ಕೆರೂರ: ಉತ್ತರ ಕರ್ನಾಟಕದಲ್ಲಿ ಜ.2ರಿಂದ ಒಂದು ತಿಂಗಳು ವೈಭವದಿಂದ ಆಚರಿಸಲ್ಪಡುವ ಬಾದಾಮಿ ಬನಶಂಕರಿ ಜಾತ್ರೆಯು ತನ್ನದೇ ಐತಿಹಾಸಿಕ ಪರಂಪರೆ, ಧಾರ್ಮಿಕ ಇತಿಹಾಸ ಹೊಂದಿದೆ. ಅಂತಹ ಜಾತ್ರೆ ನಡೆವ ಪವಿತ್ರ ಕ್ಷೇತ್ರದಲ್ಲಿ ಮದ್ಯ, ಮಾಂಸದ ಮಾರಾಟ ಸಂಪೂರ್ಣವಾಗಿ ನಿಷೇಧಿಸುವಂತೆ ಸ್ಥಳೀಯ ದೇವಾಂಗ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
ಜಾತ್ರೆಯ ಸಂದರ್ಭದಲ್ಲಿ ಧಾರ್ಮಿಕ ಪವಿತ್ರ ಕ್ಷೇತ್ರದಲ್ಲಿ ಮೊಟ್ಟೆ, ಮಾಂಸದಿಂದ ತಯಾರಿಸಿದ ಆಹಾರ ಮತ್ತು ಅಕ್ರಮವಾಗಿ ಮದ್ಯ ಮಾರಾಟ ಮಾಡುವುದರಿಂದ ಅಲ್ಲಿನ ಪಾವಿತ್ರ್ಯತೆಯು ಹಾಳಾಗುವ ಜೊತೆಗೆ ಸದ್ಭಕ್ತರು ಮುಜುಗುರಕ್ಕೆ ಒಳಗಾಗುವ ಸಂಭವವಿದೆ.
ಆದ ಕಾರಣ ಜಿಲ್ಲಾಧಿಕಾರಿ ಮತ್ತು ಸಂಬಂಧಿಸಿದ ಪಂಚಾಯ್ತಿ ಆಡಳಿತ ವರ್ಗ ಜಾತ್ರೆಯ ಕಾಲಕ್ಕೆ ಮದ್ಯ, ಮಾಂಸ ಮಾರಾಟವನ್ನು ಸಂಪೂರ್ಣ ನಿಷೇಧಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೆರೂರ ಪಟ್ಟಣದ ದೇವಾಂಗ ಸಮಾಜದ ಮುಖಂಡರು ಇಲ್ಲಿನ ನಾಡ ಕಚೇರಿಯ ಉಪ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ರವಾನಿಸಿದ್ದಾರೆ.
ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ, ರಾಚೋಟೇಶ್ವರ ಓಮಣ್ಣ ಕುದರಿ, ಪ್ರಶಾಂತ ಜಾಲಿಹಾಳ, ಈರಪ್ಪ ಅಂಕದ, ಎಸ್.ಆರ್. ತೋರಗಲ್, ರವಿ ಅಂಕದ, ರಾಚಪ್ಪ ಜಿಗೇರಿ, ಎಸ್.ಡಿ. ಹೋಸಮನಿ, ವಿ.ವೈ. ಅಂಕದ ಭಾಗವಹಿಸಿದ್ದರು.