ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಯರ್‌ ಅವರೇ ಫ್ಲೆಕ್ಸ್‌ ಹಾಗೆಯೇ ಇದೆ...!

Last Updated 30 ಡಿಸೆಂಬರ್ 2017, 20:49 IST
ಅಕ್ಷರ ಗಾತ್ರ

ಬೆಂಗಳೂರು: ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ ಹಾಗೂ ವಿಶ್ವೇಶ್ವರಪುರ ವಾರ್ಡ್‌ಗಳಲ್ಲಿ ಅನಧಿಕೃತ ಫ್ಲೆಕ್ಸ್‌ಗಳನ್ನು ತೆಗೆಸುವಂತೆ ಮೇಯರ್‌ ಸಂಪತ್‌ರಾಜ್‌ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ ಬಳಿಕವೂ ಹುಟ್ಟುಹಬ್ಬ, ಹೊಸ ವರ್ಷದ ಶುಭಾಶಯ ಕೋರುವಂತಹ ಅನಧಿಕೃತ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.

ಶುಕ್ರವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ವಿಶ್ವೇಶ್ವರಪುರ ವಾರ್ಡ್‌ನಲ್ಲಿ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌, ಹೋರ್ಡಿಂಗ್‌ಗಳನ್ನು ತೆರವುಗೊಳಿಸಬೇಕು ಎಂದು ಸ್ಥಳೀಯ ಪಾಲಿಕೆ ಸದಸ್ಯೆ ವಾಣಿ ವಿ.ರಾವ್‌ ಒತ್ತಾಯಿಸಿದ್ದರು. ಇದಕ್ಕೆ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ನ ಸದಸ್ಯೆ ಪ್ರತಿಭಾ ಧನರಾಜ್‌ ಕೂಡಾ ಧ್ವನಿಗೂಡಿಸಿದ್ದರು.

ಇದಕ್ಕೆ ಉತ್ತರಿಸಿದ್ದ ಮೇಯರ್‌, ‘ಈ ವಾರ್ಡ್‌ಗಳಲ್ಲಿ ನಾಳೆಯಿಂದ ಒಂದು ಬ್ಯಾನರ್‌, ಫ್ಲೆಕ್ಸ್‌ ಇದ್ದರೆ, ವಾರ್ಡ್‌ನ ಎಂಜಿನಿಯರ್‌ ಅವರನ್ನು ಅಮಾನತು ಮಾಡುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಈ ಎರಡು ವಾರ್ಡ್‌ಗಳೂ ಸೇರಿದಂತೆ ನಗರದ ಎಲ್ಲೆಡೆ ಫ್ಲೆಕ್ಸ್‌ ಹಾವಳಿ ಇದೆ. ಹೆಚ್ಚಿನ ಕಡೆ ರಾಜಕೀಯ ಮುಖಂಡರು ಹಾಗೂ ಅವರ ಅಭಿಮಾನಿಗಳೇ ಇವುಗಳನ್ನು ಅಳವಡಿಸಿದ್ದಾರೆ. ಇವುಗಳನ್ನು ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಪಾಲಿಕೆ ಇನ್ನೂ ಕ್ರಮ ಕೈಗೊಂಡಿಲ್ಲ.

ಎಂ.ಜಿ ರಸ್ತೆ ಯುದ್ದಕ್ಕೂ ಹೊಸವರ್ಷಕ್ಕೆ ಶುಭಾಶಯ ಕೋರುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಇಲ್ಲಿನ ಶಾಸಕ ಎನ್‌.ಎ.ಹ್ಯಾರಿಸ್‌ ಅವರ ಚಿತ್ರವೂ ಇದೆ.

ಅಚ್ಚರಿ ಎಂದರೆ ಪಾಲಿಕೆ ಕಚೇರಿ ಎದುರೇ ಅನಧಿಕೃತ ಫ್ಲೆಕ್ಸ್‌ ಇದೆ. ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರಾಮಲಿಂಗಾ ರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂ ರಾವ್‌ ಹಾಗೂ ಮಾರುಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷೆ ಗಾಯತ್ರೀ ಅವರ ಚಿತ್ರವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT