ನವದೆಹಲಿ, ಡಿ. 31– ತುರ್ತು ಪರಿಸ್ಥಿತಿ ಘೋಷಣೆ ಜನವರಿ 10ರಿಂದ ರದ್ದುಪಡಿಸಲಾಗುವುದೆಂದು ಇಂದು ಇಲ್ಲಿ ಅಧಿಕೃತವಾಗಿ ಪ್ರಕಟಿಸಲಾಯಿತು.
1962ರಲ್ಲಿ ಚೀನೀಯರು ಆಕ್ರಮಣ ಎಸಗಿದಾಗ ಆ ವರ್ಷ ಆಕ್ಟೋಬರ್ 26 ರಂದು ರಾಷ್ಟ್ರಪತಿಯವರು ತುರ್ತು ಪರಿಸ್ಥಿತಿ ಘೋಷಿಸಿದ್ದರು.
‘ಎಲ್ಲ ರಾಜ್ಯ ಸರ್ಕಾರಗಳಿಗೂ ಈ ಬಗೆಗೆ ತಿಳಿವಳಿಕೆ ಕೊಡಲಾಗಿದೆ. ಈ ತೀರ್ಮಾನಕ್ಕೆ ಅನುಗುಣವಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅವುಗಳನ್ನು ಕೋರಲಾಗಿದೆ’ ಎಂದು ಇಂದು ರಾತ್ರಿ ಪ್ರಕಟಿಸಲಾಗಿದೆ.
ಷೇಖ್ಗೂ ಸ್ವಾತಂತ್ರ್ಯ: ಭಾರತ ರಕ್ಷಣಾ ಶಾಸನದ ಪ್ರಕಾರ ಬಂಧಿಸಲಾಗಿರುವ ಎಲ್ಲರನ್ನೂ ಜ. 10ರ ವೇಳೆಗೆ ಬಿಡುಗಡೆ ಮಾಡಲಾ ಗುವುದೆಂದು ಗೊತ್ತಾಗಿದೆ. ಷೇಕ್ ಅಬ್ದುಲ್ಲಾ ಮೇಲಿನ ನಿರ್ಬಂಧಗಳೆಲ್ಲವೂ ಕೂಡ ಆ ವೇಳೆಗೆ ರದ್ದಾಗುತ್ತವೆ.
ಕೂಡಲಸಂಗಮದಲ್ಲಿ ಮಹಾರಾಜರಿಂದ ಪವಿತ್ರ ಪ್ರತಿಮೆಗಳ ಪ್ರತಿಷ್ಠಾಪನೆ
ಕೂಡಲಸಂಗಮ, ಡಿ. 31– ಬಸವೇಶ್ವರ ಹಾಗೂ ನೀಲಾಂಬಿಕೆಯರ ಪ್ರತಿಮೆಗಳನ್ನು ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರು ಇಂದು ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡುವುದರೊಡನೆ ಮಹಾತ್ಮ ಬಸವೇಶ್ವರರ ಎಂಟನೇ ಶತಮಾನೋತ್ಸವ ಸಮಾರಂಭವು ಇಲ್ಲಿ ಪ್ರಾರಂಭವಾಯಿತು.
ಮಹಾರಾಜರನ್ನು ಪೂರ್ಣ ಕುಂಭ ಹಾಗೂ ದೇವಾಲಯದ ಇತರ ರಾಜಮರ್ಯಾದೆಗಳೊಡನೆ ಸ್ವಾಗತಿಸಲಾಯಿತು.