ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿಷ್ಕ್ರಿಯ

Last Updated 30 ಡಿಸೆಂಬರ್ 2017, 9:07 IST
ಅಕ್ಷರ ಗಾತ್ರ

ಅಫಜಲಪುರ: (ರೇಣುಕಾ ಯಲ್ಲಮ್ಮ ದೇವಿ ವೇದಿಕೆ) ‘ಸಾಹಿತಿಗಳನ್ನು ಮತ್ತು ಕಲಾಕಾರರನ್ನು ಗುರುತಿಸುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಾರತಮ್ಯ ಮಾಡುತ್ತಿದ್ದು, ಅದು ಸಂಪೂರ್ಣ ನಿಷ್ಕ್ರಯವಾಗಿದೆ. ಆ ಖಾತೆಯನ್ನು ಉಮಾಶ್ರೀ ಅವರು ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ’ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಗಂಭೀರ ಆರೋಪ ಮಾಡಿದರು.

ತಾಲ್ಲೂಕಿನ ಮಣೂರ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಲಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ‘ಉತ್ತರ ಕರ್ನಾಟಕದ ಕಲಾವಿದರಿಗೆ ಅನ್ಯಾಯವಾಗುತ್ತಿದೆ.

ಪ್ರತಿ ವರ್ಷ ಹಣಕಾಸು ವರ್ಷದಲ್ಲಿ ದಕ್ಷಿಣ ಕರ್ನಾಟಕದ ಕಲಾವಿದರಿಗೆ ಮಾಶಾಸನ, ಪ್ರತಿ ಜಿಲ್ಲೆಗೆ ಸಾವಿರಗಟ್ಟಲೇ ಕಲಾವಿದರಿಗೆ ಮಾಶಾಸನ ಮಂಜೂರು ನೀಡುತ್ತಾರೆ. ಆದರೆ, ಉತ್ತರ ಕರ್ನಾಟಕದ 200 ಕಲಾವಿದರಿಗೆ ಮಾತ್ರ ಮಾಶಾಸನ ಮಂಜೂರು ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಇಲ್ಲಿನ ಜಾನಪದ ಕಲಾವಿದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಹೆಚ್ಚಿನ ಕಾರ್ಯಕ್ರಮ ನೀಡಬೇಕು’ ಎಂದು ಆಗ್ರಹಿಸಿದ ಅವರು, ‘ಈ ಭಾಗದ
ಕಲಾವಿದರು ಕಾರ್ಯಕ್ರಮಕ್ಕೆ ಭಾಗವಹಿಸಿದಾಗ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಕಾರ್ಯಕ್ರಮ ಮಾಡಿರುವ ಬಗ್ಗೆ ದಾಖಲೆಗಳನ್ನು ಇಟ್ಟುಕೊಂಡಿರಬೇಕು. ಇದರಿಂದ ಮಾಶಾಸನಕ್ಕೆ ಅನುಕೂಲವಾಗುತ್ತದೆ’ ಎಂದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಾಹಿತಿ ವಿಜಯಕುಮಾರ ಸಾಲೀಮಠ ಮಣೂರ ‘ಕರಜಗಿ ಎರಡು ಗ್ರಾಮಗಳಲ್ಲಿ ಸಾಹಿತಿಗಳು ಮತ್ತು ಕಲಾವಿದರು ತುಂಬಿಕೊಂಡಿದ್ದಾರೆ. ಈ ಭಾಗ ಕಲೆಗಳ ನಾಡಾಗಿದೆ. ಅದಕ್ಕಾಗಿ ಇಲ್ಲಿ 3 ವಲಯ ಸಮ್ಮೇಳನಗಳು ನಡೆದುಹೋಗಿವೆ’ ಎಂದರು.

ಸಮ್ಮೇಳನದಲ್ಲಿ 3ನೇ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಂಗಣ್ಣ ನಂದಗಾಂವ್ ಅವರು 4ನೇ ಸಮ್ಮೇಳನ ಅಧ್ಯಕ್ಷರಾಗಿರುವ ಶಂಕರೆಪ್ಪ ಹಳೆಮನಿ ಹಾಗೂ ಶಾಮರಾವ್ ಲಾಳಸಂಗಿ ಅವರಿಗೆ ಕನ್ನಡ ಧ್ವಜ ನೀಡಿದರು.

ಸಮ್ಮೇಳನದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಮಹಾದೇವಪ್ಪ ಕರೂಟಿ, ರಮೇಶ ಬಾಕೆ, ವಿಕ್ರಮ ಭಟ್‌, ಗುರುಬಾಳಪ್ಪ ಜಕಾಪುರೆ, ಹಾಜಿಮಲಂಗ ಮುತವಲ್ಲಿ, ನಾಗನಾಥ ಪಾಟೀಲ, ವಲಯ ಅಧ್ಯಕ್ಷ ಚಂದ್ರಶೇಖರ ಹೊಸುರಕರ, ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ.ನದಾಫ್‌, ಬಾಬು ಮಾಶಾಳ, ಶರಣಯ್ಯ ಹಿರೇಮಠ, ಬಾಬುಮಿಯಾ ಪುಲಾರಿ, ಸಾವಿತ್ರಿ ಚಾಂದಕೋಟೆ, ರಾಹುಲ್‌ ಸಿಂಪಿ, ರಮೇಶ ಮುಜಗೊಂಡ, ಮಲ್ಲಿಕಾರ್ಜುನ ಯಂಕಂಚಿ ಇದ್ದರು.

ನಿವೃತ್ತಿ ಮುಖ್ಯಶಿಕ್ಷಕರಾದ ಶರಣಪ್ಪ ರೋಡಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಮಾಜಿ ಸೈನಿಕರಾದ ಜಟ್ಟೆಪ್ಪ ಬುಯ್ಯಾರ ಪರಿಷತ್‌ ಧ್ವಜಾರೋಹಣ ನೆರವೇರಿಸಿದರು. ನಾಗನಾಥ ಪಾಟೀಲ ಅವರು ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಉದ್ಘಾಟಿಸಿದರು. ಹುಸೇನ್‌ ಭಾಷಾ ಮುಜಾವಾರ ನಿರೂಪಿಸಿದರು. ವಿಶ್ವನಾಥ ಕರೂಟಿ ಸ್ವಾಗತಿಸಿದರು. ರಾಹುಲ್ ಹೊಸುರಕರ ವಂದಿಸಿದರು.

ಮಹಾದ್ವಾರಗಳು: ಕಸಾಪ ಸಮ್ಮೇಳನದಲ್ಲಿ ಯಲ್ಲಮ್ಮದೇವಿ ಮಹಾದ್ವಾರ, ದೇವಪ್ಪ ಮಹಾರಾಯರ ಮಹಾದ್ವಾರ, ಹಜರತ್ತಪೀರ ಮಿಟ್ಟೇವಲಿ ಮಹಾದ್ವಾರ, ದಿ.ಹನುಮದಾಸರು ಸಾಹಿತಿಗಳ ಮಹಾದ್ವಾರ ಹಾಗೂ ದಿ.ಗಡ್ಡೆಪ್ಪ ಆಲೂರ ಮತ್ತು ದಿ.ಮಲಕಪ್ಪ ನಿವರಗಿ ಅವರ ಮಹಾದ್ವಾರ ನಿರ್ಮಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT