ಖಾನಾಪುರ: ವನವಾಸಿ ಕಲ್ಯಾಣ ಸಂಘಟನೆಯು ಜ. 6ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಶುಭಂ ಗಾರ್ಡನ್ ಸಭಾಗೃಹದಲ್ಲಿ ವನವಾಸಿಗಳ ಜಿಲ್ಲಾಮಟ್ಟದ ಸಮ್ಮೇಳನವನ್ನು ಆಯೋಜಿಸಿದೆ ಎಂದು ಸಂಘಟನೆಯ ರಾಜ್ಯ ಶ್ರದ್ಧಾ ಜಾಗರಣ ಪ್ರಮುಖ ಧೋಂಡು ಪಾಟೀಲ ಹೇಳಿದರು.
ಸಮ್ಮೇಳನವನ್ನು ಹಿರೇಮುನವಳ್ಳಿ ಶಾಂಡಿಲ್ಯ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸ ಲಿದ್ದು, ಗೌಳಿ ಸಮಾಜದ ತಾಲ್ಲೂಕಿನ ಮುಖಂಡ ಸಗ್ಗು ಥೋರವತ ಅಧ್ಯಕ್ಷತೆ ವಹಿಸಲಿದ್ದಾರೆ. ತಹಸೀಲ್ದಾರ್ ಶಿವಾ ನಂದ ಉಳ್ಳೇಗಡ್ಡಿ, ಸಮಾಜ ಕಲ್ಯಾಣ ಅಧಿಕಾರಿ ಮಹೇಶ ಉಣ್ಣಿ, ಆರ್.ಎಫ್.ಒ ಎಸ್.ಎಸ್ ನಿಂಗಾಣಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ವಾಸಿಸುವ ಲಕ್ಷಾಂತರ ವನವಾಸಿಗಳಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪುತ್ತಿಲ್ಲ. ಇವರಿಗೆ ಸರ್ಕಾರದ ಸವಲತ್ತುಗಳ ಬಗ್ಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಕಳೆದ 1988ರಿಂದ ರಾಜ್ಯದಲ್ಲಿ ವನವಾಸಿ ಕಲ್ಯಾಣ ಸಂಘಟನೆ ಅಸ್ತಿತ್ವದಲ್ಲಿದ್ದು, ರಾಜ್ಯದ ಅರಣ್ಯದಲ್ಲಿ ವಾಸಿಸುವ ವಾಲ್ಮೀಕಿ, ಮೇದಾರ, ಹಕ್ಕಿಪಿಕ್ಕಿ, ಗೌಳಿ, ಧನಗರ, ಹಾಲಕ್ಕಿ, ಕುಣಬಿ, ಸಿದ್ಧಿ, ಮಂಗನಮಾರಿ ಮತ್ತಿತರ ಬುಡಕಟ್ಟು ಜನಾಂಗದವರಿಗೆ ಮೂಲ ಸೌಕರ್ಯ ತಲುಪಿಸುವ ಪ್ರಯತ್ನ ಮಾಡುತ್ತಿದೆ ಎಂದರು.