ಮಂಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗದಳದ ಯುವ ವಿಭಾಗ ಹಾಗೂ ದುರ್ಗಾವಾಹಿನಿ ವತಿಯಿಂದ ಲವ್ ಜಿಹಾದ್ ವಿರುದ್ಧ ಜನಜಾಗೃತಿ ಅಭಿಯಾನವನ್ನು ಇದೇ 3 ರಿಂದ 15 ದಿನಗಳವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ತಿಳಿಸಿದರು.
ವಾರ್ಡ್, ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಗ್ರಾಮಕ್ಕೊಂದು ಸಮಿತಿ ರಚಿಸಿ, ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಎಂದರು.
ಲವ್ ಜಿಹಾದ್ ವಿರೋಧಿಸಿ, ಹಿಂದೂ ಸಮಾಜದವರು ಒಟ್ಟಾಗಿ ಹೋರಾಟ ಮಾಡಲಾಗುವುದು. ಪೊಲೀಸ್ ಇಲಾಖೆ ಮುಸ್ಲಿಂ ಜಿಹಾದಿ ಮಾನಸಿಕತೆ ಇರುವ ಯುವಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಿಂದೂಗಳ ಸಂಖ್ಯೆ ಕಡಿಮೆ ಅಗುತ್ತಿದ್ದು, ಯುವಕರಿಗೆ ಕನ್ಯೆಯರು ಸಿಗದಂತಾಗಿದೆ. ಇಂತಹ ಸಂದರ್ಭ ಲವ್ ಜಿಹಾದ್ ಮೂಲಕ ಷಡ್ಯಂತ್ರ ಮಾಡಿ, ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದರು.
ಬಜರಂಗದಳದ ಶರಣ್ ಪಂಪ್ ವೆಲ್ ಮಾತನಾಡಿ, ಲವ್ ಜಿಹಾದ್ ಹಿಂದೆ ಪಿಎಫ್ಐ ಸಂಘಟನೆಯ ಕೈವಾಡವಿದೆ. ಇದು ಭಯೋತ್ಪಾದನೆಯ ಇನ್ನೊಂದು ಮುಖವಾಗಿದ್ದು, ಈ ಬಗ್ಗೆ ಎನ್ಐಎ ಮೂಲಕ ತನಿಖೆ ಮಾಡುವಂತೆ ರಕ್ಷಣಾ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ರೇಷ್ಮಾ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್ ಅವರಿಗೆ ಮನವಿ ಮಾಡಲಾಗಿದೆ ಎಂದರು.