ಹಾಸನ: ರಾಜ್ಯದಲ್ಲಿ ರಾಜಕೀಯ ಮಹಾಮೈತ್ರಿ ಸಾಧ್ಯವಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆ ವೇಳೆ ರಾಜ್ಯದಲ್ಲೂ ರಾಜಕೀಯ ಮಹಾಮೈತ್ರಿ ಆಗಲಿದೆ ಎಂಬ ಸಿಪಿಎಂ ನಾಯಕ ಸೀತಾರಾಂ ಯಚೂರಿ ಹೇಳಿಕೆಗೆ ಪ್ರತಿಕ್ರಿಯಿಸಿದರು.
ರಾಷ್ಟ್ರಮಟ್ಟದಲ್ಲಿ ಕೋಮುಶಕ್ತಿಗಳ ವಿರುದ್ಧ ಹೋರಾಡಲು ಜಾತ್ಯತೀತ ಶಕ್ತಿಗಳು ಒಂದಾಗಲಿವೆ ಎಂದು ಅವರು ಹೇಳಿದ್ದಾರೆ. ಕೋಮುವಾದಿಗಳ ವಿರುದ್ಧ ಸಮರ್ಥ ರೀತಿಯಲ್ಲಿ ಹೋರಾಡಲು ನಾವು ಶಕ್ತರಾಗಿದ್ದೇವೆ. ಮುಂದಿನ ಚುನಾವಣೆಯಲ್ಲಿ ಅದನ್ನು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಘಟನೆಗೆ ಸಚಿವ ರಮಾನಾಥ್ ರೈ ಕಾರಣ ಎಂಬ ಯಡಿಯೂರಪ್ಪ ಆರೋಪಕ್ಕೆ ಕಿಡಿಕಾರಿದರು. ಇದು ಅತ್ಯಂತ ಬೇಜವಾಬ್ದಾರಿ ಹೇಳಿಕೆ. ಅವರು ಎಂದೂ ಸತ್ಯ ಹೇಳಿಲ್ಲ ಎಂದು ತಿರುಗೇಟು ನೀಡಿದರು.
ಪ್ರಕರಣ ಸಂಬಂಧ ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ. ಕೋಮು ಸಂಘರ್ಷ ಹಿನ್ನಲೆಯಲ್ಲಿ ಸರ್ಕಾರದಿಂದ ಪರಿಹಾರವನ್ನೂ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.