ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರೀಸೂತ್ರ

ಐದು
Last Updated 29 ಡಿಸೆಂಬರ್ 2017, 20:52 IST
ಅಕ್ಷರ ಗಾತ್ರ

ಭಾರತದಲ್ಲಿ ಹುಟ್ಟಿ, ಇಡಿಯ ವಿಶ್ವವನ್ನೆಲ್ಲ ಹರಡಿರುವ ಧರ್ಮ ಎಂದರೆ ಅದು ಬೌದ್ಧಧರ್ಮವೇ ಸರಿ.

‘ಬುದ್ಧ’ ಎಂದರೆ ಬೋಧಿಯನ್ನು ಪಡೆದವನು ಎಂದರ್ಥ; ಎಂದರೆ ಅರಿವನ್ನು ಸಂಪಾದಿಸಿದವನು.

ಬೌದ್ಧದರ್ಶನದ ಪ್ರಮುಖ ತತ್ತ್ವ ಎಂದರೆ ಕರುಣೆ; ಲೋಕಕಾರುಣ್ಯವೇ ಅದರ ‍‍ಪ್ರಮುಖ ನಿಲುವು. ಬುದ್ಧತ್ವವನ್ನು ಕೂಡ ಲೋಕಕಾರುಣ್ಯದ ಭಾಗವಾಗಿಯೇ ಪಡೆಯಬೇಕೆಂಬುದು ಅದರ ಆಶಯ. ಈ ದಾರಿಯಲ್ಲಿ ನೆರವಾಗುವ ಸಾಧನಗಳೆಂದರೆ ಶೀಲಗಳು; ‘ಮೈತ್ರಿ’ – ಇವುಗಳಲ್ಲಿ ಸೇರಿರುವ ಮುಖ್ಯವಾದ ನಿಲುವು. ಒಟ್ಟು ಪ್ರಪಂಚವನ್ನೇ ಮಿತ್ರಭಾವದಿಂದ ಕಾಣಬೇಕು – ಎಂಬುದು ಬುದ್ಧನ ಉಪದೇಶ.

ಈ ಮೈತ್ರೀಭಾವದ ಲಕ್ಷಣವನ್ನೂ ಹಿರಿಮೆಯನ್ನೂ ಸಾರುವ ಸೂತ್ರವೇ ‘ಮೈತ್ರೀಸೂತ್ರ’ (ಮೆತ್ತಸುತಂ). ಲೋಕಹಿತಕ್ಕಾಗಿ ನಾವು ಆಚರಿಸಬೇಕಾದ ಗುಣ–ನಡತೆಗಳನ್ನು ಹತ್ತು ಗಾಹೆಗಳಿರುವ ಈ ಸೂತ್ರದಲ್ಲಿ ಬುದ್ಧಭಗವಂತನು ಸೊಗಸಾಗಿ ನಿರೂಪಿಸಿದ್ದಾನೆ. ಪಾಲೀಭಾಷೆಯಲ್ಲಿರುವ ಈ ಸೂತ್ರವನ್ನು ಬಹಳ ಹಿಂದೆಯೇ ಜಿ.ಪಿ. ರಾಜರತ್ನಂ ಕನ್ನಡಕ್ಕೆ ಅನುವಾದಿಸಿದ್ದಾರೆ. ಅದರ ಕೆಲವು ಗಾಹೆಗಳನ್ನು ಇಲ್ಲಿ ನೋಡಬಹುದು:

1. ತನಗೆ ಯಾವುದು (ಅರ್ಥ) ಮೇಲಾದುದೋ ಅದರಲ್ಲಿ ಕುಶಲಿಯಾದವನು, ಯಾವನು ಶಾಂತವಾದ ಸ್ಥಿತಿಯನ್ನು ಹೋಗಿ ಸೇರುವನೋ ಅವನು ಮಾಡಬೇಕಾದುದು ಇದು: ಅವನು ಶಕ್ತನಾಗಿರಬೇಕು, ಋಜುವಾಗಿರಬೇಕು, ಒಳ್ಳೇ ಋಜುವಾಗಿರಬೇಕು; ಮೃದುವಾಗಿರಬೇಕು; ಅತಿಮಾನವಿಲ್ಲದೆ (ವಿನಯದಿಂದ ಕೂಡಿ) ಇರಬೇಕು.

(ಕರುಣೀಯಮತ್ಥಕುಸಲೇನ

ಯಂ ತಂ ಸನ್ತಂಪದಂ ಅಭಿಸಮೆಚ್ಚ

ಸಕ್ಕೋ ಉಜೂ ಚ ಸೂಜೂ ಚ

ಸುವಚೋ ಚಸ್ಯ ಮುದು ಅನತಿಮಾನೀ)

6. ಒಬ್ಬರು ಇನ್ನೊಬ್ಬರನ್ನು ಹೀನೈಸದಿರಲಿ. ಯಾರನ್ನೂ ಎಲ್ಲಿಯೂ ಯಾವುದರಲ್ಲಿಯೂ ಅತಿಯಾಗಿ ಎಣಿಸದಿರಲಿ. ರೋಷದಿಂದ, ದ್ವೇಷಬುದ್ಧಿಯಿಂದ ಒಬ್ಬರು ಇನ್ನೊಬ್ಬರಿಗೆ ದುಃಖವನ್ನು ಬಯಸದಿರಲಿ.

(ನ ಪರೋ ಪರಂ ನಿಕುಬ್ಬೇಥ

ನಾತಿಮಞ್ಞೇಥ ಕತ್ಥಚಿ ನಂ ಕಞ್ಚಿ

ವ್ಯಾರೋಸನಾ ಪಟಿಘಸಞ್ಞಾ

ನಾಞ್ಞಮಞ್ಞಸ್ಯ ದುಕ್ಖ ಮಿಚ್ಚೇಯ)

7. ತಾಯಿ ತನ್ನ ಮಗನನ್ನು, ಒಬ್ಬನೇ ಮಗನನ್ನು ಹೇಗೆ (ತನ್ನ) ಆಯುಸ್ಸಿನಿಂದ ಉದ್ದಕ್ಕೂ ‍ಕಾಪಾಡುತ್ತಾಳೋ, ಹಾಗೆಯೇ ಸರ್ವಭೂತಗಳಲ್ಲಿ ಮನಸ್ಸನ್ನು ಪರಿಮಿತಿಯಿಲ್ಲದಂತೆ ಬೆಳೆಸಲಿ.

(ಮಾತಾ ಯಥಾ ನಿಯಂ ‍‍‍ಪುತ್ತಂ

ಆಯುಸಾ ಏಕಪುತ್ತಮ್‌ ಅನುರಕ್ಖೆ

ಏವಂ ಪಿ ಸಬ್ಬಭೂತೇಷು

ಮಾನಸಂ ಭಾವಯೆ ಅಪರಿಮಾಣಂ)

8. ಸರ್ವಲೋಕದಲ್ಲಿನ ಮೈತ್ರಿಗಾಗಿ ಮನಸ್ಸನ್ನು ಪರಿಮಿತಿಯಿಲ್ಲದಂತೆ ಬೆಳೆಸಲಿ. ಮೇಲುಮುಖವಾಗಿ, ಕೆಳಮುಖವಾಗಿ, ನಡುವೆ ಎಲ್ಲ ಕಡೆಗೂ, ಯಾವ ಅಡ್ಡಿಯೂ ಇಲ್ಲದೆ, ವೈರವಿಲ್ಲದೆ, ಎದುರುಪಕ್ಷವಿಲ್ಲದೇ (ಮನಸ್ಸನ್ನು ಅಪರಿಮಿತವಾಗಿ ಬೆಳೆಸಲಿ).

(ಮೆತ್ತಂ ಚ ಸಬ್ಬಲೋಕಸ್ಮಿಂ

ಮಾನಸಂ ಭಾವಯೆ ಅಪರಿಮಾಣಂ

ಉದ್ಧಂ ಅಧೋ ಚ ತಿರಿಯಂ ಚ

ಅಸಮ್ಬಾಧಂ ಅವೇರಂ ಅಸಪತ್ತಂ)

9. ನಿಂತಿರಲಿ, ನಡೆಯುತ್ತಿರಲಿ, ಕುಳಿತಿರಲಿ ಅಥವಾ ಮಲಗಿರಲಿ, ಎಲ್ಲಿಯವರೆಗೆ ಆಲಸ್ಯವಿರುವುದಿಲ್ಲವೋ (ಅಲ್ಲಿಯವರೆಗೂ) ಈ ಸ್ಮೃತಿಯನ್ನು ಎತ್ತಿ ನಿಲ್ಲಿಸಲಿ; (ಆಗ ನಾವು ತಂಗಿರುವ ಭೂಮಿಯೆಂಬ) ಈ ವಿಹಾರವನ್ನು ಬ್ರಹ್ಮ (ಎಂದರೆ ಸರ್ವಪರಿಪೂರ್ಣವಾದುದು) ಎಂದು ಹೇಳುತ್ತದೆ.

(ತಿಟ್ಠಂ ಚರಂ ನಿಸಿನ್ನೋ ವಾ

ಸಯಾನೋ ವಾ ಯಾವತಸ್ವ ವಿಗತಮಿದ್ಧೋ

ಏತಂ ಸತಿಂ ಅಧಿಟ್ಠೆಯ್ಯ

ಬ್ರಹ್ಮಮೇತಂ ವಿಹಾರಮಿಧಮಾಹು)

ಇವು ಎಲ್ಲ ಕಾಲಕ್ಕೂ ಸಲ್ಲುವ ನಿತ್ಯಪ್ರಾರ್ಥನೆಗಳಂತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT