ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿಗೆ ಹೆದರಬೇಡಿ!

Last Updated 29 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕಳೆದ ಕೆಲವು ದಶಕಗಳಲ್ಲಿ ಡೆಂಗಿಜ್ವರದ ರೋಗವು ವಿಶ್ವದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹರಡುತ್ತ ಬಂದಿದೆ. 1970ರ ಪೂರ್ವದಲ್ಲಿ ಕೇವಲ ಒಂಬತ್ತು ದೇಶಗಳಲ್ಲಿ ಹರಡಿದ್ದ ರೋಗವು ಈಗ ಸುಮಾರು 100 ದೇಶಗಳಲ್ಲಿದೆ. ಬಹುತೇಕವಾಗಿ ಏಷ್ಯಾ, ಆಫ್ರಿಕ ಮತ್ತಿತರ ಹಿಂದುಳಿದ ದೇಶಗಳಲ್ಲಿ ಇದರ ಪ್ರಭಾವ ಏರುತ್ತಿದೆ.

ಮೂಲತಃ ಇದು ವೈರಸ್‌ನಿಂದ ಉಂಟಾಗುವ ರೋಗ. ಮನುಷ್ಯರಲ್ಲಿ ಇದು ಸಂಭವಿಸಬೇಕಾದರೆ ‘ಈಡಿಸ್‌ ಈಜಿಪ್ಟೈ’ ಎಂಬ ಗುಂಪಿಗೆ ಸೇರಿದ ಹೆಣ್ಣುಸೊಳ್ಳೆ ಕಾರಣ.

ಡೆಂಗಿಜ್ವರ ಪೀಡಿತನಾದ ರೋಗಿಯನ್ನು ಈ ಸೊಳ್ಳೆ ಕಡಿದು ಆ ರೋಗಿಯ ರಕ್ತವನ್ನು ಹೀರಿ ಆರೋಗ್ಯವಂತನಾದ ಮತ್ತೊಬ್ಬ ವ್ಯಕ್ತಿಯನ್ನು ಕಡಿದಾಗ ಅವನಲ್ಲಿ ಈ ರೋಗವು ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಹೀಗೆ ವ್ಯಕ್ತಿಯಿಂದ ವ್ಯಕ್ತಿಗೆ ಸೊಳ್ಳೆನು ಕಡಿತದ ಮೂಲಕ ಈ ರೋಗವು ಹರಡುತ್ತದೆ. ದಿನದಲ್ಲಿ ಸಂಚರಿಸುವ ಸೊಳ್ಳೆಗಳೆ ಹೆಚ್ಚು ಅಪಾಯಕಾರಿ.

ಸಾಮಾನ್ಯ ಡೆಂಗಿಜ್ವರದ ಲಕ್ಷಣ

ತೀವ್ರವಾದ ಜ್ವರ, ಕೀಲು ಮತ್ತು ಮಾಂಸ ಖಂಡಗಳ ನೋವು, ತಲೆನೋವು, ವಾಂತಿ ಮತ್ತು ವಾಕರಿಗೆ ಹಾಗೂ ಚರ್ಮದ ಮೇಲೆ ಕೆಂಪು ಚುಕ್ಕೆಗಳ ಕಾಣಿಸುವಿಕೆ.

ಬಹುತೇಕ ರೋಗಿಗಳಲ್ಲಿ ಇದು 2ರಿಂದ 7 ದಿನಗಳವರೆಗೆ ಕಾಡಿ ಯಾವ ಗಂಭೀರವಾದ ಸಮಸ್ಯೆಗಳಿಲ್ಲದೆ ವಾಸಿಯಾಗುತ್ತದೆ.

ತೀವ್ರ ಡೆಂಗಿಜ್ವರದ ಲಕ್ಷಣ

2 ರಿಂದ ಶೇ.5 ರೋಗಿಗಳಲ್ಲಿ ಈ ರೋಗವು ಉಲ್ಬಣಗೊಂಡು ಕೆಲವು ಹಾನಿಕರವಾದ ಸಮಸ್ಯೆಗಳು ಉಂಟಾಗುವ ಸಂಭವವಿರುತ್ತದೆ.

* ರಕ್ತದ ಧಮನಿಗಳಿಂದ ನೀರಿನ ಅಂಶ ಸೋರುವುದರಿಂದ ಉದರ ಮತ್ತು ಶ್ವಾಸಕೋಶಗಳಲ್ಲಿ ನೀರು ಸೇರಿಕೊಂಡು ಉಸಿರಾಟದ ತೊಂದರೆ ಆಗಬಹುದು.

* ಪ್ಲೇಟ್ಲೆಟ್‌ ಎಂಬ ರಕ್ತ ಕಣಗಳ ಸಂಖ್ಯೆ ದಿನ ದಿನಕ್ಕೆ ಕಡಿಮೆ ಆಗಿ ರಕ್ತಸ್ರಾವವಾಗುವ ಸಂಭವ ಒದಗಬಹುದು. ಇದಲ್ಲದೆ ರಕ್ತ ಹೆಪ್ಪುಗಟ್ಟುವ ವ್ಯವಸ್ಥೆಯಲ್ಲಿ ಏರುಪೇರಾಗಿ ರಕ್ತ ವಾಂತಿ, ವಸಡುಗಳಿಂದ ರಕ್ತಸ್ರಾವ ಹಾಗೂ ಮೆದುಳಿನಲ್ಲಿ ರಕ್ತಸ್ರಾವವಾಗುವ ಸಂಭವ ಹೆಚ್ಚಾಗುತ್ತದೆ.

* ಅತ್ಯಂತ ನಿತ್ರಾಣ ಸ್ಥಿತಿ, ರಕ್ತದ ಒತ್ತಡದಲ್ಲಿ ಕುಸಿತ, ತೀವ್ರವಾದ ಹೊಟ್ಟೆನೋವು, ನಿಲುಗಡೆ ಇಲ್ಲದೆ ವಾಂತಿ.

ಈ ಮೇಲ್ಕಂಡ ಉಲ್ಬಣವಾದ ಸ್ಥಿತಿ ಉಂಟಾದಾಗ, ಸೂಕ್ತ ಚಿಕಿತ್ಸೆ ಮಾಡದಿದ್ದಲ್ಲಿ ಪ್ರಾಣಕ್ಕೆ ಒದಗಬಹುದು.

ಮದ್ದು ಮತ್ತು ಚಿಕಿತ್ಸೆ

ಡೆಂಗಿ ಜ್ವರಕ್ಕೆ ಪ್ರತ್ಯೇಕವಾದ ಚಿಕಿತ್ಸೆ ಇಲ್ಲ. ಕೇವಲ ರೋಗಿಯ ಚಿಹ್ನೆಗಳನ್ನು ಗುರುತಿಸಿ ಸೂಕ್ತವಾದ ಮದ್ದುಗಳನ್ನು ಕೊಡಲಾಗುವುದು.

ಬಹಳಷ್ಟು ರೋಗಿಗಳನ್ನು ಆಸ್ಪತ್ರೆಗೆ ದಾಖಾಲಾತಿ ಮಾಡುವ ಅಗತ್ಯವಿಲ್ಲ. ಹೊರ ರೋಗಿಗಳಾಗಿಯೇ ಗುಣಪಡಿಸಬಹುದು.

ಯಾವ ರೋಗಿ ತೀವ್ರವಾದ ರೋಗದ ಲಕ್ಷಣಗಳನ್ನು ಹೊಂದಿರುತ್ತಾನೋ ಅಂತಹವರನ್ನು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಬೇಕಾಗುತ್ತದೆ.

ರೋಗದ ನಿಯಂತ್ರಣ

1) ಪ್ರಾಥಮಿಕವಾಗಿ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಕಾಪಾಡುವುದು ಅತ್ಯವಶ್ಯಕ.

ಕಸ, ಕೊಚ್ಚೆ, ಗೊಬ್ಬರ ಇವುಗಳನ್ನು ದೂರ ಮಾಡುವುದು. ಏಳನೀರಿನ ತೆಂಗಿನಕಾಯಿ ಚಿಪ್ಪುಗಳ ಮತ್ತಿತರ ವಸ್ತುಗಳಲ್ಲಿ ನೀರು ಶೇಖರಣೆಯಾಗುವುದನ್ನು ತಡೆಯುವುದು ಬಹು ಮುಖ್ಯ. ಇದರಿಂದ ಸೊಳ್ಳೆಗಳ ಸಂತಾನ ಕಡಿಮೆ ಆಗಿ ರೋಗದ ಹರಡುವಿಕೆಯನ್ನು ನಿಯಂತ್ರಿಸಬಹುದು.

2. ಕೈ ಮತ್ತು ಕಾಲುಗಳು ಪೂರ್ಣವಾಗಿ ಮುಚ್ಚುವಂತೆ ವಸ್ತ್ರಗಳನ್ನು ಧರಿಸುವುದು. ಇದರಿಂದ ಸೊಳ್ಳೆಗಳ ಕಡಿತವು ಕಡಿಮೆಯಾಗುತ್ತದೆ.

3. ಮುಖ್ಯವಾಗಿ ಜ್ವರ ಮತ್ತಿತರ ಲಕ್ಷಗಳು ಉಂಟಾದಲ್ಲಿ ಸ್ವಯಂ ಚಿಕಿತ್ಸೆ ಮಾಡದೆ ವೈದ್ಯರಿಂದ ಸೂಕ್ತ ಸಲಹೆ ಪಡೆಯುವುದು ಅವಶ್ಯಕ.

***

ತಪ್ಪು ಕಲ್ಪನೆಗಳು ಹಾಗೂ ಪ್ರಶ್ನೆಗಳು

1.ಪ್ರತಿ ರೋಗಿಗೂ ಪ್ಲೇಟ್ಲೆಟ್ ಕಣಗಳನ್ನು ಕೊಡಲೇ ಬೇಕೇ?

ಇಲ್ಲ: ಕೇವಲ ತೀವ್ರವಾದ ರೋಗದ ಲಕ್ಷಣಗಳ ಮತ್ತು ರಕ್ತಸ್ರಾವದಿಂದ ನರಳುತ್ತಿರುವ ರೋಗಿಗಳಿಗೆ ಮಾತ್ರ ಅದರ ಅವಶ್ಯಕತೆ ಇರುತ್ತದೆ.

2. ಪ್ರಾಣಾಪಾಯದ ಹೆದರಿಕೆ ವಾಸ್ತವವಾದದ್ದೆ?

ಮುಂಚೆ ತಿಳಿಸಿದಂತೆ ತೀವ್ರವಾದ ರೋಗ ಸ್ಥಿತಿ ಉಂಟಾದಾಗ ಮಾತ್ರ ಪ್ರಾಣಹಾನಿಯ ಸಂಭವ ಹೆಚ್ಚಾಗುತ್ತದೆ. ಶೇ. 95ಕ್ಕಿಂತ ಹೆಚ್ಚಿನ ಪ್ರಮಾಣದ ರೋಗಿಗಳಲ್ಲಿ ಯಾವ ಹಾನಿಕರವಾದ ಸಮಸ್ಯೆಗಳೂ ಇಲ್ಲದೆ ವಾಸಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT