ಬೆಂಗಳೂರು: ‘ಮುಗುಳು ನಗೆ’ಯ ನಂತರ ಯೋಗರಾಜ ಭಟ್ಟರು ಹೊಸ ಹುಡುಗರ ಪಡೆ ಕಟ್ಟಿಕೊಂಡು ಮತ್ತೊಂದು ಸಿನಿಮಾ ಮಾಡಲು ಸಿದ್ಧತೆ ನಡೆಸಿರುವುದು ತಿಳಿದೇ ಇದೆ. ಈ ಚಿತ್ರಕ್ಕಿನ್ನೂ ಶೀರ್ಷಿಕೆ ಅಂತಿಮಗೊಂಡಿಲ್ಲ. ‘ಪ್ರೊಡಕ್ಷನ್ ನಂ– 6’ ಎಂಬ ತಾತ್ಕಾಲಿನ ಹೆಸರಿನಲ್ಲಿರುವ ಸಿನಿಮಾಗೆ ನಾಯಕ ಮತ್ತು ಪ್ರಮುಖ ನಟರ ಆಯ್ಕೆ ಅಂತಿಮಗೊಂಡಿದೆ. ಸಿನಿಮಾದ ಕುರಿತ ಕೆಲವು ವಿವರಗಳನ್ನು ಚಿತ್ರತಂಡ ಬಹಿರಂಗಪಡಿಸಿದೆ.
‘1/4 ಕೆ.ಜಿ. ಪ್ರೀತಿ’ ಚಿತ್ರದ ಮೂಲಕ ಪರಿಚಿತರಾಗಿದ್ದ ವಿಹಾನ್ ಈ ಚಿತ್ರದ ನಾಯಕ. ಹಾಗೆಂದು ಇದು ನಾಯಕಪ್ರಧಾನ ಚಿತ್ರ ಅಲ್ಲ. ಯುವಮನಸ್ಸುಗಳ ಮನಸ್ಥಿತಿಗೆ ಕನ್ನಡಿ ಹಿಡಿಯು ಕಥನ ಎಳೆಯನ್ನು ಇಟ್ಟುಕೊಂಡಿರುವ ಈ ಸಿನಿಮಾದಲ್ಲಿ ಹದಿನೈದು ಪ್ರಮುಖ ಪಾತ್ರಗಳು ಇರುತ್ತವಂತೆ.
‘ಡ್ರಾಮಾ’ ಸಿನಿಮಾದ ನಂತರ ಮಾಡುತ್ತಿರುವ ಇನ್ನೊಂದು ಹುಡುಗರ ಚಿತ್ರ ಇದು. ಅದ್ಭುತವಾದ ಕಥೆ ಇದೆ. ಮಾಸ್ತಿ ಮಂಜು ಮತ್ತು ಕಾಂತಪ್ಪ ಎಂಬ ಇಬ್ಬರು ಪ್ರತಿಭಾವಂತ ಹುಡುಗರು ಬರೆದಿರುವ ಕಥೆ ಇದು. ಈ ಚಿತ್ರದ ಮುಖ್ಯನಾಯಕ ವಿಹಾನ್, ಪ್ರತಿಭಾವಂತ ನಟ. ಭವಿಷ್ಯದ ನಾಯಕನಟ ಅವನು’ ಎಂದು ಹೇಳಿಕೊಳ್ಳುತ್ತಾರೆ ಯೋಗರಾಜ ಭಟ್ಟರು.
‘ಇದು ಹೃದಯಂಗಮ ಯೂಥ್ಫುಲ್ ಕಥೆಯನ್ನು ಸಾಕಷ್ಟು ಹಾಸ್ಯದೊಂದಿಗೆ ಹೇಳುವ ಸಿನಿಮಾ. ಎರಡು ಪೀಳಿಗೆಯ ನಡುವಿನ ಪ್ರೇಮ–ದ್ವೇಷದ ಸಂಬಂಧವೇ ಈ ಚಿತ್ರದ ಪ್ರಮುಖ ಅಂಶ’ ಎಂದು ಕಥೆಯ ಬಗ್ಗೆ ಪರೋಕ್ಷವಾಗಿ ಸುಳಿವು ನೀಡುತ್ತದೆ ಚಿತ್ರತಂಡ. ಬದುಕು ಮತ್ತು ರೇಸ್ ಎರಡನ್ನೂ ಹೋಲಿಸಿನೋಡುವ ಪ್ರಯತ್ನವೂ ಈ ಚಿತ್ರದಲ್ಲಿದೆಯಂತೆ. ವಿಹಾನ್ ಜತೆ ರಾಜ್ ದೀಪಕ್ ಶೆಟ್ಟಿ ನೆಗೆಟೀವ್ ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹರಿಕೃಷ್ಣ ಸಂಗೀತ ಸಂಯೋಜನೆ, ಸುಜ್ಞಾನ್ ಛಾಯಾಗ್ರಹಣ ಇರಲಿದೆ. ಯೋಗರಾಜ್ ಭಟ್ ಮತ್ತು ಜಯಂತ್ ಕಾಯ್ಕಿಣಿ ಹಾಡುಗಳನ್ನು ಬರೆಯಲಿದ್ದಾರೆ. ‘ಯೋಗರಾಜ್ ಸಿನಿಮಾಸ್’ ಅಡಿಯಲ್ಲಿಯೇ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರದ ಚಿತ್ರೀಕರಣ ಜನವರಿ 22ರಿಂದ ಆರಂಭವಾಗಲಿದೆ.
‘ಒಂದಿಷ್ಟು ಹೊಸ ಆ್ಯಕ್ಷನ್, ಹೊಸ ತಮಾಷೆ, ಹೊಸ ವೇದಾಂತ, ಹೊಸ ಜಗಳ, ಹೊಸ ಹೋರಾಟಗಳು ಈ ಸಿನಿಮಾದಲ್ಲಿ ಇರುತ್ತವೆ. ಜತೆಗೆ ಕೇಳಲು ಪರಮಾದ್ಭುತ ಹಾಡುಗಳೂ ಇರುತ್ತವೆ’ ಎಂಬ ಭರವಸೆಯನ್ನೂ ಭಟ್ಟರು ನೀಡುತ್ತಾರೆ.