ವಿಜಯಪುರ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ನ್ನು ಇನ್ನೂ ಯಾರೊಬ್ಬರಿಗೂ ಖಾತ್ರಿಗೊಳಿಸಿಲ್ಲ. ನವ ಕರ್ನಾಟಕ ಪರಿವರ್ತನಾ ರ್ಯಾಲಿ ಹೋದೆಡೆ ಸ್ಥಳೀಯರನ್ನು ಹುರಿದುಂಬಿಸಲು ಕೆಲವರ ಹೆಸರು ಘೋಷಿಸಲಾಗಿದೆಯಷ್ಟೇ...’
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ, ಮುಧೋಳ ಶಾಸಕ ಗೋವಿಂದ ಕಾರಜೋಳ ಈಚೆಗೆ ವಿಜಯಪುರ ನಗರ ಮಂಡಲದ ಪದಾಧಿಕಾರಿಗಳ ಸಭೆಯಲ್ಲಿ ನೀಡಿದ ಮರ್ಮಾಘಾತದ ಹೇಳಿಕೆಯಿದು.
‘ಖರೇ ಹೇಳ್ಬೇಕು ಅಂದ್ರೇ ನಂಗೂ ಟಿಕೆಟ್ ಖಾತ್ರಿಯಿಲ್ಲ. ಹಿಂದಿನ ಚುನಾವಣೆಗಳಲ್ಲಿ ಪಕ್ಷದ ಬಿ ಫಾರ್ಮ್ ಹಂಚಿದಂತೆ ಈ ಚುನಾವಣೆಯಲ್ಲಿ ಹಂಚಲ್ಲ. ಎಲ್ಲವೂ ಅಮಿತ್ಷಾ ನೇತೃತ್ವದ ತಂಡದಿಂದಲೇ ಅಂತಿಮಗೊಳ್ಳೋದು...
ನೀವೂ ಸುಮ್ನೇ ಒಬ್ಬೊಬ್ಬರೇ ವೈಯಕ್ತಿಕ ಪ್ರಚಾರ ಮಾಡೋದನ್ನ ಬಿಡಿ. ಪಕ್ಷದ ಸಂಘಟನೆಗಾಗಿ ಒಟ್ಟಾಗಿ ದುಡಿಯಿರಿ’ ಎಂದು ಹೇಳುತ್ತಿದ್ದಂತೆ ಸಭೆಯಲ್ಲಿ ಉಪಸ್ಥಿತರಿದ್ದ ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಮೂಲಕ ಪ್ರದರ್ಶಿಸುತ್ತಿದ್ದ ರಣೋತ್ಸಾಹಕ್ಕೆ ತೆರೆ ಎಳೆದು, ಜೋಲು ಮೋರೆ ಹಾಕಿದರು.