ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸಮಾವೇಶ , ಭರದ ಸಿದ್ಧತೆ

Last Updated 29 ಡಿಸೆಂಬರ್ 2017, 8:16 IST
ಅಕ್ಷರ ಗಾತ್ರ

ವಿಜಯಪುರ : ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಂಭಾಗದಲ್ಲಿರುವ ಕ್ರೀಡಾ ಮೈದಾನದಲ್ಲಿ ಡಿಸೆಂಬರ್ 30 ರಂದು ನಡೆಯಲಿರುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ಪೂರ್ವ ಸಿದ್ಧತೆಯನ್ನು ಮಾಡಲಾಗುತ್ತಿದೆ.

ಕಾರ್ಯಕ್ರಮಕ್ಕೆ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ತೂಬಗೆರೆ ಬ್ಲಾಕ್, ದೇವನಹಳ್ಳಿ ಬ್ಲಾಕ್, ವಿಜಯಪುರ ಬ್ಲಾಕ್ ನಿಂದ 20 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಸೇರುತ್ತಾರೆ ಎಂದು ಕಾಂಗ್ರೆಸ್ ನಾಯಕ ಕೆ.ವೆಂಕಟಸ್ವಾಮಿ ತಿಳಿಸಿದರು.

20 ಸಾವಿರಕ್ಕೂ ಹೆಚ್ಚು ಮಂದಿಗೆ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ತಾಲ್ಲೂಕಿನ ಪ್ರತಿಯೊಂದು ಗ್ರಾಮಗಳಿಂದಲೂ ಕಾರ್ಯಕರ್ತರು ಬರಲು 100 ಬಸ್ಸುಗಳು, 150 ಟಾಟಾ ಸುಮೋಗಳು ಸೇರಿದಂತೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದರು. 15 ಸಾವಿರ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ‌ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಸೂಕ್ತ ಪೊಲೀಸ್  ಬಿಗಿ ಬಂದೋ ಬಸ್ತ್ ಏರ್ಪಡಿಸಲಾಗಿದೆ. ಆಂಬುಲೇನ್ಸ್, ಕುಡಿಯುವ ನೀರಿನ ವ್ಯವಸ್ಥೆ, ಅಗ್ನಿಶಾಮಕ ವಾಹನಗಳು ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತ್ಯೇಕವಾಗಿ ಸಭೆಗಳು : ಒಂದು ಕಡೆ ಕಾಂಗ್ರೆಸ್ ನಾಯಕರು, ಪ್ರತ್ಯೇಕವಾದ ಬಣಗಳಿಲ್ಲ ಎಲ್ಲರು ಒಗ್ಗಟ್ಟಿನಿಂದ ಸಮಾವೇಶದಲ್ಲಿ ಪಾಲ್ಗೊಂಡು, ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವುದಷ್ಟೆ ಮುಖ್ಯಗುರಿಯಾಗಿದೆ ಎಂದು ಹೇಳುತ್ತಿದ್ದರೂ, ವಿಜಯಪುರ ಬ್ಲಾಕ್ ಕೆ.ಪಿ.ಸಿ.ಸಿ.ಸದಸ್ಯ ಬಿ.ಚೇತನ್ ಗೌಡ ಅವರ ನೇತೃತ್ವದಲ್ಲಿ ಪ್ರವಾಸಿಮಂದಿರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿ, ಸಮಾವೇಶವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಬದ್ಧತೆಯಿಂದ ಕೆಲಸ ಮಾಡುವಂತೆ ಕರೆ ನೀಡಿದ್ದಾರೆ.

ಮತ್ತೊಂದು ಕೊಠಡಿಯಲ್ಲಿ ಸಭೆ ನಡೆಸಿದ ದೇವನಹಳ್ಳಿ ಬ್ಲಾಕ್ ಕೆ.ಪಿ.ಸಿ.ಸಿ. ಸದಸ್ಯ ವಿ.ಮಂಜುನಾಥ್ ನೇತೃತ್ವದಲ್ಲಿ ಸಭೆ ನಡೆಸಿ, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಬೇಕು, ಯುವ ಘಟಕಗಳ ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ, ಸಮಾವೇಶವನ್ನು ಯಶಸ್ವಿ ಮಾಡಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.

ಪ್ರವಾಸಿಮಂದಿರದ ಒಂದೇ ಆವರಣದಲ್ಲೆ ಎರಡು ಸಭೆಗಳನ್ನು ಪೂರ್ವಭಾವಿ ಸಭೆಗಳನ್ನು ನಡೆಸಿರುವುದು ಕಾರ್ಯಕರ್ತರಲ್ಲಿ ಗೊಂದಲವನ್ನುಂಟು ಮಾಡಿತ್ತು. ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ ಕೆ.ವೆಂಕಟಸ್ವಾಮಿ ಅವರು, ಒಂದು ಕೊಠಡಿಯಲ್ಲಿ ವಿಜಯಪುರ ನಗರ ಘಟಕದವರು ಸಭೆ ಮಾಡಿಕೊಂಡಿದ್ದಾರೆ. ಮತ್ತೊಂದು ಕೊಠಡಿಯಲ್ಲಿ ಹೋಬಳಿ ಘಟಕದವರು ಸಭೆ ಮಾಡಿಕೊಂಡಿದ್ದಾರೆ. ಚನ್ನರಾಯಪಟ್ಟಣ ಹೋಬಳಿಯ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣಪ್ಪ ಅವರಿಗೆ ಒಪ್ಪಿಸಿದ್ದೇವೆ ಎಂದರು.

ಮಾರ್ಗ ಬದಲಾವಣೆ: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನರೇಶ್ ನಾಯಕ್ ಮಾತನಾಡಿ, ಡಿಸೆಂಬರ್ 30 ರಂದು ಸಮಾವೇಶದ ಅಂಗವಾಗಿ ಜನದಟ್ಟಣೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಕೋಲಾರದ ಕಡೆಯಿಂದ ಬೆಂಗಳೂರಿನ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳನ್ನು ಬೈಪಾಸ್ ರಸ್ತೆಯ ಮೂಲಕ ತೆರಳುವ ವ್ಯವಸ್ಥೆ ಮಾಡಲಾಗಿದೆ. ಶಿಡ್ಲಘಟ್ಟದ ಕಡೆಯಿಂದ ದೇವನಹಳ್ಳಿಗೆ ಹೋಗುವ ವಾಹನಗಳು ಶಿಡ್ಲಘಟ್ಟ ಕ್ರಾಸ್ ಮೂಲಕ ತೆರಳಲು ಅವಕಾಶ ಮಾಡಿದೆ, ಆಂಬುಲೇನ್ಸ್ ಗಳ ಸಂಚಾರಕ್ಕೆ ಯಾವುದೇ ನಿರ್ಭಂಧವಿಲ್ಲ ನಾಗರಿಕರು ಸಹಕಾರ ನೀಡಬೇಕು ಸಮಾವೇಶ ಮುಕ್ತಾಯವಾಗುವವರೆಗೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT