ಮುಂಬೈ: ಹುಸಿ ಬಾಂಬ್ ಕರೆ ಮಾಡಿದ ಆರೋಪದ ಮೇಲೆ ಅಮೆರಿಕ ಕಂಪನಿಯ ಸಿಇಒ ವಿನೋದ್ ಮೂರ್ಜಾನಿ (45) ಅವರನ್ನು ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.
ನಿಗದಿತ ಸಮಯದಲ್ಲಿ ವಿಮಾನಗಳ ಸಂಚಾರಕ್ಕೆ ತೊಂದರೆ ಉಂಟು ಮಾಡುವ ಉದ್ದೇಶದಿಂದ ಮೂರ್ಜಾನಿ ಅವರು ನಿಲ್ದಾಣದ ಟೋಲ್ ಫ್ರಿ ನಂಬರ್ಗೆ ಕರೆ ಮಾಡಿ ಬಾಂಬ್ ಇರಿಸಲಾಗಿದೆ ಎಂದು ಹುಸಿ ಕರೆ ಮಾಡಿದ್ದರು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ವಿಮಾನ ಸಿಬ್ಬಂದಿ ಹೆಚ್ಚಿನ ಮಾಹಿತಿ ಪಡೆಯುವ ಮುನ್ನವೇ ಮೂರ್ಜಾನಿ ಕರೆಯನ್ನು ರದ್ದುಗೊಳಿಸಿದ್ದರು. ಬಳಿಕ ವಿಷಯವನ್ನು ಸಿಬ್ಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಸಿ.ಸಿ.ಟಿ.ವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಟೆಲಿಫೋನ್ ಬೂತ್ ಬಳಿ ನಿಂತಿದ್ದ ಮೂರ್ಜಾನಿ ಅವರನ್ನು ಬಂಧಿಸಲಾಯಿತು ಎಂದು ಹೇಳಿದ್ದಾರೆ.
ಮುಂಬೈ–ನವದೆಹಲಿ ಮಾರ್ಗವಾಗಿ ಮೂರ್ಜಾನಿ ರೋಮ್ಗೆ ತೆರಳಬೇಕಿತ್ತು. ಮುಂಬೈನಿಂದ ವಿಮಾನ ತಡವಾಗಿ ಹೊರಟರೆ ತಡರಾತ್ರಿ ವಿಮಾನ ಹತ್ತಲು ಅನುಕೂಲವಾಗುತ್ತದೆ ಎಂದು ಮೂರ್ಜಾನಿ ಹುಸಿ ಕರೆ ಮಾಡಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.
ಮೂರ್ಜಾನಿ ಅವರನ್ನು ನಂತರ ಅಂಧೇರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರುಪಡಿಸಲಾಯಿತು. ಕೋರ್ಟ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತು. ನಂತರ ಪತ್ನಿ ಮತ್ತು ಮಗುವಿನೊಂದಿಗೆ ನವದೆಹಲಿ–ವರ್ಜೀನಿಯಾ ಮಾರ್ಗವಾಗಿ ರೋಮ್ಗೆ ತೆರಳಿದರು ಎಂದು ತಿಳಿಸಿದ್ದಾರೆ.