ಬೆಂಗಳೂರು: ಇಂದಿರಾ ಮೊಬೈಲ್ ಕ್ಯಾಂಟೀನ್ಗಳಿಗೆ ಇದೇ 26ರಂದು ವಿಧಾನಸೌಧದ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
154 ಇಂದಿರಾ ಕ್ಯಾಂಟೀನ್ಗಳು ಕಾರ್ಯನಿರ್ವಹಿಸುತ್ತಿವೆ. 24 ವಾರ್ಡ್ಗಳಲ್ಲಿ ಸೂಕ್ತ ಸ್ಥಳಾವಕಾಶ ಸಿಗದ ಕಾರಣ ಕ್ಯಾಂಟೀನ್ ಆರಂಭಿಸಿರಲಿಲ್ಲ. ಹೀಗಾಗಿ ಇಲ್ಲಿ 24 ಮೊಬೈಲ್ ಕ್ಯಾಂಟೀನ್ಗಳ ಮೂಲಕ ಬಡವರಿಗೆ ಆಹಾರ ಪೂರೈಸಲಾಗುತ್ತದೆ ಎಂದು ತಿಳಿಸಿದರು.
154 ಕ್ಯಾಂಟೀನ್ಗಳಿಗೆ 76,150 ತಿಂಡಿ, 76,450 ಮಧ್ಯಾಹ್ನದ ಊಟ ಹಾಗೂ 44,250 ರಾತ್ರಿ ಊಟ ಸೇರಿ ತಿಂಗಳಿಗೆ 1,96,950 ಊಟ-ತಿಂಡಿ ವಿತರಿಸಲಾಗಿದೆ. ಪ್ರತಿ ತಿಂಡಿಗೆ ₹9.50 ಹಾಗೂ ಒಂದು ಊಟಕ್ಕೆ ₹11.25ರಂತೆ ಸಬ್ಸಿಡಿಯನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದೆ. ತಿಂಗಳಿಗೆ ₹6.24 ಕೋಟಿ ಪಾವತಿಸಲಾಗುತ್ತಿದೆ ಎಂದರು.
‘198 ಕ್ಯಾಂಟೀನ್ ಆರಂಭಗೊಂಡು, ವರ್ಷಕ್ಕೆ ಪಾವತಿಸುವ ಸಬ್ಸಿಡಿ ಲೆಕ್ಕಹಾಕಿದರೂ ₹100 ಕೋಟಿ ದಾಟುವುದಿಲ್ಲ. ಆಗಸ್ಟ್ 16ರಿಂದ ಆರಂ
ಭಿಸಿರುವ ಕ್ಯಾಂಟೀನ್ನಲ್ಲಿ ನೂರಾರು ಕೋಟಿ ಅಕ್ರಮ ನಡೆಯಲು ಹೇಗೆ ಸಾಧ್ಯ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ತಿಂಡಿ–ಊಟ ಪೂರೈಕೆಯಾದ ಗುತ್ತಿಗೆದಾರರಿಗೆ ಬಿಲ್ ಪಾವತಿಸುವುದಿಲ್ಲ. ಕ್ಯಾಂಟೀನ್ಗಳಿಗೆ ಇಂಡೆಂಟ್ ಕೊಟ್ಟ ನಂತರ ಅದು ಸಾರ್ವಜನಿಕರಿಗೆ ನಿಗದಿತ ಪ್ರಮಾಣದಲ್ಲಿ ವಿತರಣೆ ಆಗುತ್ತಿದೆಯೇ ಎನ್ನುವುದನ್ನು ಮೂರು ಹಂತಗಳಲ್ಲಿ ತಪಾಸಣಿಯಾಗುತ್ತದೆ. ಇದಕ್ಕಾಗಿ ನಿವೃತ್ತ ಯೋಧರನ್ನು ಕಿರಿಯ ಆಯುಕ್ತ ಅಧಿಕಾರಿಗಳಾಗಿ (ಜೂನಿಯರ್ ಕಮಿಷನರ್ಡ್ ಆಫೀಸರ್) ನೇಮಿಸಿಕೊಳ್ಳಲಾಗಿದೆ. ಇವರು ಆಹಾರ ಗುಣಮಟ್ಟ ಹಾಗೂ ಪ್ರಮಾಣ ಪರಿಶೀಲಿಸುತ್ತಾರೆ. ಸಿ.ಸಿ.ಟಿ.ವಿ ದೃಶ್ಯಗಳ ತುಣುಕುಗಳನ್ನೂ ಪರಿಶೀಲಿಸಿದ ನಂತರವೇ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗುತ್ತಿದೆ’ ಎಂದರು.
ಪ್ರತಿ ಮೊಬೈಲ್ ಕ್ಯಾಂಟೀನ್ ವಾಹನ ತಲಾ ₹8.50 ಲಕ್ಷ ಬೆಲೆಯದ್ದಾಗಿವೆ. ಈ ಸಂಚಾರಿ ಕ್ಯಾಂಟೀನ್ಗಳ ಒಳಾಂಗಣ ವಿನ್ಯಾಸಕ್ಕೆ
ತಲಾ ₹4.50 ಲಕ್ಷ ವಿನಿಯೋಗಿಸಲಾಗಿದೆ. ಮೊಬೈಲ್ ಕ್ಯಾಂಟೀನ್ಗಳು ಸಿ.ಸಿ ಟಿ.ವಿ ಕ್ಯಾಮೆರಾ ಒಳಗೊಂಡಿರಲಿವೆ. ವಾಹನದ ಮೇಲ್ಚಾವಣಿಗೆ ಸೋಲಾರ್ ಪ್ಯಾನೆಲ್ ಅಳವಡಿಸಿ, ವಿದ್ಯುತ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಆಹಾರ ಚೆಲ್ಲದಂತೆ ಪಾತ್ರೆಗಳನ್ನು ಜೋಡಿಸಲು ಅಗತ್ಯ ವ್ಯವಸ್ಥೆ ಸಹ ಇದೆ.
*
ಇಂದಿರಾ ಕ್ಯಾಂಟೀನ್ಗಳಿಗೆ ಸಂಬಂಧಿಸಿ ಯಾವುದೇ ದೂರುಗಳಿದ್ದರೂ ಖುದ್ದು ನನ್ನ ಗಮನಕ್ಕೆ ತರಬಹುದು. ಸಲಹೆಗಳಿದ್ದರೂ ಸ್ವೀಕರಿಸುತ್ತೇವೆ.
–ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.