ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್‌: 58 ಹಳ್ಳಿಗಳ ಪುಟ್ಟ ತಾಲ್ಲೂಕು

ತಾಲ್ಲೂಕು ವ್ಯಾಪ್ತಿ ಮರು ಪರಿಶೀಲನೆಗೆ ಒತ್ತಾಯ
Last Updated 31 ಡಿಸೆಂಬರ್ 2017, 9:07 IST
ಅಕ್ಷರ ಗಾತ್ರ

ಗುರುಮಠಕಲ್: 138 ಗ್ರಾಮಗಳನ್ನು ಸೇರಿಸಿ ತಾಲ್ಲೂಕು ರಚಿಸಬೇಕು ಎಂಬ ಹೋರಾಟಗಾರರ ಬೇಡಿಕೆ ಈಡೇರದಿದ್ದರೂ, ಗುರುಮಠಕಲ್ ಕೊನೆಗೂ ಕೇವಲ 58 ಗ್ರಾಮಗಳ ಪುಟ್ಟ ತಾಲ್ಲೂಕು ಕೇಂದ್ರವಾಗಿ ಜನವರಿಯಿಂದ ಕಾರ್ಯಾರಂಭ ಮಾಡಲಿದೆ.

ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ಸಂದರ್ಭದಲ್ಲಿ ಗುರುಮಠ ಕಲ್ ತಾಲ್ಲೂಕು ಕೇಂದ್ರವಾಗುವ ಆಸೆ ಚಿಗುರೊಡೆದಿತ್ತು. ಅದಕ್ಕೆ ಪೂರಕ ಎನ್ನುವಂತೆ ಜಗದೀಶ ಶೆಟ್ಟರ್ ಅವರ ಅವಧಿಯಲ್ಲಿ ಗುರುಮಠಕಲ್ ತಾಲ್ಲೂಕು ಘೋಷಣೆ ಆಯಿತು. ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದೆ ಸುಮಾರು ನಾಲ್ಕು ವರ್ಷಗಳಿಗಿಂತಲೂ ಹೆಚ್ಚಿನ ಸಮಯದವರೆಗೆ ನನೆಗುದಿಗೆ ಬಿದ್ದಿದ್ದ ತಾಲ್ಲೂಕು ರಚನೆ ಇದೀಗ ಅನುಷ್ಠಾನಗೊಳ್ಳಲಿದೆ.

ನೂತನ ತಾಲ್ಲೂಕು ರಚನೆಗಾಗಿ ಈ ಹಿಂದೆ ಸರ್ಕಾರವೇ ರಚಿಸಿದ್ದ ನಕ್ಷೆಯಲ್ಲಿ ಭಾರಿ ಬದಲಾವಣೆಗಳು ಆಗಿವೆ. ಸೇಡಂ ತಾಲ್ಲೂಕಿನ 9 ಗ್ರಾಮ ಪಂಚಾಯಿತಿಗಳು ಇದೀಗ ಮಾಯವಾಗಿವೆ. ಗುರುಮಠ ಕಲ್ ಮತಕ್ಷೇತ್ರ ವ್ಯಾಪ್ತಿಯ ಸೈದಾಪುರ, ಬಳಿಚಕ್ರ, ಕೊಂಕಲ್, ಹತ್ತಿಕುಣಿ ಹೋಬಳಿಗಳ ವ್ಯಾಪ್ತಿಯ ಗ್ರಾಮಗಳೂ ಕೈಬಿಟ್ಟು ಕೇವಲ ಗುರುಮಠಕಲ್ ಪಟ್ಟಣ ಹಾಗೂ 57 ಗ್ರಾಮಗಳನ್ನು ಒಳಗೊಂಡ ತಾಲ್ಲೂಕು ರಚನೆಯ ನಕ್ಷೆಯನ್ನು ಬಿಡುಗಡೆಗೊಳಿಸಿ ಸಾರ್ವಜನಿಕರ ಆಕ್ಷೇಪ ಸಲ್ಲಿಕೆಗೆ ಮನವಿ ಮಾಡಿದೆ.

ಈ ಹಿನ್ನೆಲೆಯಲ್ಲಿ ಗುರುಮಠಕಲ್ ಮಾತ್ರವಲ್ಲದೆ ಸೇಡಂ ವ್ಯಾಪ್ತಿಯ ಹಳ್ಳಿಗಳಿಂದಲೂ ತೀವ್ರ ಆಕ್ಷೇಪಗಳು ಕೇಳಿಬರುತ್ತಿವೆ. ಈಗಾಗಲೇ ತಮ್ಮನ್ನು ಗುರುಮಠಕಲ್ ತಾಲ್ಲೂಕಿಗೆ ಸೇರ್ಪಡೆ ಮಾಡುವಂತೆ ಸೇಡಂ ತಾಲ್ಲೂಕಿನ 30 ಗ್ರಾಮಗಳಿಂದ ಕಲಬುರ್ಗಿ ಜಿಲ್ಲಾಧಿಕಾರಿ, ಯಾದಗಿರಿ ಜಿಲ್ಲಾಧಿಕಾರಿ, ಸಚಿವರು, ಶಾಸಕರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ಹಣಕಾಸು ವಿಭಾಗ ಹೀಗೆ ಎಲ್ಲೆಡೆಯೂ ಮನವಿಗಳನ್ನು ನೀಡಲಾಗುತ್ತಿದೆ. ಮುಂದಿನ ಹಂತದಲ್ಲಿ ಹೋರಾಟಕ್ಕೆ ವೇದಿಕೆಯನ್ನು ನಿರ್ಮಾಣ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.

‘ಗುರುಮಠಕಲ್ ಮತಕ್ಷೇತ್ರ ವ್ಯಾಪ್ತಿಯ 101 ಗ್ರಾಮಗಳು, ಸೇಡಂ ತಾಲ್ಲೂಕು ವ್ಯಾಪ್ತಿಯ 36 ಗ್ರಾಮಗಳು ಹಾಗೂ ಗುರುಮಠಕಲ್ ಪಟ್ಟಣವನ್ನು ಒಳಗೊಂಡಿರುವ ತಾಲ್ಲೂಕು ರಚನೆ ಮಾಡಿದರೆ ಮಾತ್ರ ತಾಲ್ಲೂಕು ರಚನೆಯ ಉದ್ದೇಶ ಸಫಲವಾದಂತೆ. ಇಲ್ಲವಾದಲ್ಲಿ ನೂತನ ತಾಲ್ಲೂಕಿಗೆ ಯಾವುದೇ ಆದಾಯ ಮೂಲಗಳಿಲ್ಲದೆ ಅಭಿವೃದ್ಧಿಯೂ ಆಗುವುದಿಲ್ಲ. ಇದರಿಂದ ತಾಲ್ಲೂಕು ರಚನೆಯಿಂದಾದ ಲಾಭವಾದರೂ ಏನು’ ಎನ್ನುತ್ತಾರೆ ಇಲ್ಲಿನ ನರೇಶ ಗೋಂಗ್ಲೆ, ಶ್ರೀಧರರೆಡ್ಡಿ ಹಾಗೂ ಭೀಮು ಯಲ್ಹೇರಿ.

ಒಟ್ಟಾರೆಯಾಗಿ ಗುರುಮಠಕಲ್ ತಾಲ್ಲೂಕು ರಚನೆ ಹಲವು ಗೊಂದಲಗಳ ಗೂಡಾಗಿದೆ. ಸಿದ್ಧತೆಗಳೂ ಅಷ್ಟೇನು ವೇಗ ಪಡೆದಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಗುರುಮಠಕಲ್ ವಿಶೇಷ ತಹಶೀಲ್ದಾರರ ಕಚೇರಿಯಲ್ಲಿ ತಾಲ್ಲೂಕು ರಚನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಗಳೂ ಲಭ್ಯವಾಗದಿರುವುದು ಸಾರ್ವಜನಿಕರಲ್ಲಿನ ಗೊಂದಲಗಳಿಗೆ ಮತ್ತಷ್ಟೂ ಪುಷ್ಟಿ ನೀಡಿದೆ.

***
ನೂತನ ತಾಲ್ಲೂಕು ರಚನೆ ಆಗುತ್ತಿರುವುದು ಸ್ವಗತಾರ್ಹ. ಆದರೆ, ಈ ಮೊದಲಿನಂತೆ 138 ಗ್ರಾಮಗಳ ತಾಲ್ಲೂಕು ರಚಿಸಬೇಕು.
       -ಮಲ್ಲೇಶಪ್ಪ ಬೇಲಿ, ಹೈ.ಕ ಭಾಗದ ತಾಲ್ಲೂಕು ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ

***
ರೈತರಿಗೆ ಅನುಕೂಲವಾಗುವಂತೆ ನೂತನ ತಾಲ್ಲೂಕಿನಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಎಪಿಎಂಸಿ ಆವರಣದಲ್ಲಿ ಬೆಳೆಗಳ ಡಿಜಿಟಲ್ ಹರಾಜು ಕೇಂದ್ರವನ್ನು ಸ್ಥಾಪಿಸಬೇಕು.
-ಮಹಾದೇವ ಎಂಟಿಪಲ್ಲಿ, ಯುವ ಕೃಷಿಕ

***
ಸರ್ಕಾರದಿಂದ ನಮಗೆ ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ಪಡೆಯಬಹುದು.
-ಏಜಾಜ್ ಉಲ್ ಹಕ್
ವಿಶೇಷ ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT