ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಪ್ರಗತಿಗೆ ಪ್ರತಿಯೊಬ್ಬರ ಶ್ರಮ ಅಗತ್ಯ

Last Updated 2 ಜನವರಿ 2018, 7:10 IST
ಅಕ್ಷರ ಗಾತ್ರ

ವಿಜಯಪುರ: ಪ್ರಾಚೀನ ಭಾಷೆಗಳ ಪಟ್ಟಿಯಲ್ಲಿರುವ ರಾಷ್ಟ್ರಭಾಷೆ ಕನ್ನಡವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವಂತಹ ಪ್ರಾಮಾಣಿಕವಾದ ಸೇವೆಯನ್ನು ಪ್ರತಿಯೊಬ್ಬ ಕನ್ನಡಿಗರು ಮಾಡಬೇಕು ಎಂದು ಜೆಡಿಎಸ್ ನಾಯಕ ಡಾ.ಎಲ್.ಎನ್. ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಟಿಪ್ಪುನಗರದ ಮಹಬೂಬ್ ಪಾಷ ಅವರ ಮನೆಯ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಗರ ಘಟಕದಿಂದ ಭಾನುವಾರ ಆಯೋಜಿಸಲಾಗಿದ್ದ ಭಾಷಾ ಅಲ್ಪಸಂಖ್ಯಾತರಿಗೆ ಭಾಷೆಯ ಮಹತ್ವ ತಿಳಿಸುವ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಕನ್ನಡ ಭಾಷೆಯ ಮಹತ್ವವನ್ನು ಎಲ್ಲೆಡೆ ತಿಳಿಸಬೇಕಾಗಿದೆ. ಶಿಕ್ಷಣದಲ್ಲಿ ಕನ್ನಡ ಮಾಧ್ಯಮಕ್ಕಾಗಿ ಅವಿಸ್ಮರ­ಣೀಯವಾಗಿ ಹೋರಾಡಿದ ಮಹನೀಯರು, ಸೃಷ್ಟಿಯಾಗಬಹುದಾದ ಸಮಸ್ಯೆಗಳು ಮತ್ತು ಅವುಗಳ ಪರಿಹಾರದತ್ತ ಹೆಚ್ಚು ಗಮನ ಹರಿಸಿದ್ದು ತುಂಬಾ ವಿರಳ. ಕನ್ನಡಕ್ಕೆ ಬಹಳ ಪ್ರಯಾಸದಿಂದ ದೊರೆತ ಶಾಸ್ತ್ರೀಯ ಭಾಷೆಯ ಸ್ಥಾನಮಾನದಿಂದ ದೊರೆ­ಯುವ ಹಣಕಾಸು ಸಮರ್ಪಕವಾಗಿ ಬಳಕೆಯಾಗಬೇಕು. ಕನ್ನಡ ಭಾಷೆಯು ಅತ್ಯಂತ ಹೆಚ್ಚು ಮಾಹಿತಿ ತಂತ್ರ­ಜ್ಞಾನದ ಬೆಳವಣಿಗೆ ಕಂಡಿದೆ ಎಂದರು.

ಸಾಹಿತಿ ಚಂದ್ರಶೇಖರ ಹಡಪದ್ ಮಾತನಾಡಿ, ‘ಬದುಕನ್ನು ಕಟ್ಟಿಕೊಟ್ಟದ್ದು ಕನ್ನಡ ಭಾಷೆ. ನಾಡು ನಮಗೆ ಎಲ್ಲವನ್ನು ಕೊಟ್ಟಿದೆ. ಜನಪದರು ಕಟ್ಟಿದ ನಾಡಿನಲ್ಲಿ ಕನ್ನಡಿಗರಿಗೆ ಉದ್ಯೋಗ ಅವಕಾಶಗಳು ಸಿಗಬೇಕು. ಕನ್ನಡಪರ ಹೋರಾಟಗಾರರನ್ನು ಮರೆಯುವಂತಿಲ್ಲ. ನಾಡಿನ ಮೂಲ ನಿವಾಸಿಗಳಿಗೆ ಅವಕಾಶಗಳು ಸಿಗಬೇಕು. ನಾಡನ್ನು ಕಟ್ಟಲು ಸ್ವಾತಂತ್ರ್ಯ ಪೂರ್ವದಿಂದಲೂ ಹೋರಾಟಗಳು ನಡೆದಿವೆ. ಕನ್ನಡಕ್ಕೆ ಅಂತರರಾಷ್ಟ್ರೀಯ, ವಿಶ್ವ ಮಟ್ಟದ ಮಾನ್ಯತೆ ಸಿಕ್ಕಿದೆ. ಭಾಷೆಯ ಬೆಳವಣಿಗೆಗೆ ಗಡಿಯ ಮಿತಿಯಿಲ್ಲ ಎಂದರು.

ಹಿಂದೆ ಸರಿದಿಲ್ಲ: ‘ಚುನಾವಣೆಯ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಜನರು ನನ್ನನ್ನು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ನಿರಂತರವಾಗಿ ಜನರ ಸಂಪರ್ಕದಲ್ಲಿದ್ದೇನೆ. ಕೆಲವರು ವಿನಾಕಾರಣ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸ್ವಂತ ಕೆಲಸಗಳು ಇದ್ದ ಕಾರಣ ಕ್ಷೇತ್ರದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ’ ಎಂದರು.

ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ವಿ.ನಾ.ರಮೇಶ್, ನಾರಾಯಣಸ್ವಾಮಿ, ಮಹಬೂಬ್ ಪಾಷ, ಕಸಾಪ ನಗರ ಘಟಕದ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ, ಡಾ.ಶಿವಕುಮಾರ್, ಮಹೇಶ್ ಕುಮಾರ್, ಕಿರಣ್, ಬಿಜ್ಜವಾರ ಆನಂದ್, ಮಂಡಿಬೆಲೆ ವಿಜಯಕುಮಾರ್, ಮುನಿವೆಂಕಟರವಣಪ್ಪ, ಸಂಚಾಲಕ ಮುನಿರಾಜು, ನಜೀರ್, ಬಿಜ್ಜವಾರ ಮಹೇಶ್, ಆಂಜಿನಪ್ಪ, ಕರವೇ ಉಪಾಧ್ಯಕ್ಷ ಮಂಜುನಾಥ್, ಅಮೀರ್ ಜಾನ್, ಅಜೀಂ ಪಾಷ, ಜಂಗ್ಲಿ ಪೀರ್ ಬಾಬಾ ದರ್ಗಾದ ಸಾಬೀರ್ ಷಾ, ಕೆ.ಎಚ್.ಚಂದ್ರಶೇಖರ್, ಸದಾಖತ್ ಇದ್ದರು.

ಬಿಹಾರಿಗಳಿಗೆ ಕನ್ನಡ

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಚೀ.ಮಾ.ಸುಧಾಕರ್ ಮಾತನಾಡಿ, ವಲಸೆ ಬರುತ್ತಿರುವ ಬಿಹಾರಿಗಳಿಗೆ ಸ್ಥಳೀಯ ಭಾಷೆ ಸಮಸ್ಯೆ ಕಾಡುತ್ತಿದೆ. ಆದ್ದರಿಂದ ಅವರು ತುಂಬಾ ವಂಚನೆಗೆ ಒಳಗಾಗುತ್ತಿದ್ದಾರೆ. ಅವರಿಗೆ ವಾರಕ್ಕೊಮ್ಮೆ ಕನ್ನಡ ಕಲಿಸುವ ಕಾರ್ಯಕ್ರಮ ಮಾಡಲು ಚಿಂತನೆ ನಡೆಸಲಾಗಿದೆ. ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಅವಕಾಶ ಒದಗಿ ಬರಲಿದೆ ಎಂದರು.

ಮುಸ್ಲಿಂ ಸಮುದಾಯದವರು ಉರ್ದು ಜೊತೆಗೆ ಕನ್ನಡ ಕಲಿಯಿರಿ, ಭಾಷೆಯ ಸಮಸ್ಯೆಯಿಂದ ಬಾಂಧವ್ಯಕ್ಕೆ ತೊಂದರೆಯಾಗುತ್ತಿದೆ. ಕನ್ನಡ ಭಾಷೆ ಕಲಿತರೆ ಎಲ್ಲರಲ್ಲಿಯೂ ಬೆರೆಯುವ ಅವಕಾಶವಾಗುತ್ತದೆ ಎಂದು ತಿಳಿಸಿದರು.

ಉರ್ದು ಶಾಲೆಗಳಲ್ಲಿ ಕನ್ನಡ ಕಲಿಸುವ ವ್ಯವಸ್ಥೆಯಿರುವುದು ಸಂತಸ ತಂದಿದೆ. ಮಕ್ಕಳನ್ನು ದುಡಿಮೆಗೆ ಹಾಕಬೇಡಿ, ಆಡಳಿತ ಭಾಷೆ ಕನ್ನಡವಾಗಿರುವುದರಿಂದ ಅದನ್ನು ಕಲಿಯದಿದ್ದರೆ ಮುಂದಿನ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT