ಮಾನ್ವಿ: ಕಳೆದ ಹಲವು ತಿಂಗಳಿಂದ ಸಾಮಾನ್ಯ ಸಭೆ ಕರೆಯದೆ ನಿರ್ಲಕ್ಷ್ಯವಹಿಸಿದ ಪುರಸಭೆಯ ಮುಖ್ಯಾಧಿಕಾರಿ ವಿರುದ್ಧ ಶನಿವಾರ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತವಾಯಿತು.
ಸಭೆಯ ಆರಂಭದಲ್ಲಿ ಮಾತನಾಡಿದ ಪುರಸಭೆಯ ವಿರೋಧ ಪಕ್ಷದ ನಾಯಕ ರಾಜಾ ಮಹೇಂದ್ರ ನಾಯಕ, ಸಭೆಯನ್ನು ಕರೆಯಲು ನಿರ್ಲಕ್ಷ್ಯ ವಹಿಸಿದಕ್ಕೆ ಕಾರಣ ನೀಡಲು ಒತ್ತಾಯಿಸಿದರು. ಪಟ್ಟಣದಲ್ಲಿ ನಿರ್ಮಾಣ ಮಾಡುತ್ತಿರುವ ಕೆರೆ ಕಾಮಗಾರಿಗೆ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಕೂಡಲೇ ಶ್ವೇತಪತ್ರ ಹೊರಡಿಸಬೇಕು. ಪುರಸಭೆ ಪೌರಕಾರ್ಮಿಕರಿಗೆ ಬಾಕಿ ಇರುವ ಐದಾರು ತಿಂಗಳ ವೇತನ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉಳಿದ ಸದಸ್ಯರು ಬೆಂಬಲಿಸಿದರು.
ಪಟ್ಟಣದ ಬೀದಿ ದೀಪಗಳ ನಿರ್ವಹಣೆಗೆ ಪ್ರತ್ಯೇಕವಾಗಿ ಟೆಂಡರ್ ಕರೆಯಬೇಕು. ಅಲ್ಲದೆ ದುರಸ್ತಿಗೊಂಡ ಒಂದು ಬೀದಿದೀಪ ಜೋಡಿಸಲು ವಾರಗಟ್ಟಲೆ ಸಮಯ ತೆಗೆದುಕೊಳ್ಳಲಾಗುತ್ತಿದೆ ಎಂದು ಎಂದು ಸದಸ್ಯ ಹುಸೇನ್ ಬೇಗ್ ದೂರಿದರು.
ಸದಸ್ಯೆ ಶ್ರೀದೇವಿ ಬಳಿಗಾರ ಮಾತನಾಡಿ, ‘ತಮ್ಮ ವಾರ್ಡಿನ ಪಂಪಾ ಉದ್ಯಾನದ ಹತ್ತಿರ ಮಹಿಳೆಯರು ಓಡಾಡಲು ಹಿಂಜರಿಯುತ್ತಿದ್ದು, ಕೂಡಲೇ ಬೀದಿದೀಪಗಳನ್ನು ಅಳವ ಡಿಸಬೇಕು’ ಎಂದು ಒತ್ತಾಯಿಸಿದರು.
ಸದಸ್ಯ ರಾಜಾ ಶ್ಯಾಮಸುಂದ ನಾಯಕ ಮಾತನಾಡಿ, ಪಟ್ಟಣ ಏಕೈಕ ಕ್ರೀಡಾ ಮೈದಾನಕ್ಕೆ ಜಿಲ್ಲಾಧಿಕಾರಿಗಳಿಂದ ಒಪ್ಪಿಗೆ ಪಡೆದು ಕಾಂಪೌಂಡ್ ಗೋಡೆ ನಿರ್ಮಾಣ ಮಾಡಬೇಕು ಎಂದರು.
‘ಚರಂಡಿಗಳಲ್ಲಿ ಹೂಳು ತೆಗೆದ ನಂತರ ತ್ಯಾಜ್ಯವನ್ನು ವಾರಗಟ್ಟಲೇ ರಸ್ತೆ ಮೇಲೆ ಬಿಡಲಾಗುತ್ತಿದೆ. ಇದರಿಂದ ದುರ್ವಾಸನೆ ಹೆಚ್ಚಾಗುತ್ತಿದೆ. ಆದ್ದರಿಂದ ಕೂಡಲೇ ತ್ಯಾಜ್ಯ ವಿಲೇವಾರಿ ಮಾಡಬೇಕು’ ಎಂದು ಸದಸ್ಯ ಶಕೀಲ್ ಬೇಗ್ ಒತ್ತಾಯಿಸಿದರು.
ಮುಖ್ಯಾಧಿಕಾರಿ ವೆಂಕಟೇಶ, ಮಾತನಾಡಿ, ‘ಅಧ್ಯಕ್ಷರ ಬದಲಾವಣೆಯಿಂದಾಗಿ ಸಾಮಾನ್ಯ ಸಭೆ ಕರೆಯಲು ಸಾಧ್ಯವಾಗಿಲ್ಲ. ಇನ್ನೂ 15 ದಿನಗಳ ಒಳಗಾಗಿ ಬೀದಿದೀಪಗಳ ನಿರ್ವಹಣೆಗೆ ಟೆಂಡರ್ ಕರೆಯಲಾಗುವುದು ಹಾಗೂ ಕುಡಿಯುವ ನೀರಿ ಸರಬರಾಜು, ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಪುರಸಭೆಯ ಅಧ್ಯಕ್ಷೆ ತಬಸ್ಸುಮ್ ಅಮ್ಜದ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಆಶಾಬೀ ಗೂಡು ಸಾಬ್, ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.