ನರಗುಂದ: ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ತಾಲ್ಲೂಕಿನ ಕೊಣ್ಣೂರಿನಲ್ಲಿ ವಿರಕ್ತಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ರೈತರು ಹಾಗೂ ಆಟೋ, ಟೆಂಪೂ ಚಾಲಕರು, ಮಾಲೀಕರು ಗುರುವಾರ ಹುಬ್ಬಳ್ಳಿ–ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿ, ಪ್ರತಿಭಟನೆ ನಡೆಸಿದರು.
ಕೆಲ ಕಾಲ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಪ್ರಯಾಣಿಕರು ಪರದಾಡಿದರು. ರೈತರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಕೇಂದ್ರ, ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಖಂಡಿಸಿ ಘೋಷಣೆ ಕೂಗಿದರು. ‘ಮಹದಾಯಿ ಯೋಜನೆ ಜಾರಿಗೊಳ್ಳುವವರೆಗೂ ಹೋರಾಟ ಬಿಡುವುದಿಲ್ಲ’ ಎಂದು ಪ್ರತಿಭಟನಾಕಾರರು ಹೇಳಿದರು.
‘ಮಹದಾಯಿಗಾಗಿ ಉಗ್ರ ಹೋರಾಟ ಕೈಗೊಳ್ಳಬೇಕು. ಚುನಾವಣೆಗಳನ್ನು ಬಹಿಷ್ಕರಿಸಿ, ಈ ಭಾಗದ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಅಪ್ಪಣಗೌಡ ಅರ್ಭಣದ, ಶಿವಾನಂದ ಹೇಳಿದರು. ಮಂಜು ಕುರಿ, ಶಂಕ್ರಣ್ಣ ವಾಲಿ, ಮುತ್ತುಸ್ವಾಮಿ ಮಳಲಿ, ಆಟೋ, ಟೆಂಪೂ ಚಾಲಕರು, ಮಾಲೀಕರು, ರೈತರು, ಮಹಿಳೆಯರು ಭಾಗವಹಿಸಿದ್ದರು.