ಬೆಂಗಳೂರು: ‘ನಗರದಲ್ಲಿ ನೀರಿನ ಸೋರಿಕೆ ತಡೆಗಟ್ಟಲು ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಆದರೂ, ನಿರೀಕ್ಷಿತ ಮಟ್ಟದಲ್ಲಿ ಸೋರಿಕೆ ತಡೆಗಟ್ಟಿಲ್ಲ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅಸಮಾಧಾನ ವ್ಯಕ್ತಪಡಿಸಿದರು.
ಜಲಮಂಡಳಿ ಎಂಜಿನಿಯರ್ಗಳ ಸಂಘದ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಂತ್ರಜ್ಞಾನ ಬದಲಾಗಿದೆ. ನೀರು ಎಲ್ಲಿ ಸೋರಿಕೆಯಾಗುತ್ತಿದೆ ಎಂಬುದನ್ನು ತಂತ್ರಜ್ಞಾನದಿಂದ ನಿಖರವಾಗಿ ತಿಳಿಯಬಹುದು. ಹೀಗಿದ್ದರೂ ಸೋರಿಕೆಗೆ ಕಡಿವಾಣ ಬಿದ್ದಿಲ್ಲ. ಈ ಬಗ್ಗೆ ಅಧಿಕಾರಿಗಳು ಇನ್ನಷ್ಟು ಕಾಳಜಿ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.
‘ಬಿಬಿಎಂಪಿಯು ರಸ್ತೆಗಳನ್ನು ನಿರ್ಮಿಸುವಾಗ ಜಲಮಂಡಳಿಯು ಸುಮ್ಮನಿರುತ್ತದೆ. ರಸ್ತೆ ನಿರ್ಮಾಣದ ಬಳಿಕ ಜಲಮಂಡಳಿಯು ರಸ್ತೆ ಅಗೆಯಲು ಮುಂದಾಗುತ್ತದೆ. ಅದನ್ನು ತಪ್ಪಿಸಲು ಅಧಿಕಾರಿಗಳಿಂದ ಸಾಧ್ಯವಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.
ಡೈರಿ, ದಿನಚರಿ ಬಿಡುಗಡೆ
ಸಂಘದ ತಾಂತ್ರಿಕ ದಿನಚರಿ ಹಾಗೂ ಕ್ಯಾಲೆಂಡರ್ಗಳನ್ನು ಸಚಿವರು ಬಿಡುಗಡೆ ಮಾಡಿದರು.
ಮಂಡಳಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಮುಸ್ಸಂಜೆ ಯೋಜನೆಯಡಿ ವೈದ್ಯಕೀಯ ಸೌಲಭ್ಯದ ಸ್ಮಾರ್ಟ್ ಕಾರ್ಡ್ಗಳ ವಿತರಿಸಲಾಯಿತು. 2017ನೇ ಸಾಲಿನಲ್ಲಿ ನಿವೃತ್ತರಾದ 16 ಎಂಜಿನಿಯರ್ಗಳನ್ನು ಸನ್ಮಾನಿಸಲಾಯಿತು.