ಪಾವಗಡ: ತಾಲ್ಲೂಕಿನ ಜೀತದಾಳುಗಳ ಬಿಡುಗಡೆ, ಪುನರ್ವಸತಿಗಾಗಿ ಒತ್ತಾಯಿಸಿ ಜೀತ ವಿಮುಕ್ತಿ ಕರ್ನಾಟಕ, ತಮಟೆ ಕಲಾವಿದರ ಒಕ್ಕೂಟದ ನೇತೃತ್ವದಲ್ಲಿ ಜೀತವಿಮುಕ್ತರು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಬುಧವಾರ ಧರಣಿ ನಡೆಸಿದರು.
‘ತಾಲ್ಲೂಕಿನ 707 ಮಂದಿ ಜೀತದಾಳುಗಳ ಪೈಕಿ 18 ಮಂದಿಗೆ ಪರಿಹಾರ, ಗುರುತಿನ ಚೀಟಿ ಸೇರಿದಂತೆ ಇತ್ಯಾದಿ ಸೌಲಭ್ಯಗಳನ್ನು ಕೊಟ್ಟಿಲ್ಲ. ಸುಮಾರು 500 ಕ್ಕೂ ಹೆಚ್ಚಿನ ಅರ್ಜಿಗಳು ತಾಲ್ಲೂಕು ಕಚೇರಿಯಿಂದ ನಾಪತ್ತೆಯಾಗಿವೆ’ ಎಂದು ಧರಣಿ ನಿರತರು ದೂರಿದರು.
ಸಮೀಕ್ಷೆಯಲ್ಲಿ ಕೈ ಬಿಟ್ಟಿರುವ ಹಾಗೂ ಪರಿಹಾರ ಕೋರಿ ಅರ್ಜಿ ಸಲ್ಲಿಸಿರುವ ಎಲ್ಲ ಜೀತದಾಳುಗಳಿಗೂ ಗುರುತಿನ ಚೀಟಿ, ಪರಿಹಾರ ಕೊಡಬೇಕು. ಜೀತ ವಿಮುಕ್ತರಿಗೆ ಮನೆ, ನಿವೇಶನ, ಬ್ಯಾಂಕ್ ಗಳಿಂದ ಸಾಲ ಸೌಲಭ್ಯ ಕೊಡಿಸಬೇಕು. ಸರ್ಕಾರದ ಯೋಜನೆಗಳಲ್ಲಿ ಜೀತ ವಿಮುಕ್ತರಿಗೆ ಆದ್ಯತೆ ಕೊಡಬೇಕು. ಸವರ್ಣೀಯರಿಂದ ಹಲ್ಲೆಗೆ ಒಳಗಾಗಿರುವ ಜೀತದಾಳುಕುಟುಂಬದ ಸದಸ್ಯರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ಧನ ಕೊಡಿಸಬೇಕು. ಜೀತ ವಿಮುಕ್ತರಿಗೆ ಅಂತ್ಯೋದಯ ಪಡಿತರಚೀಟಿ ವಿತರಿಸಬೇಕು’ ಎಂದು ಒತ್ತಾಯಿಸಲಾಯಿತು.
ಮುಖಂಡ ಮಂಗಳವಾಡ ಟಿ ಹನುಮಂತರಾಯ, ಪಳವಳ್ಳಿ ಗಂಗಾಧರ, ಚಿನ್ನಮ್ಮನಹಳ್ಳಿ ವೆಂಕಟರವಣಪ್ಪ, ನರಸಿಂಹಮೂರ್ತಿ, ತಿಪ್ಪೇಸ್ವಾಮಿ, ತಿಮ್ಮಣ್ಣ, ಎಸ್.ಹನುಮಂತರಾಯ ಇದ್ದರು.