8:30 IST
ಅಕ್ಷರ ಗಾತ್ರ

ಬಸವಾಪಟ್ಟಣ: 1918ರ ಜೂನ್‌ನಲ್ಲಿ ಸ್ಥಾಪನೆಯಾದ ಬೆಳಲಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬರುವ ಜನವರಿ ತಿಂಗಳಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಳ್ಳುವ ಸಂಭ್ರಮದಲ್ಲಿದೆ.

ಆರಂಭದಲ್ಲಿ ಗ್ರಾಮದ ವೀರಭದ್ರೇಶ್ವರಸ್ವಾಮಿ ದೇಗುಲದ ಆವರಣದ ವಿಶಾಲವಾದ ಒಂದೇ ಕೋಣೆಯಲ್ಲಿ 40 ಮಕ್ಕಳಿಂದ ಒಂದರಿಂದ ನಾಲ್ಕನೇ ತರಗತಿಯವರೆಗೆ ಆರಂಭವಾದ ಈ ಶಾಲೆಗೆ ಪ್ರಥಮವಾಗಿ ಕೃಷ್ಣಶಾಸ್ತ್ರಿ ಎಂಬುವವರು ಮುಖ್ಯ ಶಿಕ್ಷಕರಾಗಿ, ಅವರ ಪತ್ನಿ ರಾಧಮ್ಮ ಸಹಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ, ಅಭಿವೃದ್ಧಿ ಪಡಿಸಿದರು.

ಶಾಲೆಗೆ ಮಕ್ಕಳು ಹೆಚ್ಚಾಗುತ್ತಿದ್ದಂತೆ ಶಾಲೆಯ ಕಟ್ಟಡವನ್ನು ವಿಸ್ತರಿಸಲು, ಆಗ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದ ಚಿಕ್ಕಕುರುಬರಹಳ್ಳಿ ಪಟೇಲ್‌ ಬಸಪ್ಪ ನೆರವಾದರು.

ಮುಖ್ಯರಸ್ತೆಯ ಪಕ್ಕದ ವಿಶಾಲವಾದ ಆವರಣದಲ್ಲಿ ಹೆಂಚಿನ ಕೋಣೆಗಳನ್ನು ನಿರ್ಮಿಸಿ ಶಾಲೆ ಅಭಿವೃದ್ಧಿಗೆ ಅವರು ಸಹಕರಿಸಿದರು ಎಂದು ಗ್ರಾಮದ ಹಿರಿಯರಾದ ಸಂಕ್ಲಿಪುರದ ಸೋಮಶೇಖರಪ್ಪ ನೆನಪಿಸಿಕೊಂಡರು.

1969ರಲ್ಲಿ ಭಾರತಕ್ಕೆ ಬಂದಿದ್ದ ಅಮೆರಿಕಾದ ಸಮಾಜಸೇವಕ ಜಾನ್‌ ಕೆನಡಿ ಅವರು ಮಾರ್ಟಿನ್‌ ಲೂಥರ್‌ ಕಿಂಗ್‌ ಅವರ ಜ್ಞಾಪಕಾರ್ಥ ಕ್ಯಾಲಿಫೋರ್ನಿಯಾದ ರೆಡ್‌ಲ್ಯಾಂಡ್‌ ಹೈಸ್ಕೂಲ್‌ ಮೂಲಕ ಈ ಶಾಲೆಗೆ ಸುಸಜ್ಜಿತವಾದ ನಾಲ್ಕು ಕೋಣೆಗಳನ್ನು ಕಟ್ಟಿಸಿಕೊಟ್ಟರು. ಈ ಶಾಲೆಯಲ್ಲಿ ಓದಿದ ಅನೇಕರು ವೈದ್ಯ, ಎಂಜಿನಿಯರ್‌, ಅಧ್ಯಾಪಕ, ಬ್ಯಾಂಕ್‌ ಅಧಿಕಾರಿಗಳಾಗಿ ಸರ್ಕಾರದ ವಿವಿಧ ಮೇಲ್ಮಟ್ಟದ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಾಮದ ಪ್ರಸಿದ್ಧ ಅಧ್ಯಾತ್ಮಿ ಪಿ.ಗುಡುದಪ್ಪ ಮಾಸ್ತರ್‌, ಸ್ವಾತಂತ್ರ್ಯ ಹೋರಾಟಗಾರರಾದ ಸಂಗನಬಸಪ್ಪ, ಎ.ಪಾಪಣ್ಣಾಚಾರ್‌, ಎಸ್‌.ಎನ್‌.ಚನ್ನಬಸಪ್ಪ, ಎ.ಕೆ.ಗೂರ ದೊಡ್ಡಪ್ಪ ಮತ್ತು ಹುರಳಿಬಸಪ್ಪ ಈ ಶಾಲೆಯ ವಿದ್ಯಾರ್ಥಿಗಳಾಗಿದ್ದರು ಎಂದು ಹಿರಿಯರಾದ ಬಾತಿ ಹಾಲಸಿದ್ದಪ್ಪ ತಿಳಿಸಿದರು.

ಈಗ ಶಾಲೆಯಲ್ಲಿ ಒಟ್ಟು 11 ಕೊಠಡಿಗಳಿವೆ. 150 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಬೋಧನೆ ನಡೆಯುತ್ತಿದೆ. ಶಾಲೆಯ ಮುಂಭಾಗದಲ್ಲಿರುವ ನಿವೇಶನವನ್ನು ಆಟದ ಮೈದಾನವನ್ನಾಗಿ ಮಾಡಿಕೊಳ್ಳಲಾಗಿದೆ. ಪ್ರತಿಯೊಬ್ಬ ಶಿಕ್ಷಕರೂ ತರಬೇತಿ ಪಡೆದಿದ್ದು, ಕಂಪ್ಯೂಟರ್‌ ಶಿಕ್ಷಣ ನೀಡುತ್ತಿದ್ದಾರೆ.

ಶಾಲೆಯಲ್ಲಿ 3000ಕ್ಕೂ ಹೆಚ್ಚು ಉಪಯುಕ್ತ ಪುಸ್ತಕಗಳನ್ನು ಗ್ರಂಥಾಲಯವು ಹೊಂದಿದೆ. ಮಕ್ಕಳಲ್ಲಿ ಕಡ್ಡಾಯವಾಗಿ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಲಾಗಿದೆ. ಶಾಲೆಯ ರಂಗಮಂದಿರದಲ್ಲಿ ಪ್ರತಿವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಗ್ರಾಮ ಪಂಚಾಯ್ತಿಯಿಂದ ಮಕ್ಕಳ ಬಿಸಿ ಊಟಕ್ಕೆ ತಟ್ಟೆಗಳನ್ನು ನೀಡಲಾಗಿದ್ದು, ಪ್ರತಿದಿನ ಮಕ್ಕಳಿಗೆ ಶುದ್ಧ ಕುಡಿಯುವ ನೀರನ್ನು ಉಚಿತವಾಗಿ ಒದಗಿಸುತ್ತಿದೆ ಎಂದು ಮುಖ್ಯ ಶಿಕ್ಷಕ ಶೇಖ್‌ ಮೊಹ್ಮದ್‌ ನೂರುಲ್ಲಾ ತಿಳಿಸಿದರು.

ಶಾಲೆಯ ಶತಮಾನೋತ್ಸವವನ್ನು ಜನವರಿ 28ರಂದು ನಡೆಸಲು ಗ್ರಾಮದ ಹಿರಿಯರು ನಿರ್ಧರಿಸಿದ್ದಾರೆ. ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್‌ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ, ಆಹಾರ ಸಮಿತಿ, ವೇದಿಕೆ ಮತ್ತು ಸಲಹಾ ಸಮಿತಿಗಳನ್ನು ರಚಿಸಲಾಗಿದೆ. ‘ಬೆಳಲಗೆರೆಯ ಬೆಳಕು’ ಎಂಬ ಸ್ಮರಣ ಸಂಚಿಕೆ ಹೊರತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಡಿಸೆಂಬರ್‌ 31ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ ಎನ್ನುತ್ತಾರೆ ಶಿಕ್ಷಣ ಸಂಯೋಜಕ ಎಂ.ಎಸ್‌.ಬಿರಾದಾರ್‌, ಗ್ರಾಮದ ಮುಖಂಡ ಪಿ.ಜಿ.ಜಯಪ್ಪ, ಶಿಕ್ಷಕ ಕೆ.ಜಿ.ಹನುಮಂತಪ್ಪ.

ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಕೆ.ಶಿವಮೂರ್ತಿ, ತೇಜಸ್ವಿ ಪಟೇಲ್‌, ತಾಲ್ಲೂಕು ಪಂಚಾಯ್ತಿ ಸದಸ್ಯ ಬಿ.ಕೆ.ಹನುಮಂತಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಆಶಾ ರಂಗಸ್ವಾಮಿ, ಗ್ರಾಮ ಪಂಚಾಯ್ತಿಯ ಎಲ್ಲಾ ಪ್ರತಿನಿಧಿಗಳು, ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಡಿ.ಜಯಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT