ರಾಮನಗರ: ತಾಲ್ಲೂಕಿನ ಮುನಿಯಪ್ಪನದೊಡ್ಡಿ ಗ್ರಾಮದ ಕೃಷ್ಣಪ್ಪ ಎಂಬುವರ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಬುಧವಾರ ರಾತ್ರಿ ಚಿರತೆಯೊಂದು ಸೆರೆಯಾಗಿದೆ.
ಆರು ವರ್ಷ ಪ್ರಾಯದ ಗಂಡು ಚಿರತೆ ಇದಾಗಿದೆ. ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಈ ಕಾಡುಪ್ರಾಣಿ ಉಪಟಳ ಹೆಚ್ಚಾಗಿತ್ತು. ಆಗಾಗ್ಗೆ ಊರಿನ ಒಳಗೆ ನುಗ್ಗಿ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದ ಚಿರತೆ, ಹತ್ತಕ್ಕೂ ಹೆಚ್ಚು ಕುರಿಗಳನ್ನು ತಿಂದು ಹಾಕಿತ್ತು.
ಈ ಹಿನ್ನೆಲೆಯಲ್ಲಿ ಅದನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಒತ್ತಾಯಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಸೆರೆಯಾದ ಚಿರತೆಯನ್ನು ಸ್ಥಳಾಂತರಿಸಿದರು. ಅದರ ಆರೋಗ್ಯ ಪರೀಕ್ಷೆ ಬಳಿಕ ಕಾಡಿಗೆ ಬಿಡುವುದಾಗಿ ತಿಳಿಸಿದರು.