ಯಾದಗಿರಿ: ಕನಿಷ್ಠ ವೇತನಕ್ಕೆ ಆಗ್ರಹಿಸಿ ಬುಧವಾರ ಜಿಲ್ಲಾ ಪಂಚಾಯಿತಿ ಎದುರು ಹಾಸ್ಟೆಲ್ಗಳಲ್ಲಿ ಸೇವೆ ಸಲ್ಲಿಸುತ್ತಿರುವ ‘ಡಿ’ ಗ್ರೂಪ್ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ‘2010 ರಿಂದ 2017 ರ ವರೆಗೆ ಪಿಎಫ್ ಮತ್ತು ಇಎಸ್ಐ ಹೆಸರಿನಲ್ಲಿ ನೌಕರರ ವೇತನದಲ್ಲಿ ಹಣ ಕಡಿತ ಮಾಡಲಾಗಿದೆ.
ಆದರೆ, ಇಲ್ಲಿಯವರೆಗೂ ನೌಕರರ ಹೆಸರಿನಲ್ಲಿ ಪಿಎಫ್ ಮತ್ತು ಇಎಸ್ಐ ಖಾತೆ ತೆರೆಯುತ್ತಿಲ್ಲ. ನೌಕಕರ ಖಾತೆಗೆ ಹಣ ಜಮಾ ಮಾಡದೆ ಇಲ್ಲಯವರೆಗೆ ವಂಚಿಸುತ್ತಾ ಬರಲಾಗಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕನಿಷ್ಠ ವೇತನ ಕಾಯ್ದೆ ನಿಯಮದಂತೆ ಮಾಸಿಕ ವೇತನ ಪೂರ್ಣ ಹಣವನ್ನು ನೌಕರರ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿ ಮಾಡಬೇಕು. ಪರಿಷ್ಕರಿಸಿದ ನೌಕರರ ಹೆಚ್ಚುವರಿ ವೇತನದ 2016 ಮತ್ತು 2017ನೇ ಸಾಲಿನ ಭತ್ತೆ ನೀಡಬೇಕು. ಶಾಸನಬದ್ಧ ಸೌಕರ್ಯ, ಇಪಿಎಫ್ ಸೌಕರ್ಯ ನೀಡಲು ನೌಕರರಿಂದ 2011ರಿಂದ 2017–18ನೇ ಸಾಲಿನವರೆಗೆ ಕಡಿತ ಮಾಡಿರುವ ಹಣವನ್ನು ನೌಕರರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಕೆ. ಸೋಮಶೇಖರ್, ಜಿಲ್ಲಾ ಅಧ್ಯಕ್ಷೆ ಡಿ. ಉಮಾದೇವಿ, ಯಲ್ಲಮ್ಮ, ಮಹ್ಮದ್, ಮಲ್ಲಪ್ಪ, ಲಕ್ಷ್ಮೀಬಾಯಿ, ದೇವಕಪ್ಪ, ಸಾಬಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.