ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳಲ್ಲಿ ಮೂಲಸೌಲಭ್ಯಕ್ಕೆ ಒತ್ತು ನೀಡಿ

Last Updated 30 ಡಿಸೆಂಬರ್ 2017, 6:34 IST
ಅಕ್ಷರ ಗಾತ್ರ

ದೇವನಹಳ್ಳಿ: ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯಕ್ಕೆ ಒತ್ತು ನೀಡಿ ಸಬಲೀಕರಣಗೊಳಿಸಲು ಶಾಲಾಭಿವೃದ್ಧಿ ಸಮಿತಿ ನೆರವಾಗಲಿದೆ ಎಂದು ಸಾರ್ವಜನಿಕರ ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿ ನೀಲಕಂಠ ಗಾಂವಕರ್ ತಿಳಿಸಿದರು.

ಸರ್ಕಾರಿ ಕಿರಿಯ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆದ ನೂತನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನೇಮಕ ಮತ್ತು ಶಾಲಾ ಕುಂದು ಕೊರತೆ ಸಭೆಯಲ್ಲಿಅವರು ಮಾತನಾಡಿದರು.

ರಾಜ್ಯ ಸರ್ಕಾರ ಶಿಕ್ಷಕರ ಮೇಲೆ ಹೆಚ್ಚುತ್ತಿರುವ ಹೊರೆಯನ್ನು ಕಡಿಮೆ ಮಾಡಿ ಸ್ಥಳೀಯ ಪೋಷಕರ ನೆರವು ಪಡೆದು ಶಿಕ್ಷಣದಲ್ಲಿ ಸಮನ್ವಯತೆ ಸಾಧಿಸಲು 2001ರ ಏಪ್ರಿಲ್‌ನಿಂದ ಶಾಲಾಭಿವೃದ್ಧಿ ಸಮಿತಿ ರಚನೆಗೆ ಅವಕಾಶ ನೀಡಿದೆ ಎಂದರು.

ಸ್ಥಳೀಯ ಶಾಸಕರ ಶಿಫಾರಸು ಮತ್ತು ಶಾಲಾಭಿವೃದ್ಧಿ ಸಮಿತಿ ಸರ್ವಸದಸ್ಯರ ಒಪ್ಪಿಗೆ ಮೇರೆಗೆ ಅಧ್ಯಕ್ಷರ ಆಯ್ಕೆ ನಡೆಯುತ್ತದೆ. ಸಂಪನ್ಮೂಲ ಕ್ರೋಡೀಕರಣ, ದಾನಿಗಳ ನೆರವು ಪಡೆದು ಶೈಕ್ಷಣಿಕ ಪ್ರಗತಿಗೆ ಸಹಕರಿಸುವುದು ಮತ್ತು ಶಿಕ್ಷಕರಿಗೆ ಅತ್ಮಸ್ಥೈರ್ಯ ತುಂಬುವುದು ಇದರ ಸದುದ್ದೇಶಗಳಲ್ಲಿ ಒಂದಾಗಿದೆ ಎಂದರು.

ಶಿಕ್ಷಕ ಬಸವರಾಜ್ ಕೆಂಚನಗೌಡರ್ ಮಾತನಾಡಿ, 2015 ಸಾಲಿನಿಂದ ಈ ವರೆಗೂ ಅಧ್ಯಕ್ಷರಾಗಿದ್ದ ಅನಿಲ್ ಯಾದವ್ ಅವಧಿಯಲ್ಲಿ 18 ಕೊಠಡಿಗಳಿಗೆ ಸುಣ್ಣ–ಬಣ್ಣ, 19 ಅಂಗವಿಕಲರಿಗೆ ತ್ರಿಚಕ್ರ ಸೈಕಲ್, 6 ಕೊಠಡಿಗೆ ₹ 6.6 ಲಕ್ಷ ವೆಚ್ಚದಲ್ಲಿ ನೆಲಹಾಸು ಟೈಲ್ಸ್, ಒಂದು ಕಂಪ್ಯೂಟರ್, ಶಾಲಾ ಶೈಕ್ಷಣಿಕ ಪರಿಕರ ವಿತರಣೆಯಂಥ ಉತ್ತಮ ಕೆಲಸ ಮಾಡಿಸಿದ್ದಾರೆ. ಪ್ರಸ್ತುತ ₹ 2.5 ಲಕ್ಷ ವೆಚ್ಚದಲ್ಲಿ ರಂಗಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪುರಸಭೆ ಸದಸ್ಯ ಜಿ.ಎ.ರವೀಂದ್ರ, ಸಮಾಜ ಸೇವೆಯಲ್ಲಿ ಗುರುತಿಸಿಕೊಂಡು ಉತ್ತಮ ನಾಯಕರಾಗಿ ಹೊರ ಹೊಮ್ಮಲು ಯುವಕರಿಗೆ ಉತ್ತಮ ಅವಕಾಶಗಳಿವೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಪ್ರತಿಯೊಬ್ಬರು ಶಾಲೆಯ ಋಣ ತೀರಿಸಬೇಕು. ಶಾಲೆಗಳ ಪ್ರಗತಿಗೆ ಶ್ರಮಿಸಬೇಕು. ದಿನನಿತ್ಯದ ನಿರ್ಹಹಣೆ ವ್ಯವಸ್ಥಿತವಾಗಿ ನಡೆಯಬೇಕು ಎಂದರು.

ನಿರ್ಗಮಿತ ಅಧ್ಯಕ್ಷ ಅನಿಲ್ ಯಾದವ್ ಮತ್ತು ನೂತನ ಅಧ್ಯಕ್ಷ ಬಿ.ವಿ.ಲಕ್ಷ್ಮಿನಾರಾಯಣ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಚನ್ನಬಸವರಾಜು, ಮುನೀಂದ್ರ, ಅರ್ಜುನ್, ಅಣ್ಣಪ್ಪ, ರಾಘವೇಂದ್ರ, ಎಂ.ಲಕ್ಷ್ಮಿನಾರಾಯಣ, ಡಿ.ಎಂ.ವೇಣುಗೋಪಾಲ್, ಬಿ.ಜಿ.ಗುರುಸಿದ್ದಪ್ಪ, ಉಪ ಪ್ರಾಂಶುಪಾಲೆ ನಾಗರತ್ನ ಬಡಿಗೇರ, ಶಿಕ್ಷಕ ಗಂಗರಾಜ್ ಇದ್ದರು.

ಪೋಲಿ ಯುವಕರಿಂದ ವಿದ್ಯಾರ್ಥಿನಿಯರಿಗೆ ಕಿರಿಕಿರಿ

ಪುರಸಭೆ ಸದಸ್ಯ ಜಿ.ಎ.ರವೀಂದ್ರ ಮಾತನಾಡಿ, ಈ ಶಾಲೆ ಹೊಸಬಸ್ ನಿಲ್ದಾಣದ ಎದುರಿಗಿದೆ. ತಂಗುದಾಣವು ಶಾಲೆಗೆ ಅಂಟಿಕೊಂಡಿದೆ. ಶಾಲೆಯ ನಿಗಧಿತ ವೇಳೆಯಲ್ಲಿ ಅನೇಕ ಪೋಲಿ ಯುವಕರು ಹೆಣ್ಣು ಮಕ್ಕಳಿಗೆ ವಿನಾಕಾರಣ ಕಿರಿಕಿರಿ ಮಾಡುತ್ತಿದ್ದಾರೆ ಎಂದರು.

ಇದೊಂದು ದೊಡ್ಡ ಸಮಸ್ಯೆಯಾಗಿದ್ದು ಅತಿ ಸೂಕ್ಷ್ಮ ಹಾಗೂ ಗಂಭೀರ ವಿಚಾರ. ಪ್ರತಿದಿನ ಒಬ್ಬ ಪೊಲೀಸರನ್ನು ನೇಮಕ ಮಾಡಬೇಕು ಎಂದು ಶಿಕ್ಷಕರು ಸಭೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT